ಭೀಕರ ರಸ್ತೆ ಅಪಘಾತ: ವರ ಸೇರಿದಂತೆ ನಾಲ್ವರು ಮೃತ್ಯು

Update: 2024-05-12 06:22 GMT

Photo credit: aajtak.in

ಝಾನ್ಸಿ: ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನ ಸಿಎನ್ಜಿ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವರ ಹಾಗೂ 11 ವರ್ಷದ ಬಾಲಕನೊಬ್ಬ ಸೇರಿದಂತೆ ನಾಲ್ವರು ಸಜೀವ ದಹನವಾಗಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ತಡರಾತ್ರಿ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.

ಕಾರಿನ ಹಿಂಬದಿಗೆ ಟ್ರಕ್ ಒಂದು ಢಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಬದಿಯಲ್ಲಿ ಜೋಡಿಸಲಾಗಿದ್ದ ಸಿಎನ್ಜಿ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಬೆಂಕಿ ಹೊತ್ತಿಕೊಂಡು ಈ ಘಟನೆ ಸಂಭವಿಸಿದೆ.

ಈ ಸಂದರ್ಭ ನಾಲ್ಕು ಮಂದಿ ಸಜೀವ ದಹನಗೊಂಡಿದ್ದರೆ, ಉಳಿದಿಬ್ಬರು ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಮೃತರನ್ನು ವರ ಆಕಾಶ್ ಅಹಿವಾರ್ (24), ಆತನ ಸೋದರ ಸಂಬಂಧಿ ಮಾಯಾಂಕ್, ಆಕಾಶ್ ನ ಸೋದರ ಆಶಿಶ್ (26) ಹಾಗೂ ಚಾಲಕ ಜಯ್ ಕರಣ್ ಎಂದು ಗುರುತಿಸಲಾಗಿದೆ. ಪೊಲೀಸರು ಗಾಯಾಳುಗಳನ್ನು ಝಾನ್ಸಿ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಜ್ಞಾನೇಂದ್ರ ಕುಮಾರ್ ಸಿಂಗ್, “ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದು, ಘಟನಾ ಸ್ಥಳದಿಂದ ಪರಾರಿಯಾಗಿರುವ ಟ್ರಕ್ ಚಾಲಕನನ್ನು ಬಂಧಿಸಲು ಶೋಧ ಕಾರ್ಯ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News