ಪಶ್ಚಿಮ ಬಂಗಾಳದಲ್ಲಿ ಆನೆಗೆ ಬೆಂಕಿ ಹಚ್ಚಿದ ಕೃತ್ಯಕ್ಕೆ ಭಾರೀ ಆಕ್ರೋಶ

Update: 2024-08-19 14:32 GMT

phto : x

ಹೊಸದಿಲ್ಲಿ : ಪಶ್ಚಿಮ ಬಂಗಾಳದ ಝಾರ್ಗ್ರಾಮದಲ್ಲಿ ಜನರು ಹೆಣ್ಣಾನೆಯೊಂದಕ್ಕೆ ಬೆಂಕಿ ಹಚ್ಚಿದ ನಂತರ ಅದು ಒದ್ದಾಡುತ್ತ ಸಾಯುತ್ತಿರುವುದನ್ನು ತೋರಿಸಿರುವ ವೈರಲ್ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶವನ್ನು ಹುಟ್ಟುಹಾಕಿದೆ. ಕೆಲವರ ಪ್ರಕಾರ ಈ ಆನೆ ಗರ್ಭವನ್ನು ಧರಿಸಿತ್ತು ಎನ್ನಲಾಗಿದೆ.

ಉರಿಯುತ್ತಿರುವ ದೊಂದಿಯನ್ನು ಕಟ್ಟಿದ್ದ ಮೊನಚಾದ ಕಬ್ಬಿಣದ ಸರಳುಗಳನ್ನು ಸಮೀಪದ ಮನೆಯೊಂದರಿಂದ ಆನೆಯತ್ತ ಎಸೆದ ಬಳಿಕ ಅದು ನೋವಿನಿಂದ ನರಳುತ್ತಿರುವುದನ್ನು ವೈರಲ್ ವೀಡಿಯೊ ತೋರಿಸಿದೆ. ಇನ್ನೊಂದು ವೀಡಿಯೊದಲ್ಲಿ ಗ್ರಾಮಸ್ಥರ ಗುಂಪೊಂದು ಉರಿಯುತ್ತಿರುವ ಸರಳುಗಳನ್ನು ಹಿಡಿದುಕೊಂಡು ಯಮಯಾತನೆ ಅನುಭವಿಸುತ್ತಿದ್ದ ಆನೆಗೆ ಬೆಂಕಿ ಹಚ್ಚುತ್ತಿರುವುದು ಕಂಡುಬಂದಿದೆ.

ಪಶ್ಚಿಮ ಬಂಗಾಳದ ಅರಣ್ಯ ಸಚಿವೆ ಬಿರ್ಬಾಹಾ ಹನ್ಸದಾ ಅವರು ವೈರಲ್ ವೀಡಿಯೊಕ್ಕೆ ಪ್ರತಿಕ್ರಿಯಿಸಿಲ್ಲ. ಆದರೆ ಹಿರಿಯ ಅರಣ್ಯ ಅಧಿಕಾರಿಯೋರ್ವರು ‘ನಾವು ಘಟನೆಯ ಬಗ್ಗೆ ಕೇಳಿದ್ದೇವೆ ಮತ್ತು ವೀಡಿಯೊವನ್ನು ನೋಡಿದ್ದೇವೆ. ನಾವು ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆ ’ ಎಂದು ಸುದ್ದಿಸಂಸ್ಥೆಗೆ ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಈ ಘಟನೆಯನ್ನು ಖಂಡಿಸಿದ್ದು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

‘ಝಾರ್ಗ್ರಾಮದಲ್ಲಿ ಅರಣ್ಯಾಧಿಕಾರಿಗಳ ಎದುರೇ ‘ಹುಲ್ಲಾ ಪಾರ್ಟಿಗಳು(ಪಟ್ಟಣಗಳು ಮತ್ತು ಗ್ರಾಮಗಳಿಂದ ಆನೆಗಳನ್ನು ಓಡಿಸಲು ಅರಣ್ಯ ಇಲಾಖೆಯಿಂದ ನೇಮಕಗೊಂಡ ತಂಡಗಳು)’ ತಾಯಿ ಆನೆಯನ್ನು ದಯನೀಯವಾಗಿ ಕೊಂದಿವೆ. ಈ ಕ್ರೂರ ಕೃತ್ಯವು ತಕ್ಷಣದ ಕ್ರಮವನ್ನು ಅಪೇಕ್ಷಿಸಿದೆ. ಪೆಟ್ ಇಂಡಿಯಾ ಈ ಬಗ್ಗೆ ಕಾಳಜಿ ವಹಿಸುವುದೇ?’ ಎಂದು ಓರ್ವ ಬಳಕೆದಾರ ಬರೆದಿದ್ದರೆ, ಅರಣ್ಯ ಇಲಾಖೆ ಅಧಿಕಾರಿಗಳ ನೆರವಿನೊಂದಿಗೆ ಹೆಣ್ಣಾನೆಯನ್ನು ಅತ್ಯಂತ ಕ್ರೂರವಾಗಿ ಕೊಲ್ಲಲಾಗಿದೆ. ದಯವಿಟ್ಟು ಈ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಿ ’ಎಂದು ಇನ್ನೋರ್ವ ಬಳಕೆದಾರರು ಬರೆದಿದ್ದಾರೆ.

ಆ.15ರಂದು ಕೆಲವು ಅಮಾನವೀಯ ವ್ಯಕ್ತಿಗಳು ಗರ್ಭ ಧರಿಸಿದ್ದ ಆನೆಯ ಶರೀರದಲ್ಲಿ ಉರಿಯುತ್ತಿದ್ದ ಸರಳನ್ನು ತೂರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ರಾಕ್ಷಸರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮಗದೋರ್ವ ಬಳಕೆದಾರರು ಆಗ್ರಹಿಸಿದ್ದಾರೆ.

ಬೀದಿನಾಯಿಗಳಿಗೆ ಕಿರುಕುಳ ಕುರಿತು ‘ಪರಿಯಾ’ ಚಿತ್ರವನ್ನು ಮಾಡಿದ್ದ ನಿರ್ದೇಶಕ ತಥಾಗತ ಮುಖರ್ಜಿಯವರು ಫೇಸ್ಬುಕ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು,ಅರಣ್ಯ ಸಚಿವರ ಕ್ಷೇತ್ರದಲ್ಲಿಯೇ ಖಾಸಗಿ ಹುಲ್ಲಾ ಪಾರ್ಟಿಯು ಗರ್ಭ ಧರಿಸಿದ್ದ ಆನೆಯನ್ನು ಕೊಂದಿದೆ. ಪ್ರತಿಯೊಬ್ಬರೂ ಮೌನವಾಗಿದ್ದಾರೆ ಎಂದು ಹೇಳಿದ್ದಾರೆ.

ನಟಿ ಶ್ರೀಲೇಖಾ ಮಿತ್ರಾ ಕೂಡ ಫೇಸ್ ಬುಕ್ ನಲ್ಲಿ ಆಘಾತವನ್ನು ವ್ಯಕ್ತಪಡಿಸಿದ್ದು,‘ನಾವು ವಿನಾಶದತ್ತ ಸಾಗುತ್ತಿದ್ದೇವೆಯೇ? ಪ್ರಾಣಿಗಳ ಮೇಲೆ ಇಂತಹ ಹಿಂಸೆ ಮತ್ತು ಆಕ್ರಮಣವನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಕಿಡಿಕಾರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News