ಜಮ್ಮು ಕಾಶ್ಮೀರ | ಗೆಲುವಿನ ಹಳಿಗೆ ಮರಳಿದ ʼಸಿಎಂʼ ಉಮರ್ ಅಬ್ದುಲ್ಲಾ

Update: 2024-10-08 13:09 GMT

ಫಾರೂಕ್ ಅಬ್ದುಲ್ಲಾ , ಉಮರ್ ಅಬ್ದುಲ್ಲಾ | PC : ANI 

ಶ್ರೀನಗರ : ಲೋಕಸಭೆ ಚುನಾವಣೆ ಹೀನಾಯವಾಗಿ ಸೋತು ಮನೆ ಸೇರಿದ್ದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಮತ್ತೆ ಯಶಸ್ಸು ಕಂಡಿದ್ದಾರೆ. ಮತ್ತೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗುವ ಅವರ ಕನಸು ನನಸಾಗಿದೆ. ತಿಂಗಳ ಹಿಂದೆ ತಮ್ಮ ರಾಜಕೀಯ ಜೀವನದ ಅತೀ ಹೀನಾಯ ಸೋಲು ಅನುಭವಿಸಿದ್ದ ಉಮರ್ ಅಬ್ದುಲ್ಲಾ ಮತ್ತೆ ಗೆದ್ದು ಬೀಗಿದ್ದಾರೆ.

"ಜಮ್ಮು ಕಾಶ್ಮೀರದ ಮುಂದಿನ ಸಿಎಂ ಉಮರ್ ಅಬ್ದುಲ್ಲಾ", ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ , ಉಮರ್ ಅವರ ತಂದೆ ಫಾರೂಕ್ ಅಬ್ದುಲ್ಲಾ ಘೋಷಣೆ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾ ಷನಲ್ ಕಾನ್ಫೆರೆನ್ಸ್ - ಕಾಂಗ್ರೆಸ್ ಮೈತ್ರಿ 48 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ ಮತ್ತು ಬಿಜೆಪಿ 29 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಮೆಹಬೂಬ ಮುಫ್ತಿ ಅವರ ಪಿಡಿಪಿ ಕೇವಲ 3 ಸೀಟುಗಳಲ್ಲಿ ಮತ್ತು ಇತರರು 8 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಿಂದ ಲೋಕ ಸಭಾ ಚುನಾವಣೆ ಸೋತಿದ್ದ ಉಮರ್ ಈಗ ಸ್ಪರ್ಧಿಸಿದ ಎರಡೂ ವಿಧಾನ ಸಭಾ ಕ್ಷೇತ್ರಗಳಲ್ಲಿ ಗೆದಿದ್ದಾರೆ. ಉಮರ್ ಅಬ್ದುಲ್ಲಾ ಬುದ್ಗಾಮ್ ಮತ್ತು ಗಂದರ್ಬಾಲ್ ಕ್ಷೇತ್ರಗಳಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಚುನಾವಣಾ ಪ್ರಚಾರದ ವೇಳೆ ನನ್ನ ಟೋಪಿ ನನ್ನ ಮಾನ ಎಲ್ಲವೂ ನಿಮ್ಮ ಕೈಯಲ್ಲಿದೆ ಎಂದು ಹೇಳಿದ್ದ ಉಮರ್ ಅಬ್ದುಲ್ಲಾ ಅವರ ಪರ ಕಾಶ್ಮೀರದ ಜನರು ನಿಂತು ಕೊಂಡಿದ್ದಾರೆ.

16 ವರ್ಷದ ಬಳಿಕ ನಾನು ನಿಮ್ಮ ಬಳಿ ಬಂದಿದ್ದೇನೆ. ನಾನು ನಿಮ್ಮ ಸೇವಕ, ನಿಮ್ಮ ನೌಕರ, ನಿಮ್ಮ ಶಾಸಕನಾಗಿ ನಿಮ್ಮ ಸೇವೆ ಮಾಡುವ ಮತ್ತೊಂದು ಅವಕಾಶ ನನಗೆ ಕೊಡಿ ಎಂದು ಬೇಡಿಕೊಂಡಿದ್ದ ಉಮರ್ ಅಬ್ದುಲ್ಲಾ ಮೇಲೆ ಜನ ತಮ್ಮ ವಿಶ್ವಾಸ ಇರಿಸಿದ್ದಾರೆ.

ಅಬ್ದುಲ್ಲಾ ಕುಟುಂಬಕ್ಕೆ ಮೂರು ತಲೆಮಾರುಗಳಿಂದ ಗಂದೇರ್ಬಾಲ್ ಕ್ಷೇತ್ರ ಭದ್ರಕೋಟೆಯಾಗಿದೆ. ಎನ್‌ಸಿ ಸಂಸ್ಥಾಪಕ ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರು 1977 ರಲ್ಲಿ ಈ ಕ್ಷೇತ್ರದಲ್ಲಿ ಗೆದ್ದಿದ್ದರು. ನಂತರ ಅವರ ಮಗ ಫಾರೂಕ್ ಅಬ್ದುಲ್ಲಾ ಅವರು 1983, 1987 ಮತ್ತು 1996 ರಲ್ಲಿ ಜಯಗಳಿಸಿದರು. ನಂತರ ಉಮರ್ ಅಬ್ದುಲ್ಲಾ ಅವರು 2008 ರಲ್ಲಿ ಇದೇ ಕ್ಷೇತ್ರದಿಂದ ಗೆದ್ದಿದ್ದರು.

ಬುದ್ಗಾಮ್‌ನಲ್ಲಿ ಉಮರ್ ಅಬ್ದುಲ್ಲಾ ಅವರು ಪಿಡಿಪಿಯ ಅಗಾ ಸೈಯದ್ ಮುಂತಜೀರ್ ಮೆಹದಿ ಮತ್ತು ಅವಾಮಿ ನ್ಯಾಷನಲ್ ಕಾನ್ಫರೆನ್ಸ್‌ನ ಅಗಾ ಸೈಯದ್ ಅಹ್ಮದ್ ಮೂಸ್ವಿ ಸೇರಿದಂತೆ 7 ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ನಾಶೆನಲ್ ಕಾನ್ಫೆರೆನ್ಸ್ ಮೈತ್ರಿ ಯಶಸ್ಸು ಕಂಡಿದೆ. ಕಾಶ್ಮೀರದ ಜನರ ನಡುವೆ ರಾಹುಲ್ ಗಾಂಧಿಗೆ ಭಾರೀ ಜನಪ್ರಿಯತೆ ಇದೆ ಎಂಬ ಮಾತು ನಿಜ ಎಂದು ಸಾಬೀತಾಗಿದೆ. ಭಾರತ್ ಜೋಡೋ ಯಾತ್ರೆಯ ಸಮಾರೋಪವನ್ನೂ ರಾಹುಲ್ ಗಾಂಧಿ ಶ್ರೀನಗರದಲ್ಲೇ ಮಾಡಿದ್ದು ಅದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತ್ತು. ಆಮೇಲೆಯೂ ರಾಹುಲ್ ಗಾಂಧಿ ಕಾಶ್ಮೀರಕ್ಕೆ ಹೋದಾಗಲೆಲ್ಲ ಅವರಿಗೆ ಭಾರೀ ಜನ ಬೆಂಬಲ ವ್ಯಕ್ತವಾಗುತ್ತಿತ್ತು.

ಬಿಜೆಪಿ ಜಮ್ಮುವಿನಲ್ಲಿ ಯಶಸ್ಸು ಕಂಡರೂ ಕಾಶ್ಮೀರಿ ಕಣಿವೆಯಲ್ಲಿ ಮತ್ತೆ ನಿರಾಶೆಯನ್ನು ಎದುರಿಸಬೇಕಾಗಿ ಬಂದಿದೆ. ಆರ್ಟಿಕಲ್ 370 ರದ್ದತಿಯನ್ನು ಕಾಶ್ಮೀರೀ ಜನ ಒಪ್ಪಿಕೊಂಡಿಲ್ಲ ಎಂದು ಚುನಾವಣಾ ಫಲಿತಾಂಶದಿಂದ ತೋರುತ್ತಿದೆ. ಫಾರೂಕ್ ಅಬ್ದುಲ್ಲಾ ಇದನ್ನೇ ಹೇಳಿದ್ದಾರೆ.

ಜಮ್ಮು ಕಾಶ್ಮೀರದ ವಿಧಾನಸಭಾ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟ ಮುನ್ನಡೆ ಪಡೆಯುತ್ತಿದ್ದಂತೆ ಮಾಧ್ಯಮದೊಂದಿಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ, “ಜನರು ತಮ್ಮ ಜನಾದೇಶವನ್ನು ನೀಡಿದ್ದಾರೆ, ಅವರು 2019ರ ಆಗಸ್ಟ್ 5 ರಂದು ತೆಗೆದುಕೊಂಡ ನಿರ್ಧಾರವನ್ನು ಒಪ್ಪುವುದಿಲ್ಲ ಎಂದು ಅವರು ಸಾಬೀತುಪಡಿಸಿದ್ದಾರೆ”, ಎಂದು ಹೇಳಿದ್ದಾರೆ.

ಇದೆ ವೇಳೆ ಉಮರ್ ಅಬ್ದುಲ್ಲಾ ವಿರುದ್ಧ ಬಾರಾಮುಲ್ಲಾ ದಿಂದ ಲೋಕಸಭಾ ಚುನಾವಣೆ ಗೆದ್ದಿದ್ದ ಶೇಖ್ ಅಬ್ದುರ್ ರಶೀದ್ ಅಲಿಯಾಸ್ ಇಂಜಿನಿಯರ್ ರಶೀದ್ ಪಕ್ಷಕ್ಕೆ ಭಾರೀ ನಿರಾಶೆಯಾಗಿದೆ. ಬಾರಾಮುಲ್ಲಾ ದಲ್ಲಿ ಇಂಜಿನಿಯರ್ ರಶೀದ್ ಗೆದ್ದರೂ ಅಲ್ಲಿನ ಜನರಿಗೆ ಸಂಸದ ಸಿಗೋದಿಲ್ಲ, ಅವರು ಜೈಲ್ಲಲ್ಲಿ ಇರ್ತಾರೆ ಹಾಗಾಗಿ ಜನರಿಗೆ ಜನಪ್ರತಿನಿಧಿ ಇಲ್ಲದ ಹಾಗಾಗುತ್ತೆ ಎಂದು ಉಮರ್ ಅಬ್ದುಲ್ಲಾ ತಾನು ಸೋತ ಬಳಿಕ ಹೇಳಿದ್ದರು. ಅದನ್ನು ಜನ ಅರ್ಥಮಾಡಿಕೊಂಡ ಹಾಗೆ ಕಾಣುತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೈಲಿನಿಂದಲೇ ಸ್ಪರ್ಧಿಸಿ ಎರಡು ಲಕ್ಷ ಮತಗಳ ಅಂತರದಿಂದ ಉಮರ್ ಅಬ್ದುಲ್ಲಾ ಅವರನ್ನು ಸೋಲಿಸಿದ್ದ ಇಂಜಿನಿಯರ್ ರಶೀದ್ ಈ ಬಾರಿ ಚುನಾವಣಾ ಪ್ರಚಾರಕ್ಕಾಗಿಯೇ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರೂ ಯಾವುದೇ ಪ್ರಭಾವ ಬೀರುವುದರಲ್ಲಿ ವಿಫಲರಾಗಿದ್ದಾರೆ. ರಶೀದ್ ಜಾಮೀನು ಬಿಡುಗಡೆ ಬಿಜೆಪಿಗೆ ಲಾಭವುಂಟು ಮಾಡುವ ಉದ್ದೇಶ ಹೊಂದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಆರೋಪವನ್ನು ಕಾಶ್ಮೀರಿ ಜನತೆ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿದೆ. ಸಾಮಾನ್ಯವಾಗಿ ಯು ಎ ಪಿ ಎ ಅಡಿಯಲ್ಲಿ ಬಂಧಿತ ವ್ಯಕ್ತಿಗೆ ಸಿಗದ ಜಾಮೀನು ಚುನಾವಣಾ ಪ್ರಚಾರಕ್ಕಾಗಿ ಯಾಕೆ ಜಾಮೀನು ನೀಡಲಾಗಿದೆ ಎಂಬ ಪ್ರಶ್ನೆಯನ್ನು ಕಾಶ್ಮೀರಿ ಜನತೆ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿದೆ.

ಲೋಕಸಭಾ ಚುನಾವಣೆಯಲ್ಲಿ 14 ವಿಧಾನ ಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದ ಇಂಜಿನಿಯರ್ ರಶೀದ್ ಅವರ ಅವಾಮಿ ಇತ್ತೆಹಾದ್ ಪಾರ್ಟಿ ವಿಧಾನ ಸಭಾ ಚುನಾವಣೆಯಲ್ಲಿ ಯಾವುದೇ ಸೀಟ್ ಗೆಲ್ಲುವುದರಲ್ಲಿ ಯಶಸ್ಸು ಕಂಡಿಲ್ಲ.

ಉಮರ್ ಅಬ್ದುಲ್ಲಾ ಜನರ ನಡುವೆ ಬಹಳ ಬೆರೆಯುವ ಸರಳ ವ್ಯಕ್ತಿತ್ವದ ರಾಜಕಾರಣಿಯಲ್ಲ. ಕಾಶ್ಮೀರದಲ್ಲಿ ಹಾಗೆ ಬೆರೆಯುವುದು ಸುಲಭವೂ ಅಲ್ಲ. ಆದರೂ ಉಮರ್ ಅಬ್ದುಲ್ಲಾ ಹಾಗು ಅವರ ತಂದೆ ಜನಸಾಮಾನ್ಯರ ಕೈಗೆ ಸಿಗದೇ ಅರಮನೆಯಲ್ಲಿದ್ದೇ ರಾಜಕಾರಣ ಮಾಡಿಕೊಂಡು ಅಧಿಕಾರ ಅನುಭವಿಸಿಕೊಂಡು ಬಂದವರು ಎಂಬ ಇಮೇಜ್ ಹೊಂದಿದ್ದಾರೆ.

ಈ ಬಾರಿ ಅದಕ್ಕಾಗಿಯೇ ಉಮರ್ ಜನರೆದುರು ಹೋಗುವಾಗ ತೀರಾ ವಿನೀತರಾಗಿ ನನಗೊಂದು ಅವಕಾಶ ಕೊಡಿ, ನನ್ನ ಗೌರವ ನಿಮ್ಮ ಕೈಯಲ್ಲಿದೆ, ಎಂದೇ ಬೇಡಿಕೊಂಡಿದ್ದರು. ಅದನ್ನು ಜನ ಸ್ವೀಕರಿಸಿದ್ದಾರೆ. ಅವರಿಗೆ ಮತ್ತೊಂದು ಅವಕಾಶ ಕೊಟ್ಟಿದ್ದಾರೆ. ಈ ಅವಕಾಶದಲ್ಲಿ ಅವರೆಷ್ಟು ಜನಪರವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂಬ ಕುತೂಹಲ ಕಾಶ್ಮೀರ ಜನತೆಯಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News