ರೈತರ ಪ್ರತಿಭಟನೆಯನ್ನು ಬಾಂಗ್ಲಾಕ್ಕೆ ಹೋಲಿಸಿದ ಕಂಗನಾ ರಣಾವತ್: ಹರಿಯಾಣ ಬಿಜೆಪಿಯಲ್ಲಿ ಅಸಮಾಧಾನ

Update: 2024-08-26 07:07 GMT

Photo: ANI

ಹೊಸದಿಲ್ಲಿ: ಮಂಡಿ ಸಂಸದೆ ಮತ್ತು ಬಿಜೆಪಿ ನಾಯಕಿ ಕಂಗನಾ ರಣಾವತ್ ರೈತರ ಪ್ರತಿಭಟನೆಯನ್ನು ಬಾಂಗ್ಲಾದೇಶದ ಅಶಾಂತಿಗೆ ಹೋಲಿಸಿ, ಸರಕಾರ ಬಲವಾದ ಕ್ರಮಗಳನ್ನು ಕೈಗೊಳ್ಳದಿದ್ದರೆ ಬಾಂಗ್ಲಾದೇಶದ ಪರಿಸ್ಥಿತಿ ಭಾರತಕ್ಕೆ ಬರಬಹುದು ಎಂದು ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಕಂಗನಾ ರೈತರ ಪ್ರತಿಭಟನೆಯ ಸಂದರ್ಭದಲ್ಲಿ, ಶವಗಳನ್ನು ನೇಣು ಹಾಕುವುದು ಮತ್ತು ಅತ್ಯಾಚಾರ ಪ್ರಕರಣಗಳು ನಡೆದ ಉದಾಹರಣೆಗಳಿವೆ ಎಂದು ರಣಾವತ್ ‌ ಆರೋಪಿಸಿದ್ದಾರೆ. ರೈತರ ಪ್ರತಿಭಟನೆಗಳಿಗೆ ವಿದೇಶಿ ಶಕ್ತಿಗಳ ಉತ್ತೇಜನವಿದೆ ಎಂದು ಅವರು ಹೇಳಿರುವುದು ರೈತರನ್ನು ಕೆರಳಿಸಿದೆ.

ಬಿಜೆಪಿ ಮೂಲಗಳ ಪ್ರಕಾರ, ಕಂಗನಾ ಅವರ ಹೇಳಿಕೆ ಚುನಾವಣೆಯ ಹೊಸ್ತಿಲಲ್ಲಿರುವ ಹರಿಯಾಣ ಬಿಜೆಪಿ ಗೆ ಅರಗಿಸಿಕೊಳ್ಳಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬಿಜೆಪಿ ನಾಯಕರೊಬ್ಬರು, "ನಾವು ಈ ವಿಚಾರವನ್ನು ಉನ್ನತ ನಾಯಕರ ಗಮನಕ್ಕೆ ತಂದಿದ್ದೇವೆ" ಎಂದು ಹೇಳಿದರು. ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ರಾಜ್ಯದ ರೈತರಿಂದ ವಿರೋಧ ಎದುರಿಸಿದ್ದರು.

ಕಂಗನಾ ರಣಾವತ್ ಅವರ ಹೇಳಿಕೆಗಳು ರೈತರ ಕೋಪವನ್ನು ಮತ್ತೆ ಹೆಚ್ಚಿಸಬಹುದು ಮತ್ತು ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಬಿಜೆಪಿ ನಾಯಕರು ಆತಂಕಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. “ಆಕೆ ಹರಿಯಾಣದ ನಾಯಕಿಯೂ ಅಲ್ಲ. ಆಕೆ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಅಗತ್ಯವಿರಲಿಲ್ಲ", ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.

ಬಿಜೆಪಿ ರಾಜ್ಯ ಮುಖ್ಯಸ್ಥ ಮೋಹನ್ ಲಾಲ್ ಬಡೋಲಿ ಅವರು ವೀಡಿಯೊ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ವಿಡಿಯೋ ವೀಕ್ಷಿಸಿದ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.

BKU (ಶಹೀದ್ ಭಗತ್ ಸಿಂಗ್) ನ ವಕ್ತಾರ ತೇಜ್ವೀರ್ ಸಿಂಗ್, ರಣಾವತ್ ಅವರಿಗೆ ಪ್ರಚಾರದ ಹುಚ್ಚು. ಅದಕ್ಕೆ ಟೀಕೆಗಳನ್ನು ಮಾಡುತ್ತಾರೆ. ಮಣಿಪುರದಂತಹ ಮಾನವ ಹಕ್ಕುಗಳ ವಿಷಯಗಳ ಬಗ್ಗೆ ಅವರು ಮೌನ ತಾಳಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News