ʼಕೇರಳ ಸ್ಟೋರಿʼ ಚಿತ್ರ ಪ್ರದರ್ಶನವು ಮುಸ್ಲಿಮರು ಬಿಜೆಪಿಯಿಂದ ದೂರ ಸರಿಯುವಂತೆ ಮಾಡಿದೆ: ಕೇರಳದ ಬಿಜೆಪಿ ಅಭ್ಯರ್ಥಿ

Update: 2024-04-14 15:44 GMT

Dr M Abdul Salam |PC |  Facebook

ಮಲಪ್ಪುರಂ: ಕೇರಳದಲ್ಲಿ ಲೋಕಸಭಾ ಚುನಾವಣೆಗೆ ಬಿಜೆಪಿಯ ಏಕೈಕ ಮುಸ್ಲಿಮ್ ಅಭ್ಯರ್ಥಿಯಾಗಿರುವ ಎಂ. ಅಬ್ದುಲ್ ಸಲಾಂ ಅವರು ಪಕ್ಷದ ಚುನಾವಣಾ ಕಾರ್ಯತಂತ್ರದಿಂದ ಹತಾಶಗೊಂಡಿದ್ದಾರೆ. ಚುನಾವಣಾ ಸಮಯದಲ್ಲಿ ವಿವಾದಾತ್ಮಕ ಚಿತ್ರ ‘ದಿ ಕೇರಳ ಸ್ಟೋರಿ’ಯ ಪ್ರದರ್ಶನ ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯಂತಹ ವಿಷಯಗಳ ಕುರಿತು ತನ್ನ ನಿಲುವನ್ನು ಸೂಕ್ತವಾಗಿ ಜನರಿಗೆ ತಿಳಿಸುವಲ್ಲಿ ಪಕ್ಷದ ಅಸಾಮರ್ಥ್ಯವು ಮುಸ್ಲಿಮರು ಬಿಜೆಪಿಯಿಂದ ದೂರವಿರುವಂತೆ ಮಾಡಿವೆ ಎಂದು ಅವರು ಹೇಳಿದ್ದಾರೆ.

‘ಈ ಚುನಾವಣಾ ಸಮಯದಲ್ಲಿ ‘ದಿ ಕೇರಳ ಸ್ಟೋರಿ’ಪ್ರದರ್ಶನವು ಮುಸ್ಲಿಮರು ಬಿಜೆಪಿಯಿಂದ ಇನ್ನಷ್ಟು ದೂರ ಸರಿಯುವಂತೆ ಮಾಡುತ್ತದೆ, ಅಷ್ಟೇ. ಭಾರತದಲ್ಲಿ 20 ಕೋಟಿ ಗೂ.ಅಧಿಕ ಮುಸ್ಲಿಮರಿದ್ದಾರೆ. ನಾವು ಅವರನ್ನು ಮುಖ್ಯವಾಹಿನಿಯಿಂದ ದೂರವಿರಿಸಬಾರದು. ಆಡಳಿತವನ್ನು ಹಂಚಿಕೊಳ್ಳಲು ಅವರು ಮುಖ್ಯವಾಹಿನಿಯಲ್ಲಿರುವುದು ಅಗತ್ಯವಾಗಿದೆ’ ಎಂದು ಮಲಪ್ಪುರಮ್ನಲ್ಲಿ ತನ್ನ ಚುನಾವಣಾ ಪ್ರಚಾರದ ನೇಪಥ್ಯದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಲಾಂ ಹೇಳಿದರು.

ಪಾಲಕ್ಕಾಡ್ ನಲ್ಲಿ ನಡೆದಿದ್ದ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋದಲ್ಲಿ ಅವರೊಂದಿಗಿರಲು ತನಗೆ ಅನುಮತಿ ನಿರಾಕರಿಸಲ್ಪಟ್ಟ ಬಳಿಕ ಉಂಟಾಗಿರುವ ವಿವಾದದ ಕುರಿತು ಮಾತನಾಡಿದ ಅವರು, ಈ ಘಟನೆಯು ಪಕ್ಷಕ್ಕೆ ಬಹಳಷ್ಟು ಹಾನಿಯನ್ನುಂಟು ಮಾಡಿದೆ ಎಂದರು. ‘ಬಿಜೆಪಿಯ ರಾಜ್ಯ ನಾಯಕತ್ವವು ಇಂತಹ ಘಟನೆಯನ್ನು ತಪ್ಪಿಸಬಹುದಿತ್ತು. ಆದಾಗ್ಯೂ, ಈಗಲೂ ನಾನು ನನ್ನ ಪಕ್ಷವನ್ನು ಸಮರ್ಥಿಸುತ್ತೇನೆ’ ಎಂದರು.

ಅಧಿಕೃತ ಆಹ್ವಾನದ ಮೇರೆಗೆ ರೋಡ್ ಶೋದಲ್ಲಿ ಪ್ರಧಾನಿ ಮೋದಿ ಅವರ ಜೊತೆಯಲ್ಲಿರಲು ಸಲಾಂ ಪಾಲಕ್ಕಾಡ್ ಗೆ ತಲುಪಿದ ಬಳಿಕ ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು.

ಈ ಘಟನೆಯ ಬಳಿಕ ಪ್ರತಿಪಕ್ಷಗಳು, ಸಲಾಂ ಮುಸ್ಲಿಮ್ ಸಮುದಾಯಕ್ಕೆ ಸೇರಿದ್ದರಿಂದ ಅವರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು ಎಂದು ಪ್ರಚಾರ ಮಾಡಿದ್ದವು.

‘ಮುಸ್ಲಿಮ್ ಪ್ರಾಬಲ್ಯವಿರುವ ಮಲಪ್ಪುರಂ ಕ್ಷೇತ್ರದಲ್ಲಿ ಮತಗಳನ್ನು ಗಳಿಸಲು ಈಗಿನ ಪ್ರಚಾರ ಸಾಲುವುದಿಲ್ಲ. ನಾನು ಈಗಾಗಲೇ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 2-3 ಸುತ್ತುಗಳ ಪ್ರಚಾರವನ್ನು ಪೂರ್ಣಗೊಳಿಸಿದ್ದೇನೆ. ಆದರೆ ಇತರ ಪಕ್ಷಗಳಿಗೆ ಹೋಲಿಸಿದರೆ ನಮ್ಮ ಪ್ರಚಾರವು ದುರ್ಬಲವಾಗಿದೆ. ಬಿಜೆಪಿಯ ಪ್ರಚಾರ ತಂಡವು ಉತ್ತಮ ತರಬೇತಿ ಪಡೆದಿಲ್ಲ ಮತ್ತು ಅಸಮರ್ಥವಾಗಿದೆ. ಅವರ ಬಳಿ ಸೂಕ್ತ ಕಾರ್ಯತಂತ್ರವಿಲ್ಲ’ ಎಂದು ಹೇಳಿದ ಸಲಾಂ, ‘ಕಳೆದ 39 ದಿನಗಳಲ್ಲಿ ನನ್ನನ್ನು ಬಿಜೆಪಿ ಬೆಂಬಲಿಗರ ಮನೆಗಳಿಗೆ ಕರೆದೊಯ್ಯಲಾಗಿದೆ. ಇತರ ಜನರ ಬಳಿಗೆ ಹೋಗಲು ಅವರು ಹೆದರುತ್ತಾರೆ. ಬಿಜೆಪಿಯೇತರ ಮತದಾರರನ್ನೂ ತಲುಪುವ ಅಗತ್ಯವಿದೆ. ಮಲಪ್ಪುರಮ್ ನಲ್ಲಿಯ ಬಿಜೆಪಿ ಪಾಳಯವು ಬಿಜೆಪಿಯೇತರ ಮತ್ತು ಮುಸ್ಲಿಮ್ ಮತದಾರರನ್ನು ಸಂಪರ್ಕಿಸುವುದರಿಂದ ಹಿಂದೆ ಸರಿಯುತ್ತಿದೆ’ ಎಂದರು.

‘ಈದ್ ಸಂದರ್ಭದಲ್ಲಿ ಮುಸ್ಲಿಮರ ಮನೆಗಳಿಗೆ ಏಕೆ ಭೇಟಿ ನೀಡಲಿಲ್ಲ ಎಂದು ವ್ಯಕ್ತಿಯೋರ್ವರು ನನ್ನನ್ನು ಪ್ರಶ್ನಿಸಿದ್ದರು. ಕ್ರಿಸ್ಮಸ್ ಸಂದರ್ಭದಲ್ಲಿ ಕ್ರಿಶ್ಚಿಯನ್ನರ ಮನೆಗಳಿಗೆ ನಾವು ಭೇಟಿ ನೀಡಿದ್ದೆವು. ಇದು ಏನನ್ನು ಸೂಚಿಸುತ್ತದೆ ಎಂದೂ ಜನರು ನನ್ನನ್ನು ಪ್ರಶ್ನಿಸಿದ್ದಾರೆ ’ ಎಂದು ಹೇಳಿದ ಸಲಾಂ,ಬಿಜೆಪಿ ಏಕೆ ಒಬ್ಬನೇ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂಬ ಪ್ರಶ್ನೆಯೂ ತನಗೆ ಎದುರಾಗುತ್ತಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News