ಲಕ್ಷದ್ವೀಪದಲ್ಲಿ ಪ್ರಧಾನಿ ಮೋದಿ ಭೇಟಿ ಹೊರತಾಗಿಯೂ ಎನ್ ಡಿಎ ಅಭ್ಯರ್ಥಿಗೆ ಕೇವಲ 201 ಮತ!

Update: 2024-06-08 06:39 GMT

ನರೇಂದ್ರ ಮೋದಿ |  PC : PTI 

ತಿರುವನಂತಪುರಂ: ಮುಸ್ಲಿಂ ಮತಬ್ಯಾಂಕ್ ಓಲೈಸುವ ಪ್ರಯತ್ನವಾಗಿ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಲಕ್ಷದ್ವೀಪ ಲೋಕಸಭಾ ಕ್ಷೇತ್ರದಿಂದ ಮುಸ್ಲಿಂ ಪಂಡಿತರೊಬ್ಬರನ್ನು ಎನ್ ಡಿಎ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದರು. ಆದರೆ ಈ ಪ್ರಯತ್ನ ವಿಫಲವಾಗಿ, ಎನ್ ಡಿಎ ಅಭ್ಯರ್ಥಿ ಕೇವಲ 201 ಮತಗಳನ್ನು ಗಳಿಸಿ ಮುಖಭಂಗಕ್ಕೀಡಾಗಿದ್ದಾರೆ.

2019ರಲ್ಲಿ ಬಿಜೆಪಿ ಅಭ್ಯರ್ಥಿ ಗಳಿಸಿದ 125 ಮತಕ್ಕೆ ಹೋಲಿಸಿದರೆ ಎನ್ ಡಿಎ ಅಭ್ಯರ್ಥಿ ಈ ಬಾರಿ ಅಧಿಕ ಮತ ಗಳಿಸಿದ್ದಾರೆ ಎನ್ನುವುದೇ ಕೇಂದ್ರದ ಆಡಳಿತಾರೂಢ ಮೈತ್ರಿಕೂಟಕ್ಕೆ ಸಮಾಧಾನ.

ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ಮುಹಮ್ಮದ್ ಹಮದುಲ್ಲಾ ಸಯೀದ್ ಈ ಕ್ಷೇತ್ರದಲ್ಲಿ 25,726 ಮತ ಪಡೆಯುವ ಮೂಲಕ ಗೆಲುವು ಸಾಧಿಸಿದರು. ಎರಡು ಬಾರಿಯ ಸಂಸದ, ಎನ್ ಸಿಪಿ(ಎಸ್ಪಿ) ಮುಖಂಡ ಮುಹಮ್ಮದ್ ಫೈಝಲ್ ಅವರಿಗಿಂತ 2647 ಅಧಿಕ ಮತಗಳನ್ನು ಗಳಿಸಿ ಗೆಲುವಿನ ನಗೆ ಬೀರಿದರು. ಎನ್ ಡಿಎ ಅಭ್ಯರ್ಥಿ ಹಾಗೂ ಎನ್ ಸಿಪಿ (ಎಪಿ) ಮುಖಂಡ ಯೂಸಫ್ ಟಿ.ಪಿ, ಕ್ಷೇತ್ರದಲ್ಲಿ ಚಲಾವಣೆಯಾದ 49 ಸಾವಿರ ಮತಗಳ ಪೈಕಿ ಕೇವಲ 201 ಮತ ಪಡೆಯಲು ಸಾಧ್ಯವಾಯಿತು.

ಕಳೆದ ಕೆಲ ರ್ಷಗಳಿಂದ ಪ್ರಫುಲ್ ಖೋಡಾ ಪಟೇಲ್ ನೇತೃತ್ವದ ಆಡಳಿತ ಜಾರಿಗೆ ತಂದಿರುವ ಸುಧಾರಣಾ ಕ್ರಮಗಳ ವಿರುದ್ಧ ಸ್ಥಳೀಯರಿಂದ ಬೃಹತ್ ಪ್ರತಿರೋಧ ವ್ಯಕ್ತವಾಗಿತ್ತು. ಲಕ್ಷದ್ವೀಪ ಉಳಿಸಿ ಅಭಿಯಾನ 2021ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸುಧಾರಣಾ ಕ್ರಮಗಳು ಸ್ಥಳೀಯ ಜನರ ಜೀವನಾಧಾರಕ್ಕೆ ಧಕ್ಕೆ ತರುತ್ತದೆ ಎಂಬ ಆತಂಕ ಜನರಲ್ಲಿದೆ ಮತ್ತು ಪ್ರವಾಸೋದ್ಯಮಕ್ಕೆ ಭಾರಿ ಅವಕಾಶವಿರುವ ದ್ವೀಪ ಪ್ರದೇಶವನ್ನು ಕೇಸರೀಕರಣಗೊಳಿಸಲು ಬಿಜೆಪಿ ಹುನ್ನಾರ ನಡೆಸುತ್ತಿದೆ ಎಂಬ ಕಳವಳ ಸ್ಥಳೀಯ ಜನರದ್ದು.

ಪ್ರಧಾನಿ ನರೇಂದ್ರ ಮೋದಿ ಜನವರಿಯಲ್ಲಿ ಸ್ವತಃ ಲಕ್ಷದ್ವೀಪಕ್ಕೆ ಭೇಟಿ ನೀಡಿ, ಪ್ರವಾಸೋದ್ಯಮ ಅವಕಾಶಗಳ ಬಗ್ಗೆ ಸ್ಥಳೀಯರ ಜತೆ ಸಂವಾದವನ್ನೂ ನಡೆಸಿದ್ದರು. ಲಕ್ಷದ್ವೀಪದ ಮುಸ್ಲಿಂ ಮಹಿಳೆಯರ ಜತೆ ಮೋದಿ ಸಂವಾದ ನಡೆಸಿದ ವಿಡಿಯೊವನ್ನು ಬಿಜೆಪಿ ಪಾಳಯ ವ್ಯಾಪಕವಾಗಿ ಹರಿಯ ಬಿಟ್ಟಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News