ʼಕಸದ ತೊಟ್ಟಿಯಲ್ಲʼ: ನ್ಯಾಯಮೂರ್ತಿ ಯಶವಂತ್ ವರ್ಮಾ ಪುನರಾಗಮನಕ್ಕೆ ಅಲಹಾಬಾದ್ ಹೈಕೋರ್ಟ್ ವಕೀಲರ ಸಂಘ ವಿರೋಧ

Photo credit: PTI
ಹೊಸದಿಲ್ಲಿ: ʼಅಲಹಾಬಾದ್ ಹೈಕೋರ್ಟ್ ಕಸದ ತೊಟ್ಟಿ ಅಲ್ಲ , ಭ್ರಷ್ಟಾಚಾರ ಸ್ವೀಕಾರವಲ್ಲʼ ಎಂದು ಅಲಹಾಬಾದ್ ಹೈಕೋರ್ಟ್ಗೆ ನ್ಯಾಯಮೂರ್ತಿ ಯಶವಂತ್ ವರ್ಮಾ ಪುನರಾಗಮನಕ್ಕೆ ವಕೀಲರ ಸಂಘ ವಿರೋಧವನ್ನು ವ್ಯಕ್ತಪಡಿಸಿದೆ.
ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಅಪಾರ ನಗದು ಪತ್ತೆಯಾದ ಬಳಿಕ ಅವರನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಅಲಹಾಬಾದ್ ಹೈಕೋರ್ಟ್ಗೆ ವರ್ಗಾವಣೆಗೊಳಿಸಿತ್ತು.
ಈ ಕುರಿತು ಅಲಹಾಬಾದ್ ಹೈಕೋರ್ಟ್ ವಕೀಲರ ಸಂಘವು, ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಇತರ ನ್ಯಾಯಾಧೀಶರಿಗೆ ಪತ್ರ ಬರೆದಿದೆ. ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿಯಾಗಿ ಯಶವಂತ್ ವರ್ಮಾ ಅವರ ಮರು ಆಗಮನಕ್ಕೆ ವಿರೋಧವನ್ನು ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ತೆಗೆದುಕೊಂಡಿರುವ ನಿರ್ಧಾರದಿಂದ ತಾವು ದಿಗ್ಭ್ರಮೆಗೊಂಡಿದ್ದೇವೆ ಎಂದು ಹೇಳಿದೆ.
ಕೊಲಿಜಿಯಂನ ಈ ನಿರ್ಧಾರ ಅಲಹಾಬಾದ್ ಹೈಕೋರ್ಟ್ ಕಸದ ತೊಟ್ಟಿಯೇ? ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಇದು ಮುಖ್ಯವಾಗಿದೆ. ಅಲಹಾಬಾದ್ ಹೈಕೋರ್ಟ್ನಲ್ಲಿ ನ್ಯಾಯಾಧೀಶರ ಕೊರತೆಯಿದೆ. ಹಲವು ವರ್ಷಗಳಿಂದ ಹೊಸ ನ್ಯಾಯಾಧೀಶರ ನೇಮಕವಾಗಿಲ್ಲ ಎಂದು ವಕೀಲರ ಸಂಘವು ಹೇಳಿದೆ.