ಅಣ್ಣಾಮಲೈಗೆ ಹಿನ್ನಡೆಯಾಗಲಿದೆ ಎಂದು ಭವಿಷ್ಯ ನುಡಿದ ಚುನಾವಣೋತ್ತರ ಸಮೀಕ್ಷೆ

Update: 2024-06-02 13:58 GMT

ಕೆ.ಅಣ್ಣಾಮಲೈ | PTI  

ಕೊಯಂಬತ್ತೂರು : ತಮಿಳು ನಾಡಿನ ಎರಡನೆ ಅತಿ ದೊಡ್ಡ ನಗರವಾದ ಕೊಯಂಬತ್ತೂರು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಹಾಗೂ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರಿಗೆ ಹಿನ್ನಡೆಯಾಗಲಿದೆ ಎಂದು India Today-Axis My India ಸಮೀಕ್ಷೆ ಭವಿಷ್ಯ ನುಡಿದಿದೆ.

ಈ ಕ್ಷೇತ್ರದಿಂದ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಗರದ ಮಾಜಿ ಮೇಯರ್ ಹಾಗೂ ಡಿಎಂಕೆ ಪಕ್ಷದ ಅಭ್ಯರ್ಥಿ ಪಿ.ಗಣಪತಿ ರಾಜಕುಮಾರ್ ಸುಲಭ ಗೆಲುವು ಸಾಧಿಸಲಿದ್ದಾರೆ ಎಂದೂ ಈ ಸಮೀಕ್ಷೆ ಅಂದಾಜು ಮಾಡಿದೆ. ಈ ಕ್ಷೇತ್ರದಿಂದ ಎಡಿಎಂಕೆ ಅಭ್ಯರ್ಥಿಯಾಗಿ ಸಿಂಗೈ ಜಿ. ರಾಮಚಂದ್ರನ್ ಕೂಡಾ ಸ್ಪರ್ಧಿಸಿದ್ದಾರೆ.

ಈ ನಡುವೆ, ಚುನಾವಣೋತ್ತರ ಸಮೀಕ್ಷೆಯನ್ನು ಅಲ್ಲಗಳೆದಿರುವ ಅಣ್ಣಾಮಲೈ, ತಾನು ಈ ಕ್ಷೇತ್ರದಿಂದ ಗೆಲುವು ಸಾಧಿಸಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕುರಿತು India Today ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಅವರು, “ಜೂನ್ 4ರಂದು ನಾನು ಸಂತಸದ ಅಚ್ಚರಿ ನೀಡಲು ಇಷ್ಟಪಡುತ್ತೇನೆ. ಈ ಕ್ಷೇತ್ರದಲ್ಲಿ ನಾನು ಸುಲಭವಾಗಿ ಗೆಲುವು ಸಾಧಿಸಲಿದ್ದೇನೆ. ಇದಕ್ಕಿಂತ ಮಹತ್ವದ್ದೆಂದರೆ, ಮೋದಿಯವರು ಭಾರಿ ಬಹುಮತದಿಂದ ಅಧಿಕಾರಕ್ಕೆ ಮರಳಿ ಬರಬೇಕು” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News