80ರ ಆಸುಪಾಸಿನಲ್ಲಿದ್ದರೂ ಕೆಲವರು ನಿವೃತ್ತಿ ಬಯಸುವುದಿಲ್ಲ: ಚಿಕ್ಕಪ್ಪ ಶರದ್ ಪವಾರ್ ವಿರುದ್ಧ ಹೇಳಿಕೆ ನೀಡಿದ ಅಜಿತ್ ಪವಾರ್

Update: 2024-01-07 16:11 GMT

PHOTO : PTI

ಮುಂಬೈ: “ಕೆಲವರು ತಮ್ಮ 80 ರ ವಯಸ್ಸಿನ ಆಸುಪಾಸಿನಲ್ಲಿದ್ದರೂ ನಿವೃತ್ತರಾಗಲು ಸಿದ್ಧರಿಲ್ಲ” ಎಂದು ಬಿಜೆಪಿಯೊಂದಿಗೆ ಕೈ ಜೋಡಿಸಿರುವ ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ರವಿವಾರ ತಮ್ಮ ಚಿಕ್ಕಪ್ಪ ಶರದ್ ಪವಾರ್ ವಿರುದ್ಧ ಹೇಳಿಕೆ ನೀಡಿದ್ದಾರೆ.

ರವಿವಾರ ಥಾಣೆಯಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅಜಿತ್ ಪವಾರ್ ಮಾತನಾಡಿದರು. "ಮಹಾರಾಷ್ಟ್ರ ಸರ್ಕಾರದ ನೌಕರರು 58 ನೇ ವಯಸ್ಸಿನಲ್ಲಿ ನಿವೃತ್ತರಾಗುತ್ತಾರೆ. ಹೆಚ್ಚಿನ ಜನರು ಸಾಮಾನ್ಯವಾಗಿ 75 ವರ್ಷ ವಯಸ್ಸಿನ ನಂತರ ತಮ್ಮ ಸಕ್ರಿಯ ವೃತ್ತಿಜೀವನವನ್ನು ನಿಲ್ಲಿಸುತ್ತಾರೆ. ಆದರೆ ಕೆಲವರು 80 ವರ್ಷ ಕಳೆದರೂ, ಈಗ 84 ವರ್ಷ ದಾಟಿದ ನಂತರವೂ ನಿವೃತ್ತಿಗೆ ಸಿದ್ಧರಿಲ್ಲ” ಎಂದು ಶರದ್ ಪವಾರ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆ.

ಅಜಿತ್ ಪವಾರ್ ಮತ್ತು ಅವರಿಗೆ ನಿಷ್ಠರಾಗಿರುವ ಕೆಲವು ಶಾಸಕರು ಕಳೆದ ವರ್ಷ ಜುಲೈನಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಸರ್ಕಾರದ ಜೊತೆ ಕೈಜೋಡಿಸಿದರು. ನಂತರ ಅವರು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲೆ ಹಕ್ಕು ಸಾಧಿಸಿದರು. ಈ ಕ್ರಮವನ್ನು ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರು ಚುನಾವಣಾ ಆಯೋಗದಲ್ಲಿ ಪ್ರಶ್ನಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News