ಅಲ್ಪಸಂಖ್ಯಾತರಿಗೆ ಸರಕಾರಿ ಗುತ್ತಿಗೆಯಲ್ಲಿ ಮೀಸಲಾತಿ | ಸಂವಿಧಾನ ತಿದ್ದುಪಡಿಯ ಅಗತ್ಯವಿಲ್ಲ: ಬಿ.ಕೆ.ಹರಿಪ್ರಸಾದ್

Update: 2025-03-24 19:19 IST
ಅಲ್ಪಸಂಖ್ಯಾತರಿಗೆ ಸರಕಾರಿ ಗುತ್ತಿಗೆಯಲ್ಲಿ ಮೀಸಲಾತಿ | ಸಂವಿಧಾನ ತಿದ್ದುಪಡಿಯ ಅಗತ್ಯವಿಲ್ಲ: ಬಿ.ಕೆ.ಹರಿಪ್ರಸಾದ್

ಬಿ.ಕೆ.ಹರಿಪ್ರಸಾದ್

  • whatsapp icon

ಹೊಸದಿಲ್ಲಿ : ಅಲ್ಪಸಂಖ್ಯಾತ ಸಮುದಾಯಗಳಿಗೆ ಸರಕಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಲು ಸಂವಿಧಾನದ ತಿದ್ದುಪಡಿಯ ಅಗತ್ಯವೂ ಇಲ್ಲ, ಬದಲಾವಣೆಯ ಅನಿವಾರ್ಯತೆಯೂ ಇಲ್ಲ. ಸಂವಿಧಾನದ ಚೌಕಟ್ಟಿನಲ್ಲಿಯೇ ಮೀಸಲಾತಿ ನೀಡಿರುವುದು ಸ್ಪಷ್ಟವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.

ಸೋಮವಾರ ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನಕ್ಕೆ ತಿದ್ದುಪಡಿ ತರಲು ಅವಕಾಶವಿದೆಯೇ ಹೊರತು ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಬದಲಾವಣೆ ಮಾಡಲು ಬಿಡುವುದೂ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿದ್ದುಪಡಿಯ ಬದಲು ಬದಲಾವಣೆ ಎಂದು ಹೇಳಿರಬಹುದು ಎಂದು ಹೇಳಿದ್ದಾರೆ.

ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುವುದೇ ಸಂವಿಧಾನದ ಮುಖ್ಯ ಆಶಯ. ಸಂವಿಧಾನದ ಆಶಯದಂತೆಯೇ ರಾಜ್ಯದ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತ ಸಮುದಾಯಗಳಿಗೆ ಸರಕಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಿದೆ ಎಂದು ಹರಿಪ್ರಸಾದ್ ಹೇಳಿದರು.

ಸಂವಿಧಾನ ಅನುಚ್ಛೇದ 14, 15(4), 16(4) ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲು ಅವಕಾಶವಿದೆ. ಧರ್ಮದ ಆಧಾರದಲ್ಲಿ ಎಲ್ಲಿಯೂ ಮೀಸಲಾತಿ ನೀಡಿಲ್ಲ. 1977 ರಿಂದ 1993 ರವರೆಗೂ ನಾಲ್ಕು ಹಿಂದುಳಿದ ವರ್ಗಗಳ ಆಯೋಗಗಳು ವರದಿ ನೀಡಿವೆ. ಹಾವನೂರು ಆಯೋಗ, ಚಿನ್ನಪ್ಪ ರೆಡ್ಡಿ ಆಯೋಗ ಸೇರಿದಂತೆ ನಾಲ್ಕು ಆಯೋಗಗಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರೆಲ್ಲರೂ ಹಿಂದುಳಿದ ವರ್ಗಕ್ಕೆ ಸೇರಿಸಬಹುದು ಎಂದು ವರದಿ ನೀಡಿದೆ ಎಂದು ಅವರು ತಿಳಿಸಿದರು.

ಮುಖ್ಯವಾಗಿ 1993ರ ಇಂದಿರಾ ಸಹಾನಿ ಹಾಗೂ ಕೇಂದ್ರ ಸರಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ನಿರ್ದೇಶನದಂತೆ ಪ್ರತಿ ರಾಜ್ಯದಲ್ಲಿ ಹಿಂದುಳಿದವರ ಆಯೋಗ ರಚಿಸಿ, ಕುಲಶಾಸ್ತ್ರ ಅಧ್ಯಯನ ನಡೆಸಿ, ಸಮುದಾಯಗಳ ಸಬಲೀಕರಣಕ್ಕೆ ಮೀಸಲಾತಿ ನೀಡಬಹುದು ಎಂದು ಸ್ಪಷ್ಟಪಡಿಸಿದೆ ಎಂದು ಹರಿಪ್ರಸಾದ್ ಮಾಹಿತಿ ನೀಡಿದರು.

ಮುಸ್ಲಿಮ್ ಸಮುದಾಯಗಳಿಗೆ ಮೀಸಲಾತಿ ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಿಲ್ಲ. ಗುಜರಾತಿನಲ್ಲೂ ಕೂಡ ಮೀಸಲಾತಿ ನೀಡಿದೆ. ಕೇಂದ್ರ ಸರಕಾರದಲ್ಲಿಯೂ ಕೂಡ ನಾಲ್ಕು ಪಂಗಡಗಳನ್ನು ಹೊರತುಪಡಿಸಿ ಉಳಿದವರಿಗೆ ಮೀಸಲಾತಿ ನೀಡಿದೆ. ಗುಜರಾತಿನಲ್ಲಿ 101 ಸಮುದಾಯಗಳಲ್ಲಿ 23 ಮುಸ್ಲಿಂ ಒಳ ಪಂಗಡಗಳಿಗೆ ಮೀಸಲಾತಿ ನೀಡಲಾಗಿದೆ. ಮುಸ್ಲಿಂ ಸಮುದಾಯಗಳು ಹಿಂದುಳಿದಿವೆ ಎಂದು ಕೆಲವು ಆಯೋಗಗಳು ಕೂಡ ವರದಿ ನೀಡಿದೆ ಎಂದು ಅವರು ವಿವರಿಸಿದರು.

ಹನಿಟ್ಯ್ರಾಪ್ ರಾಜ ಮಹಾರಾಜರ ಕಾಲದಿಂದ ಹಿಡಿದು, ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾದ ಕಾಲದಿಂದಲೂ, ಬಿಜೆಪಿ ಅಧ್ಯಕ್ಷ(ವಿಜಯೇಂದ್ರ)ನಿಂದಾಗಿ ಕರ್ನಾಟಕದ ಬಾಂಬೆ ಬಾಯ್ಸ್ ಗಳು ಕೋರ್ಟ್ ನಿಂದ ಇಂಜೆಕ್ಷನ್ ಆರ್ಡರ್ ಪಡೆದುಕೊಳ್ಳುವವರೆಗೂ ಬಂದು, ಈಗ ಇಲ್ಲಿಗೆ ಬಂದು ನಿಂತಿದೆ ಎಂದು ವ್ಯಂಗ್ಯವಾಡಿದರು.

ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನದಂತೆ ಬಿಜೆಪಿಯವರು ಮಾತಾಡೋದು ಬೇಡ. ಹನಿಟ್ಯ್ರಾಪ್ ಈಗ ಆಗೋಗಿದೆ. ಅದರ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವರು ಹೇಳಿದ್ದಾರೆ, ಅದರ ಬಗ್ಗೆ ಚರ್ಚೆ ಬೇಡ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News