ಕುಮಾರಸ್ವಾಮಿ ಬಂದೂಕು ಹಿಡಿದು ಯುದ್ಧ ಮಾಡ್ತಾರಾ?: ಜಿ.ಪರಮೇಶ್ವರ್
ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಯುದ್ಧ ಮಾಡುತ್ತೇನೆ ಎಂದಿದ್ದಾರೆ. ಆದರೆ, ಅವರೇನು ಬಂದೂಕು ಹಿಡಿದು ಬರುತ್ತಾರಾ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವ್ಯಂಗ್ಯವಾಡಿದ್ದಾರೆ.
ಇವತ್ತಿನಿಂದ ಸರಕಾರದ ವಿರುದ್ಧ ನನ್ನ ಯುದ್ಧ ಶುರು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಯುದ್ಧ ಅಂದರೆ ಟೀಕೆ, ಟಿಪ್ಪಣಿ. ಇದಕ್ಕೆ ನಮ್ಮ ಸರಕಾರ ಉತ್ತರ ಕೊಡಲು ಸಮರ್ಥವಿದೆ. ಅವರು ದಾಖಲಾತಿ ಬಿಡುಗಡೆ ಮಾಡುತ್ತೇನೆ ಎಂದಿದ್ದು, ಈ ಸವಾಲು ನಾವು ಸ್ವೀಕರ ಮಾಡುತ್ತೇವೆ ಎಂದರು.
ಕುಮಾರಸ್ವಾಮಿ ಕೇಂದ್ರದ ಯೋಜನೆಗಳ ಸಂಬಂಧ ರಾಜ್ಯಕ್ಕೆ ಸಹಾಯ ಮಾಡಬೇಕು. ಯುದ್ಧ ಮಾಡುತ್ತೇನೆ ಎಂದರೆ ಜನರು ಗಮನಿಸುತ್ತಾರೆ. ಕೇಂದ್ರ ಸಚಿವರಾಗಿದ್ದು, ದೊಡ್ಡ ಖಾತೆ ಅವರ ಬಳಿ ಇದೆ. ಆದರೆ, ಅವರು ರಾಜ್ಯ ಸರಕಾರಕ್ಕೆ ಸಲಹೆಗಳನ್ನು ನೀಡಲಿ ಎಂದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಆಗಿದ್ದು, ಈ ವೇಳೆ ರಾಜಕೀಯ ವಿಚಾರಗಳ ಬಗ್ಗೆ ಏನೂ ಚರ್ಚೆ ಮಾಡಿಲ್ಲ ಎಂದರು.