ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾನಿಲಯದಿಂದ ಹಣಕಾಸು-ಆರ್ಥಿಕ ಅಪರಾಧಗಳು ವಿಷಯದಲ್ಲಿ ಸ್ನಾತಕೋತ್ತರ ತರಗತಿ ಪ್ರಾರಂಭ

ಬೆಂಗಳೂರು : ಗೃಹ ವ್ಯವಹಾರಗಳ ಸಚಿವಾಲಯದಡಿಯಲ್ಲಿನ ರಾಷ್ಟ್ರೀಯ ಪ್ರಾಮುಖ್ಯತಾ ಸಂಸ್ಥೆಯಾದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯವು ಹಣಕಾಸು ಮತ್ತು ಆರ್ಥಿಕ ಅಪರಾಧಗಳು ವಿಷಯದಲ್ಲಿ ಹೈಬ್ರಿಡ್ ಮಾದರಿಯ ಒಂದು ವರ್ಷದ ಸ್ನಾತಕೋತ್ತರ ತರಗತಿಗಳನ್ನು ಪ್ರಾರಂಭಿಸಿದೆ.
ಭಾರತೀಯ ಕಾರ್ಪೊರೇಟ್ ವ್ಯವಹಾರಗಳ ಸಂಸ್ಥೆಯ ಸಹಯೋಗದೊಂದಿಗೆ ವೃತ್ತಿಪರರಿಗಾಗಿ ಈ ಕೋರ್ಸ್ ಅನ್ನು ವಿನ್ಯಾಸ ಮಾಡಲಾಗಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಉಪಕುಲಪತಿ ಪ್ರೊ.ಬಿಮಲ್ ಎನ್.ಪಟೇಲ್ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಕಟಿಸಿದರು. ಈ ಕೋರ್ಸ್ಗೆ ಆರ್ಬಿಐ, ಸೆಬಿಯಂತಹ ಹಣಕಾಸು ನಿಯಂತ್ರಕಗಳು ಮತ್ತು ಸಿಬಿಐ, ಎನ್ಐಎ, ಪಿಎಫ್ಆರ್ಡಿಎ, ಮತ್ತು ಐಆರ್ಡಿಎಐ ನಂತಹ ಕಾನೂನು ಜಾರಿ ಸಂಸ್ಥೆಗಳ ಸಹಮತವಿದೆ. ಹಣಕಾಸು ಮತ್ತು ಆರ್ಥಿಕ ಅಪರಾಧಗಳನ್ನು ತಡೆಗಟ್ಟಲು, ತಗ್ಗಿಸಲು ಮತ್ತು ನಿಯಂತ್ರಿಸಲು ಈ ಕಾರ್ಯಕ್ರಮವು ಕಾರ್ಯತಂತ್ರದ ಉಪಕ್ರಮವಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾನಿಲಯದ ವಿವಿಧ ಕ್ಯಾಂಪಸ್ಗಳಲ್ಲಿ ಶೇ.93 ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಆಯ್ಕೆ ಮೂಲಕ ಉದ್ಯೋಗ ದೊರೆತಿದೆ ಎಂದು ವಿವರಿಸಿದರು.

ಭಾರತೀಯ ಕಾರ್ಪೊರೇಟ್ ವ್ಯವಹಾರಗಳ ಸಂಸ್ಥೆಯ ಎಚ್ಒಡಿ ಪ್ರೊ.ಡಾ.ನೀರಜ್ ಗುಪ್ತಾ ಅವರು ಸಹ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದರು.
ವಿಶ್ವವಿದ್ಯಾಲಯದ ಕೇಂದ್ರ ಕಚೇರಿಯು ಗುಜರಾತ್ನ ಗಾಂಧಿನಗರದಲ್ಲಿದ್ದು ಕರ್ನಾಟಕದ ಶಿವಮೊಗ್ಗ, ಅರುಣಾಚಲ ಪ್ರದೇಶ, ಲಕ್ನೋ ಮತ್ತು ಪುದುಚೇರಿಗಳಲ್ಲಿ ಕ್ಯಾಂಪಸ್ಗಳನ್ನು ಹೊಂದಿದೆ. ಶಿವಮೊಗ್ಗ ಕ್ಯಾಂಪಸ್ನ ನಿರ್ದೇಶಕರಾದ ಡಾ.ಕಾವೇರಿ ಟಂಡನ್ ಅವರು, ಕರ್ನಾಟಕದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಶೈಕ್ಷಣಿಕ ಉಪಕ್ರಮಗಳಿಗೆ ರಾಜ್ಯ ಸರ್ಕಾರದ ದೃಢ ಬೆಂಬಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.