ಬಹರೈನ್: ಕನ್ನಡ ಸಂಘದ ವತಿಯಿಂದ ಕ್ರಿಸ್ಮಸ್, ಮಕ್ಕಳ ಜನ್ಮದಿನಾಚರಣೆ

Update: 2023-12-31 06:30 GMT

 ಬಹರೈನ್: ಕನ್ನಡ ಸಂಘದ ವತಿಯಿಂದ  ಆಯೋಜಿಸಿದ ಕ್ರಿಸ್ ಮಸ್ ಮತ್ತು ಡಿಸೆಂಬರ್ ತಿಂಗಳಲ್ಲಿ ಹುಟ್ಟಿದ ಮಕ್ಕಳ ಹುಟ್ಟುಹಬ್ಬ ಕಾರ್ಯಕ್ರಮವು ಕನ್ನಡ ಭವನ ಸಭಾಂಗಣದಲ್ಲಿ ಡಿ 29 ರಂದು ನಡೆಯಿತು.

ಕನ್ನಡ ಸಂಘದ ಅಧ್ಯಕ್ಷ ಅಮರನಾಥ ರೈ ಮತ್ತು ಕಾರ್ಯಕಾರಿ ಸಮಿತಿಯ ನೇತೃತ್ವದಲ್ಲಿ ಸಂತ ಕ್ಲಾಸ್ ಮೆರವಣಿಗೆಯ ಮೆರುಗಿನೊಂದಿಗೆ ಕ್ರಿಸ್ ಮಸ್ ಕಾರ್ಯಕ್ರಮ ಪ್ರಾರಂಭಗೊಂಡಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮನಾಮದ ಸೇಕ್ರೆಡ್ ಹಾರ್ಟ್ ಚರ್ಚ್ನ ರೆ.ಫಾ ಡೇರಿಲ್ ಫೆರ್ನಾಂಡಿಸ್ ಆಧ್ಯಾತ್ಮಿಕ ಸಂದೇಶ ನೀಡಿದರು.

ಅಧ್ಯಕ್ಷ ಅಮರನಾಥ ರೈ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ಡಿಸೆಂಬರ್ ತಿಂಗಳಲ್ಲಿ ಹುಟ್ಟಿದ ಮಕ್ಕಳ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ಕರೋಲ್ ಬ್ಯಾಂಡ್, ನೃತ್ಯ, ಕ್ರಿಸ್ಮಸ್ ಟ್ರೀ ಸ್ಪರ್ಧೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

ಮುಖ್ಯ ಅತಿಥಿ ಫಾ ಡೇರಿಲ್ ಫೆರ್ನಾಂಡಿಸ್, ಬಹುಮಾನ ಪ್ರಾಯೋಜಕರಾದ ಕನ್ನಡ ಸಂಘದ ಹಿರಿಯ ಸದಸ್ಯ ರಾದ ಹಾಜಿ ಅಬ್ದುಲ್ ರಝಾಕ್ ಹಾಗೂ ಅಜಿತ್ ಬಂಗೇರ, ಸಂಘದ ಮಾಜಿ ಅಧ್ಯಕ್ಷ ರಾಜೇಶ್ ಬಿ.ಶೆಟ್ಟಿ, ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದ ಸದಸ್ಯ ಆನಂದ್ ಲೋಬೋ, ತೀರ್ಪುಗಾರರಾಗಿ ಆಗಮಿಸಿದ್ದ ನಿರ್ಮಲಾ ಜೋಸೆಫ್, ಜೋಸ್ಮಿ ಲಾಲ್, ಸಂಧ್ಯಾ ಡಿಸೋಜ಼ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಡಿಜೆ ಫ್ರಾನ್ಸಿಸ್ ಲೋಬೋ ಮತ್ತು ಕಾರ್ಯಕ್ರಮ ನಿರೂಪಕರಾದ ಜಾನ್ ದೀಪಕ್ ಡೆ'ಸಾ ಹಾಗೂ ಕ್ವೀನಿ ಜಾನ್ ಅಲ್ಮೆಡಾ ಅವರು ಕಾರ್ಯಕ್ರಮ ನಡೆಸಿಕೊಟ್ಟರು.

ಸಮಾರಂಭದ ಯಶಸ್ಸಿಗೆ ಕಾರಣರಾದ ಸ್ವಯಂಸೇವಕರನ್ನು ಹಾಗೂ ಪ್ರಾಯೋಜಕರನ್ನು ಸಾಂಸ್ಕೃತಿಕ ಕಾರ್ಯದರ್ಶಿ ಜಗದೀಶ ಜೆಪ್ಪು ಅಭಿನಂದಿಸಿದರು.

ಕಾರ್ಯದರ್ಶಿ ರಾಮಪ್ರಸಾದ್ ಅಮ್ಮೆನಡ್ಕ ಅವರು ನೆರೆದವರಿಗೆ ಹೊಸವರ್ಷದ ಶುಭಾಶಯದೊಂದಿಗೆ ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರಮದ ಬಳಿಕ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.

 

 

 

 

 

 

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News