ಗಾಝಾದಲ್ಲಿ ತಕ್ಷಣ ಕದನ ವಿರಾಮಕ್ಕೆ ತನ್ನ ಕರೆಯನ್ನು ವಿಶ್ವಸಂಸ್ಥೆಯಲ್ಲಿ ಪುನರುಚ್ಚರಿಸಿದ ಭಾರತ

Update: 2024-07-18 11:47 GMT

ಆರ್.ರವೀಂದ್ರ | PC : X 

ವಿಶ್ವಸಂಸ್ಥೆ: ಭಾರತವು ಗಾಝಾದಲ್ಲಿ ತಕ್ಷಣದ ಮತ್ತು ಸಂಪೂರ್ಣ ಕದನ ವಿರಾಮಕ್ಕೆ ತನ್ನ ಕರೆಯನ್ನು ಬುಧವಾರ ವಿಶ್ವಸಂಸ್ಥೆಯಲ್ಲಿ ಪುನರುಚ್ಚರಿಸಿದೆ.

ಹಮಾಸ್ ವಶದಲ್ಲಿರುವ ಎಲ್ಲ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆಗೊಳಿಸುವಂತೆಯೂ ಅದು ಕರೆ ನೀಡಿದೆ.

ಕಳೆದ ವರ್ಷದ ಅಕ್ಟೋಬರ್‌ನಿಂದ ಇಸ್ರೇಲ್ ಗಾಝಾದ ವಿರುದ್ಧ ತೀವ್ರ ವಾಯು ಮತ್ತು ಭೂದಾಳಿಗಳನ್ನು ನಡೆಸುತ್ತಿದ್ದು, 15,000ಕ್ಕೂ ಅಧಿಕ ಮಕ್ಕಳು ಸೇರಿದಂತೆ ಕನಿಷ್ಠ 39,289 ಜನರು ಬಲಿಯಾಗಿದ್ದಾರೆ.

ಬುಧವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಧ್ಯಪ್ರಾಚ್ಯ ಕುರಿತು ಮುಕ್ತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಉಪ ಪ್ರತಿನಿಧಿ ಆರ್.ರವೀಂದ್ರ ಅವರು,‘2023,ಅ.7ರಂದು ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು ಬಲವಾಗಿ ಮತ್ತು ನಿಸ್ಸಂದಿಗ್ಧವಾಗಿ ಖಂಡಿಸಿದ ದೇಶಗಳಲ್ಲಿ ಭಾರತವೂ ಒಂದಾಗಿದೆ. ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ನಾಗರಿಕರ ಜೀವಹಾನಿಯನ್ನೂ ನಾವು ಖಂಡಿಸಿದ್ದೇವೆ. ಸಂಯಮವನ್ನು ಕಾಯ್ದುಕೊಳ್ಳುವಂತೆ, ಸಂಘರ್ಷವನ್ನು ತಿಳಿಗೊಳಿಸುವಂತೆ ನಾವು ಕರೆ ನೀಡಿದ್ದೇವೆ. ಮಾತುಕತೆ ಹಾಗೂ ರಾಜತಾಂತ್ರಿಕ ಮಾತುಕತೆಗಳ ಮೂಲಕ ಸಂಘರ್ಷಕ್ಕೆ ಶಾಂತಿಯುತ ಪರಿಹಾರಕ್ಕೆ ನಾವು ಒತ್ತು ನೀಡಿದ್ದೇವೆ ’ ಎಂದು ಹೇಳಿದರು.

ಎಲ್ಲ ಸಂದರ್ಭಗಳಲ್ಲಿಯೂ ಅಂತರರಾಷ್ಟ್ರೀಯ ಮತ್ತು ಮಾನವೀಯ ಕಾನೂನುಗಳ ಪಾಲನೆಗೆ ಒತ್ತಾಯಿಸಿದ ಅವರು,‘ನಾವು ಗಾಝಾ ಪಟ್ಟಿಯಲ್ಲಿ ತಕ್ಷಣದ ಮತ್ತು ಸಂಪೂರ್ಣ ಕದನ ವಿರಾಮ,ಸುರಕ್ಷತೆ,ಸಕಾಲಿಕ ಮತ್ತು ನಿರಂತರ ಮಾನವೀಯ ನೆರವು ಹಾಗೂ ಪರಿಹಾರ ಮತ್ತು ಅಗತ್ಯ ಮಾನವೀಯ ಸೇವೆಗಳ ಅನಿರ್ಬಂಧಿತ ಲಭ್ಯತೆಗೆ ನಮ್ಮ ಕರೆಯನ್ನು ಪುನರುಚ್ಚರಿಸುತ್ತೇವೆ. ಎಲ್ಲ ಒತ್ತೆಯಾಳುಗಳ ತಕ್ಷಣದ ಮತ್ತು ಬೇಷರತ್ ಬಿಡುಗಡೆಗೂ ನಾವು ಕರೆ ನೀಡುತ್ತಿದ್ದೇವೆ ’ ಎಂದು ಹೇಳಿದರು.

ಸಾರ್ವಭೌಮ ಮತ್ತು ಸ್ವತಂತ್ರ ಫೆಲೆಸ್ತೀನ್ ಸ್ಥಾಪನೆಗಾಗಿ ದ್ವಿ-ರಾಷ್ಟ್ರ ಪರಿಹಾರವನ್ನು ಭಾರತವು ಸುದೀರ್ಘ ಕಾಲದಿಂದಲೂ ಬೆಂಬಲಿಸುತ್ತಿದೆ ಎಂದ ಅವರು,ಈ ಎಲ್ಲ ವರ್ಷಗಳಲ್ಲಿ ಭಾರತವು ಫೆಲೆಸ್ತೀನ್‌ಗೆ ವಿವಿಧ ರೂಪಗಳಲ್ಲಿ 120 ಮಿಲಿಯನ್ ಡಾಲರ್ ಅಥವಾ 1003.36 ಕೋಟಿ ರೂ.ಗಳ ಅಭಿವೃದ್ಧಿ ನೆರವನ್ನು ಒದಗಿಸಿದೆ ಎಂದು ಒತ್ತಿ ಹೇಳಿದರು.

ಭಾರತವು 2018ರಿಂದ ಫೆಲೆಸ್ತೀನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆ ಪರಿಹಾರ ಕಾರ್ಯಗಳ ಏಜೆನ್ಸಿಗೆ ಐದು ಮಿ.ಡಾ.(41.8 ಕೋಟಿ ರೂ.)ಗಳ ವಾರ್ಷಿಕ ಕೊಡುಗೆಯನ್ನು ನೀಡುತ್ತಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News