ಮೂರು ದಿನಗಳ ಜರ್ಮನಿ ಪ್ರವಾಸ ಪೂರ್ಣಗೊಳಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2024-10-10 12:21 GMT

ಹೊಸದಿಲ್ಲಿ: ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಅವರು ಅ.6ರಿಂದ 9ರವರೆಗೆ ಮೂರು ದಿನಗಳ ಜರ್ಮನಿ ಪ್ರವಾಸವನ್ನು ಪೂರ್ಣಗೊಳಿಸಿದ್ದಾರೆ.

ಹ್ಯಾಂಬರ್ಗ್ ನಲ್ಲಿ ಸಸ್ಟೈನಬಿಲಿಟಿ ಕಾನ್ಫರೆನ್ಸ್ (ಎಚ್.ಎಸ್.ಸಿ) ನೊಂದಿಗೆ ಹೊಂದಿಕೆಯಾದ ಈ ಭೇಟಿಯು ಜಾಗತಿಕ ಸುಸ್ಥಿರತೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತದ ಬದ್ಧತೆಯನ್ನು ಒತ್ತಿ ಹೇಳಿತು. ಇಂಧನ ವಲಯದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಪ್ರಮುಖ ಚರ್ಚೆಗಳನ್ನು ಸುಗಮಗೊಳಿಸಿತು.

ಪ್ರಹ್ಲಾದ್‌ ಜೋಶಿ ಅವರು ಹ್ಯಾಂಬರ್ಗ್‌ನಲ್ಲಿ ಸಸ್ಟೈನಬಿಲಿಟಿ ಕಾನ್ಫರೆನ್ಸ್ ನಲ್ಲಿ ಪ್ರಮುಖ ಭಾಷಣ ಮಾಡಿ, ಅಲ್ಲಿ ಅವರು 100 ಮಂದಿ ಸದಸ್ಯರನ್ನೊಳಗೊಂಡ ಅಂತಾರಾಷ್ಟ್ರೀಯ ಸೌರ ಮೈತ್ರಿ ಒಳಗೊಂಡಂತೆ ಇಂಧನ ಮತ್ತು ಇಂಧನ ಪರಿವರ್ತನೆಯ ಉಪಕ್ರಮಗಳು, ಜಾಗತಿಕ ನವೀಕೃತ ಇಂಧನ ಕ್ಷೇತ್ರದಲ್ಲಿ ಭಾರತದ ಪಾತ್ರವನ್ನು ಅವರು ಅನಾವರಣಗೊಳಿಸಿದರು. ಕಳೆದ ದಶಕದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೃಷ್ಟಿಕೋನ ಮತ್ತು ನಾಯಕತ್ವದಡಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ನಿರ್ಣಾಯಕ ಪ್ರಗತಿ ಸಾಧಿಸಿದೆ. ಸುಸ್ಥಿರತೆಯಲ್ಲಿ ಭಾರತದ ಬದ್ಧತೆಯನ್ನು ಸಚಿವರು ಒತ್ತಿ ಹೇಳಿದರು. ವಿಶೇಷವಾಗಿ ಹಸಿರು ಹಡಗು ಕ್ಷೇತ್ರಗಳಲ್ಲಿ, ಮತ್ತು ಜಾಗತಿಕ ಇಂಧನ ಪರಿವರ್ತನೆಯಿಂದ ಉಂಟಾಗುವ ಸವಾಲುಗಳನ್ನು ನಿಭಾಯಿಸಲು ಅಂತಾರಾಷ್ಟ್ರೀಯ ಸಹಯೋಗವನ್ನು ಬಲಪಡಿಸುವಂತೆ ಕರೆ ನೀಡಿದರು

ಈ ಭೇಟಿಯ ಸಂದರ್ಭದಲ್ಲಿ ಜೋಶಿ ಅವರು ಜಾಗತಿಕ ನಾಯಕರ ಜೊತೆ ಹಲವಾರು ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು. ವಿಶ್ವಸಂಸ್ಥೆಯ ಅಭಿವೃದ್ದಿ ಕಾರ್ಯಕ್ರಮ (ಯು.ಎನ್.ಡಿ.ಪಿ) ವಿಭಾಗದ ಆಡಳಿತಾಧಿಕಾರಿ ಅಚಿಮ್ ಸ್ಟೈನೆರ್ ಅವರನ್ನು ಭೇಟಿ ಮಾಡಿದ್ದು, ಭಾರತದ ನವೀಕರಿಸಬದಾದ ಇಂಧನ ವಲಯದ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಅವರು ಕೇಂದ್ರೀಕರಿಸಿದರು. ಸುಸ್ಥಿರ ಅಭಿವೃದ್ಧಿಯಲ್ಲಿ ಭವಿಷ್ಯದ ಪಾಲುದಾರಿಕೆ ಕುರಿತು ಸಮಾಲೋಚನೆ ನಡೆಸಿದರು. ಸಚಿವರು ಜರ್ಮನಿಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಚಿವ ಸ್ವೆಂಜಾ ಶ್ಚುಲ್ಝೆ ಅವರನ್ನು ಭೇಟಿಯಾಗಿ ಹಸಿರು ಇಂಧನ ಮತ್ತು ಸುಸ್ಥಿರತೆ ಕ್ಷೇತ್ರದಲ್ಲಿ ಹಂಚಿಕೆಯ ಆದ್ಯತೆ ಕುರಿತಂತೆ ಚರ್ಚಿಸಿದರು.

ಈಜಿಪ್ಟ್ ನ ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಚಿವ ಕರಿಮ್ ಬಡಾವಿ ಅವರನ್ನು ಭೇಟಿ ಮಾಡಿದರು ಮತ್ತು ಸಹಕಾರ ವರ್ಧನೆ ಕುರಿತು ಚರ್ಚಿಸಿದರು. ಏಷ್ಯಾ ಅಭಿವೃದ್ಧಿ ಬ್ಯಾಂಕ್ ನ ಉಪಾಧ್ಯಕ್ಷ ರೋಬೆರ್ಟಾ ಕಸಾಲಿ ಅವರನ್ನು ಭೇಟಿ ಮಾಡಿದರು. ಮತ್ತು ಭಾರತದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆಗಳ ಕುರಿತು ಚರ್ಚಿಸಿದರು. ಉಜ್ಬೇಕಿಸ್ತಾನದ ಉಪ ಪ್ರಧಾನಿ ಮತ್ತು ಆರ್ಥಿಕತೆ ಹಾಗೂ ಹಣಕಾಸು ಸಚಿವ ಡಾ.ಜಮ್ಶೀಡ್ ಖೋಡ್ಜೇವ್ ಅವರೊಂದಿಗೆ ಜಾಗತಿಕ ಇಂಧನ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಬದಲಾವಣೆ ಮತ್ತು ಇಂಧನ ಪರಿವರ್ತನೆಯ ಮಾರ್ಗಗಳ ಕುರಿತು ಹೆಚ್ಚಿನ ಸಮಾಲೋಚನೆ ನಡೆಸಿದರು.

ಬ್ರಿಟನ್ ನ ಅಭಿವೃದ್ಧಿ ಸಚಿವ ಅನ್ನೆಲಿಯೆಸೆ ಡೊಡ್ಡ್ಸ್ ಅವರನ್ನು ಭೇಟಿ ಮಾಡಿದರು ಮತ್ತು ಶುದ್ಧ ಮತ್ತು ಹೆಚ್ಚಿನ ಸುಸ್ಥಿರ ಭವಿಷ್ಯಕ್ಕಾಗಿ ಅಂತಾರಾಷ್ಟ್ರೀಯ ಸಹಕಾರವನ್ನು ವೃದ್ಧಿಸುವ ಕುರಿತಂತೆ ಚರ್ಚೆ ನಡೆಸಿದರು. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಧ್ಯಕ್ಷರಾದ  ಕೃಸ್ಟಲಿನ ಜೋರ್ಗೇವ ಅವರೊಂದಿಗೆ ಜಾಗತಿಕ ಸುಸ್ಥಿರ ಯೋಜನೆಗಳಲ್ಲಿ ಅಂತರರಾಷ್ಟ್ರೀಯ ಬೆಂಬಲದಲ್ಲಿ ಐಎಂಎಫ್ ಪಾತ್ರ ಕುರಿತು ಸಮಾಲೋಚಿಸಿದರು. ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಅವರ ಜೊತೆ ಬಾಹ್ಯಾಕಾಶ ಹಸಿರು ಇಂಧನ ವಲಯದ ಬಗ್ಗೆ ಚರ್ಚೆ ನಡೆಸಿದರು.

ಜರ್ಮನಿಯ ವೈಸ್ ಚಾನ್ಸಲರ್ ಮತ್ತು ಆರ್ಥಿಕ ವ್ಯವಹಾರಗಳು ಮತ್ತು ಹವಾಮಾನ ಕ್ರಿಯೆಯ ಒಕ್ಕೂಟದ ಮಂತ್ರಿ ಡಾ. ರಾಬರ್ಟ್ ಹ್ಯಾಬೆಕ್ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನು ನಡೆಸಿದರು. ನವೀಕರಿಸಬಹುದಾದ ಇಂಧನದಲ್ಲಿ ಸಹಕಾರವನ್ನು ಬಲಪಡಿಸುವ ಕುರಿತು ನಾವು ಫಲಪ್ರದ ಚರ್ಚೆಯನ್ನು ಮಾಡಿದ್ದೇವೆ. ಸಭೆಯಲ್ಲಿ ಹಸಿರು ಜಲಜನಕ, ಜೈವಿಕ ಅನಿಲ ಮತ್ತು ಸೌರ ತ್ಯಾಜ್ಯದ ಮರುಬಳಕೆಯ ಅವಕಾಶಗಳ ಕುರಿತು ಚರ್ಚೆ ನಡೆಸಲಾಯಿತು. ಇಂಧನ ಪರಿವರ್ತನೆಯಲ್ಲಿ ಭಾರತ ಮತ್ತು ಜರ್ಮನಿಯ ಸಹಕಾರವು ಉತ್ತಮವಾಗಿ ಪ್ರಗತಿಯಲ್ಲಿದೆ ಎಂಬುದನ್ನು ಗಮನಿಸಲು ನಾವು ಸಂತೋಷಪಟ್ಟಿದ್ದೇವೆ. ಮುಂಬರುವ ವರ್ಷಗಳಲ್ಲಿ ಭಾರತವು ಜರ್ಮನಿಗೆ ಹಸಿರು ಜಲಜನಕ ವಲಯದಲ್ಲಿ ವಿಶ್ವಾಸಾರ್ಹ ಮೂಲವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News