ಆಳಂದ | ಗೋಧಿ ಹೊಲದಲ್ಲಿ ಆಕಸ್ಮಿಕ ಬೆಂಕಿ; ಗಾಯಗೊಂಡಿದ್ದ ರೈತ ಮೃತ್ಯು

ಕಲಬುರಗಿ : ಕೊಯ್ದಿಟ್ಟ ಗೋಧಿ ಬೆಳೆಯ ಹೊಲದಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಗೋಧಿ ಬೆಳೆ ಸುಟ್ಟು ಕರಕಲಾಗಿತ್ತು. ಈ ವೇಳೆ ಬೆಂಕಿ ನಂದಿಸಲು ಹೋಗಿ ಗಾಯಗೊಂಡಿದ್ದ ರೈತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಆಳಂದ ತಾಲೂಕಿನ ಮದಗುಣಕಿ ಗ್ರಾಮದ ರೈತ ವಿಠ್ಠಲ ಸಣ್ಣಮನಿ ಮೃತ ರೈತ ಎಂದು ಗುರುತಿಸಲಾಗಿದೆ.
ರೈತ ವಿಠ್ಠಲ, ತಮ್ಮ ಒಂದು ಎಕರೆಯಲ್ಲಿ ಉತ್ತಮವಾಗಿ ಬೆಳೆದಿದ್ದ ಗೋಧಿಯನ್ನು ರಾಶಿ ಮಾಡಲು ನಾಲ್ಕೈದು ದಿನಗಳ ಹಿಂದೆ ಹೊಲದಲ್ಲಿ ಕಟಾವು ಮಾಡಿ ಗುಂತಿಗಳನ್ನಿಟ್ಟಿದ್ದರು. ಸೋಮವಾರ ಮಧ್ಯಾಹ್ನ ರಾಶಿ ಮಾಡಲು ಗೋಧಿ ಸೂಡುಗಳನ್ನು ಕೊಂಡೊಯುವಾಗ ಹೊಲದಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದೆ. ದಿಕ್ಕೂ ತೋಚದ ರೈತ ವಿಠ್ಠಲ ಅವರು ಬೆಂಕಿ ನಂದಿಸಲು ಮುಂದಾಗಿದ್ದರು. ಈ ವೇಳೆ ಮೈಗೆ ಬೆಂಕಿ ತಗುಲಿದ ಬಗ್ಗೆ ಅರಿವಿಲ್ಲದೆ, ಬೆಳೆಗೆ ಹತ್ತಿಕೊಂಡ ಬೆಂಕಿ ನಂದಿಸುವಲ್ಲಿ ಮುಂದಾಗಿದ್ದರು ಎನ್ನಲಾಗಿದೆ.
ಈ ಹೊಲದಲ್ಲಿನ ಉರಿಯನ್ನು ಗಮನಿಸಿದ ನೆರೆಯ ಹೊಲದ ಕಸ್ತೂರಬಾಯಿ ಸಣ್ಣಮನಿ, ಮಹಾಂತಪ್ಪ ಸಣ್ಣಮನಿ ರೈತನನ್ನು ರಕ್ಷಿಸಿ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಕಳಹಿಸಿಕೊಡಲಾಗಿತ್ತು. ಆದರೆ ಬುಧವಾರ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.