ಕಲಬುರಗಿ | ಹೆಚ್ಚು ಪ್ರಮಾಣದಲ್ಲಿ ಕ್ಷಯ ರೋಗವನ್ನು ಪತ್ತೆ ಹಚ್ಚಿ : ಫೌಝಿಯಾ ತರನ್ನುಮ್

ಕಲಬುರಗಿ : ಕ್ಷಯರೋಗವನ್ನು ಅತಿಹೆಚ್ಚು ಪ್ರಮಾಣದಲ್ಲಿ ಪತ್ತೆ ಹಚ್ಚಿ, ಸಾವಿನ ಪ್ರಮಾಣ ಕಡಿಮೆ ಮಾಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಬೇಕೆಂದು ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಕರೆ ನೀಡಿದರು.
ಶನಿವಾರದಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಶಿವಾಜಿ ನಗರ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಜಿಲ್ಲಾ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮಕ್ಕೆ 100 ದಿನಗಳ ಕ್ಷಯರೋಗ ಅಭಿಯಾನಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಕುಟುಂಬದಲ್ಲಿ ಒಬ್ಬರಿಗೆ ಬಂದರೆ ಕ್ಷಯರೋಗ ಎಲ್ಲರಿಗೂ ಹರಡುವಂತಹ ಸಾಧ್ಯತೆಯಿರುತ್ತದೆ. ಹಳ್ಳಿಯಲ್ಲಿ ಜನ ನಕರಾತ್ಮಕವಾಗಿ ನೋಡುತ್ತಾರೆ. ಈ ರೀತಿಯಾದ ಕಾರ್ಯಕ್ರಮದ ಮೂಲಕ ಜನರಿಗೆ ಜಾಗೃತಿ ಮೂಡಿಸಬೇಕಾಗಿದೆ, ಈ ಕುರಿತಾಗಿ ಎಲ್ಲಾ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಈಗಾಗಲೇ 15 ಗ್ರಾಮ ಪಂಚಾಯಿತ್ಗಳನ್ನು ಕ್ಷಯರೋಗ ಮುಕ್ತ ಮಾಡಲಾಗಿದೆ, ಇನ್ನೂ ಉಳಿದ ಗ್ರಾಮ ಪಂಚಾಯತ್ಗಳಲ್ಲಿ ಏಕೆ ಆಗುವುದಿಲ್ಲ, ನೈತಿಕತೆಯಿಂದ ಜವಬ್ದಾರಿಯಿಂದ ಕೆಲಸ ಮಾಡಿದ್ದಲ್ಲಿ ಕಲಬುರಗಿ ಜಿಲ್ಲೆಯನ್ನು ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡಬಹುದಾಗಿದೆ ಎಂದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಕಾಂತ ನರಬೋಳ ಮಾತನಾಡಿ, ಕ್ಷಯರೋಗ ನಿರ್ಮೂಲನೆ ಮಾಡಲು ಈಗಾಗಲೇ ಅನೇಕ ತಂಡಗಳನ್ನು ರಚಿಸಿದ್ದೇವೆ, ಮೊದಲು ನಮ್ಮ ಜಿಲ್ಲೆ 31ನೇ ಸ್ಥಾನ ಇತ್ತು, ಈಗ 15 ಅಥವಾ 16 ನೇ ಸ್ಥಾನದಲ್ಲಿ ಇದೆ. ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಿದ್ದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದರು.
ಇದಕ್ಕೂ ಮುನ್ನಕ್ಷಯರೋಗ ನಿರ್ಮೂಲನೆ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು. ಜೊತೆಗೆ ಕ್ಷಯರೋಗ ಹೊಂದಿದ ರೋಗಿಗಳಿಗೆ ಫುಡ್ ಕಿಟ್ ವಿತರಣೆ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಖ್ಯಾತನಾಳ ಅವರು ಅಧ್ಯಕ್ಷತೆ ವಹಿಸಿದ್ದರು. ಕ್ಷಯರೋಗ ನಿರ್ಮೂಲನೆ ಸಂಬಂಧ ಸೂಪರ ವೈಜರ್ ಸುರೇಶ ದೊಡ್ಡಮನಿ ಪ್ರತಿಜ್ಞೆ ವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ವಿಭಾಗೀಯ ಜಂಟಿ ನಿರ್ದೇಶಕರ ಕಾರ್ಯಾಲಯ ಉಪನಿರ್ದೇಶಕ ಡಾ.ಶರಣಬಸಪ್ಪ ಗಣಜಲಖೇಡ್, ಡಬ್ಲೂ.ಹೆಚ್.ಓ. ಡಾ.ನಿಬ್ರಾ ಶಿರೀನ, ಜಿಲ್ಲಾ ಕಾಲರ ನಿಯಂತ್ರಣಾಧಿಕಾರಿ ಡಾ.ವಿವೇಕನಾಂದ ರೆಡ್ಡಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ರಾಜಕುಮಾರ, ಆರ್.ಸಿ.ಹೆಚ್.ಓ. ಡಾ.ಸಿದ್ರಾಪ್ಪ ಪಾಟೀಲ ಭೂಸನೂರು, ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಶರಣಪ್ಪ, ತಾಲ್ಲೂಕು ವೈದ್ಯಾಧಿಕಾರಿ ಡಾ.ಮಾರುತಿ ಕಾಂಬಳೆ, ಡಾ.ಸಂದ್ಯಾರಾಣಿ, ಡಾ.ರೇಣುಕಾ, ಡಾ.ವೀಣಾ ಕಾಳಪ್ಪ, ಡಾ.ವೇಣುಗೋಪಾಲ, ಆಶಾ ಕಾರ್ಯಕರ್ತೆಯರು, ಎನ್.ಜಿ.ಓ. ಐ.ಸಿ.ಎಂ.ಆರ್., ಸ್ವಾಮಿವಿವೇಕನoದ ನಗರ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.
