ಡಾ.ಫಾರೂಕ್ ಮನ್ನೂರ ಅವರ ಸಾಮಾಜಿಕ ಕಾರ್ಯ ಶ್ಲಾಘನೀಯ : ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್

ಕಲಬುರಗಿ : 'ಕ್ಷಯ ಮುಕ್ತ ಭಾರತ ಅಭಿಯಾನ'ಕ್ಕೆ ಕಲಬುರಗಿಯ ಮನೂರ್ ಆಸ್ಪತ್ರೆಯ ಡಾ.ಫಾರೂಕ್ ಅಹ್ಮದ ಮನೂರ್ ಅವರು 250 ಕ್ಷಯ ರೋಗಿಗಳನ್ನು ಪೌಷ್ಠಿಕ ಆಹಾರದ ನೆರವಿಗಾಗಿ ದತ್ತು ಪಡೆದು ಕ್ಷಯ ರೋಗ ಮುಕ್ತ ಭಾರತ ಅಭಿಯಾನಕ್ಕೆ ಸಾಥ್ ನೀಡುತ್ತಿರುವ ಕಾರ್ಯ ಶಾಘ್ಲನಿಯವಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಹೇಳಿದರು.
ನಗರದ ಮನ್ನೂರ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕ್ಷಯರೋಗ ನಿರ್ಮೂಲನಾ ಕೇಂದ್ರ ಮನ್ನೂರ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ 250 ಕ್ಷಯ ರೋಗಿಗಳಿಗೆ ಮನ್ನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ದತ್ತು ಪಡೆದು 6 ತಿಂಗಳ ಕಾಲ ರೋಗಿಗಳಿಗೆ ಪೌಷ್ಠಿಕ ಪೌಡರ್ ವಿತರಣೆ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮನ್ನೂರ ಆಸ್ಪತ್ರೆಯ ವತಿಯಿಂದ ಮದುಮೇಹ ಮುಕ್ತ ಕಲಬುರಗಿ ಸಂಕಲ್ಪದೊಂದಿಗೆ ಜೀವನ ಪರ್ಯಂತ ಉಚಿತವಾಗಿ ಮಧುಮೇಹ ತಪಾಸಣೆ ಮಾಡಿಕೊಂಡು ಬರುತ್ತಿರುವುದು ಒಳ್ಳೆ ಕೆಲಸ. ಜಿಲ್ಲೆಯಲ್ಲಿ ಕಳೆದ ವರ್ಷ 500 ಕ್ಷಯ ರೋಗಿಗಳನ್ನು ಪೌಷ್ಠಿಕ ಆಹಾರದ ನೆರವಿಗಾಗಿ ದತ್ತು ಪಡೆದಿದ್ದರು. ಈ ವರ್ಷ 250 ರೋಗಿಗಳಿಗೆ ದತ್ತು ಪಡೆದಿದ್ದಾರೆ. ಇದರ ಜೊತೆಗೆ ಅನೇಕ ಸಾಮಾಜಿಕ ಸೇವೆ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ. ಇದೆ ರೀತಿ ತಾಲೂಕು ಮಟ್ಟದಲ್ಲಿ ಕೂಡ ಖಾಸಗಿ ಆಸ್ಪತ್ರೆ ಸಂಘ ಸಂಸ್ಥೆಗಳು ಪೌಷ್ಠಿಕ ಆಹಾರ ವಿತರಣೆಗೆ ಮುಂದಾಗಬೇಕು ಎಂದರು.
ಕ್ಷಯ ರೋಗ ವಾಸಿಯಾಗುವ ಕಾಯಿಲೆ, ಅಂತಹ ರೋಗಿಗಳು 6 ತಿಂಗಳಕಾಲ ನಿರಂತರವಾಗಿ ಔಷದ ತೆಗೆದುಕೊಂಡರೆ ಕಾಯಿಲೆ ಸಂಪೂರ್ಣ ಗುಣಪಡಿಸಬಹುದು ಯಾರು ಧೈರ್ಯಗೆಡಬಾರದು ಎಂದು ಹೇಳಿದರು.
ಮನ್ನೂರ ಆಸ್ಪತ್ರೆಯ ಮುಖ್ಯಸ್ಥ ಡಾ.ಫಾರುಕ್ ಅಹ್ಮದ್ ಮನ್ನೂರ ಮಾತನಾಡಿ, ಕ್ಷಯ ಮುಕ್ತ ಭಾರತ ಮಾಡಲು ನಮ್ಮದೊಂದು ಚಿಕ್ಕ ಪ್ರಯತ್ನ250 ಕ್ಷಯರೋಗಿಗಳಿಗೆ ಆರು ತಿಂಗಳವರೆಗೆ ದತ್ತು ತೆಗೆದುಕೊಂಡು ಅವರ ಆರೋಗ್ಯದ ಸುಧಾರಣೆ ನನ್ನ ಜವಾಬ್ದಾರಿ. ರೋಗಿಗಳು ಕೂಡ 6 ತಿಂಗಳ ವರೆಗೆ ನಿರಂತರ ವೈದ್ಯರು ಹೇಳಿದ ಹಾಗೆ ಮಾತ್ರ ಸೇವಿಸಿದರೆ ಟಿಬಿ ರೋಗದಿಂದ ಮುಕ್ತವಾಗಬಹುದು. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2025 ರ ವೇಳೆಗೆ ಭಾರತವನ್ನು ಕ್ಷಯರೋಗ ಮುಕ್ತವನ್ನಾಗಿಸಲು ಪಣತೊಟ್ಟಿದ್ದಾರೆ. ಕ್ಷಯರೋಗದಿಂದ ಬಳಲುತ್ತಿರುವ ಕ್ಷಯರೋಗಿಗೆ ಪೌಷ್ಟಿಕಾಂಶ ವಿವಿಧ ಸಿರಿ ಧಾನ್ಯದ ಆಹಾರ ಪೌಡರ್ ತಯಾರಿಸಿ ಪ್ಯಾಕ್ ಮಾಡಿ ಸಂಗ್ರಹಿಸಿಡಲಾಗುತ್ತೆ, ಅದನ್ನು ಸೇವಿಸಿದರೆ ಪೌಷ್ಟಿಕಾಂಶ ಹೆಚ್ಚುತ್ತದೆ, ಉತ್ತಮ ಜೀವನ ಮತ್ತು ಆರೋಗ್ಯ ಪಡೆಯುವಲ್ಲಿ ಸಂದೇಹವಿಲ್ಲ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಚಂದ್ರಕಾಂತ ನರಬೋಳಿ, ಟಿ.ಹೆಚ್.ಓ ಡಾ.ಮಾರುತಿ ಕಾಂಬಳೆ, ಡಾ.ಶಿರಿನ್,ಡಾ.ರೇಣುಕಾ, ವಿಕ್ಕಿ ಪವಾರ, ಡಾ.ಮತೀನ್ ,ಜಾಫರ್ ಮೋಮಿನ್ ಅಮೀನ್ ಜಿಬರನ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು.