ಕಲಬುರಗಿ | ಭಗತ್ ಸಿಂಗ್, ರಾಜ್ಗುರು, ಸುಖ್ದೇವ್ ಅವರ ಹುತಾತ್ಮ ದಿನ ಆಚರಣೆ

ಕಲಬುರಗಿ : ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಯುವಜನತೆಗೆ ಆದರ್ಶವಾಗಿದ್ದಾರೆ ಅವರ ವಿಚಾರಗಳು ಇಂದಿಗೂ ನಮ್ಮ ಸಮಾಜವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ದೇಶಪ್ರೇಮಿ ಯುವಾಂದೋಲನ ಸಂಘಟನೆ ವಿಭಾಗೀಯ ಸಂಚಾಲಕರಾದ ಲಕ್ಷ್ಮಣ್ ಮಂಡಲಗೇರ ಹೇಳಿದರು.
ನಗರದ ಜಿಡಿಎ ಬಡಾವಣೆಯಲ್ಲಿರುವ ಮೆಟ್ರಿಕ್ ನಂತರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ದೇಶಪ್ರೇಮಿ ಯುವಾಂದೋಲನ ಸಂಘಟನೆ ಆಯೋಜಿಸಿದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಹುತಾತ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕರಾದ ರಾಜೇಂದ್ರ ರಾಜವಾಳ ಮಾತನಾಡಿ, ಇಂದು ಭಗತ್ ಸಿಂಗ್, ರಾಜ್ಗುರು, ಸುಖ್ದೇವ್ ಅವರ ಹುತಾತ್ಮ ದಿನವನ್ನು ದೇಶದಾದ್ಯಂತ ಸ್ಮರಿಸುತ್ತಿದ್ದೇವೆ. ಅವರು ಸಹಜ ಜೀವನವನ್ನು ಅನುಭವಿಸಬಹುದಾಗಿತ್ತು, ಆದರೆ ದೇಶದ ಸ್ವಾತಂತ್ರ್ಯ ಹಾಗೂ ಅದರ ಭವಿಷ್ಯದ ಪರಿಕಲ್ಪನೆಗಾಗಿ ತಮ್ಮ ಜೀವನವನ್ನು ಅರ್ಪಿಸಿದರು ಎಂದರು.
ಈ ಕಾರ್ಯಕ್ರಮದಲ್ಲಿ ದೇಶಪ್ರೇಮಿ ಯುವಾಂದೋಲನ ಜಿಲ್ಲಾ ಸಂಚಾಲಕ ಮೈಲಾರಿ ದೊಡ್ಮನಿ, ವಸತಿ ನಿಲಯದ ಮೇಲ್ವಿಚಾರಕರಾದ ನೀಲಕಂಠ ಸಿಂಗೆ, ವಸತಿ ನಿಲಯದ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಹಾಜರಿದ್ದರು.