ಕಲಬುರಗಿ | ಮಂಗಳವಾದ್ಯ ಪಾಠಶಾಲೆಗೆ ಜಮೀನು ಮಂಜೂರು ಮಾಡಲು ಎಂಎಲ್ಸಿ ಕಮಕನೂರಗೆ ಮನವಿ

ಕಲಬುರಗಿ : ನಗರದಲ್ಲಿ ಮಂಗಳವಾದ್ಯ ಪಾಠಶಾಲೆಗೆ ಎರಡು ಎಕರೆ ಜಮೀನು ಮಂಜೂರು ಮಾಡುವಂತೆ ಗುಡೇಮಾರನಹಳ್ಳಿಯ ಆದಿ ಶಕ್ತಿ ಮಹೇಶ್ವರಿ ಪೀಠದ ಭವ್ಯ ತಾಯಮ್ಮನವರ ನೇತೃತ್ವದಲ್ಲಿ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರದ ನೆಹರು ನಗರ ಬಡಾವಣೆಯಲ್ಲಿರುವ ಶ್ರೀ ಸವಿತಾ ಮಹರ್ಷಿ ದೇವಸ್ಥಾನದಲ್ಲಿ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ವಾರಿಕ ಅವರ ನೇತೃತ್ವದಲ್ಲಿ ಮಂಡಲ ಪೂಜೆ ಶಾಂತಿ ಕಾರ್ಯಕ್ರಮದಲ್ಲಿ ನವಜೀವನ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ ಚಾಲನೆ ನೀಡಿದರು.
ಮಂಗಳವಾದ್ಯ ಪಾಠಶಾಲೆಗೆ ಎರಡು ಎಕರೆ ಜಮೀನು ಮಂಜೂರಿಗೆ ಮನವಿಗೆ ಸ್ಪಂದಿಸಿದ ಕಮಕನೂರು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಜಮೀನು ಮಂಜೂರು ಮಾಡುತ್ತೇನೆ ಎಂದು ತಿಳಿಸಿದರು.
ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಶರಣಗೌಡ ಅವರು, ಕಾರ್ಮಿಕ ಇಲಾಖೆಯ ಸೌಲಭ್ಯಗಳು ವಿವರಿಸಿದರು. ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರು ಅಸಂಘಟಿತ ವಲಯದ ಅಂಬೇಡ್ಕರ್ ಸಹಾಯಹಸ್ತ ಕಾರ್ಮಿಕ ಕಾರ್ಡ್ ವಿತರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಲೋಕೇಶ್ ಮಂಡ್ಯ, ಮಲ್ಲಣ್ಣ ವಡಗೇರಾ, ಸುಭಾಷ್ ಬಾದಾಮಿ, ಮದನ ಗದವಾಲ, ಗಣೇಶ ಚಿನ್ನಾಕರ, ಮಹೇಶ ಉಜ್ಜಲಿಕರ, ಮಹೇಶ ಪಾಣೇಗಾಂವ, ವಿದ್ಯಾಸಾಗರ ಹಾಬಾಳ ಮಹಿಳಾ ಘಟಕದ ಉಪಾಧ್ಯಕ್ಷರಾದ ತುಳಜಮ್ಮ ಮಾನೆ, ಲಲಿತಾಬಾಯಿ ತಾಂಡೂರಕರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ಸವಿತಾ ಪೀಠದ ಸವಿತಾನಂದನಾಥ ಸ್ವಾಮಿಜಿ ವಹಿಸಿದ್ದರು.