ʼಜಲ ಸಂರಕ್ಷಿತ ಗ್ರಾಮʼಗಳನ್ನು ರೂಪಿಸಲು ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ

Update: 2025-03-26 19:59 IST
Photo of Priyank Kharge

ಪ್ರಿಯಾಂಕ್‌ ಖರ್ಗೆ

  • whatsapp icon

ಕಲಬುರಗಿ : ಗ್ರಾಮೀಣ ಪ್ರದೇಶಗಳಲ್ಲಿ ಸುಸ್ಥಿರ ನೀರು ಸರಬರಾಜು ಮಾಡುವ ಮಹತ್ತರ ಆಶಯದೊಂದಿಗೆ ಹೊಸ ಆರ್ಥಿಕ ವರ್ಷದಲ್ಲಿ ಹೊಸ ಹೆಜ್ಜೆ ಇರಿಸಲು ಚಿಂತನೆ ನಡೆಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಅಧಿಕಾರಿ ಸಭೆ ನಡೆಸಿ ಮಾತನಾಡಿದ ಸಚಿವರು, 2025-26ರ ಆಯವ್ಯಯದಲ್ಲಿ ನೀರು ಸರಬರಾಜು ಮೂಲಭೂತ ಸೌಕರ್ಯಗಳ ಸುಸ್ಥಿರ ಮತ್ತು ವೈಜ್ಞಾನಿಕ ಮಾಹಿತಿ ವ್ಯವಸ್ಥೆ ಆಧಾರಿತ ಮೊಬೈಲ್‌ ಮತ್ತು ವೆಬ್‌ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ಘೋಷಣೆಯಾಗಿದ್ದು, ಈ ಸಂಬಂಧದಲ್ಲಿ ಕೈಗೊಳ್ಳಬೇಕಾದ ಹೊಸ ಯೋಜನೆಗಳಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಗ್ರಾಮೀಣ ನೀರು ಸರಬರಾಜು ಇಲಾಖೆ ಹಾಗೂ ನರೇಗಾ ಇಲಾಖಾ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಸಚಿವರು, ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಯಲ್ಲಿ ಸುಧಾರಣೆಗಳಾಗಬೇಕಾದ ಅಗತ್ಯತೆಯನ್ನು ಅಧಿಕಾರಿಗಳಿಗೆ ಮನದಟ್ಟು ಮಾಡಿದರು.

ನೀರಿನ ಮೂಲಗಳ ಅನ್ವೇಷಣೆ, ಜಲ ಸುಸ್ಥಿರತೆ, ಜಲ ಸಂರಕ್ಷಣೆ, ನೀರು ಕಲುಷಿತವಾಗದಂತೆ ತಡೆಯುವಿಕೆ, ನೀರು ಪೋಲಾಗುವುದನ್ನು ತಡೆಯುವಿಕೆ, ಮಳೆನೀರು ಸಂರಕ್ಷಣೆ, ನೀರಿನ ಮಿತ ಬಳಕೆ ಮುಂತಾದ ಆಶಯಗಳೊಂದಿಗೆ ʼಜಲ ಸಂರಕ್ಷಿತ ಗ್ರಾಮʼಗಳನ್ನು ರೂಪಿಸುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಜ್ಞರ ಸಲಹೆ ಪಡೆದು ನೀಲನಕ್ಷೆ ತಯಾರಿಸಲು ಸಚಿವ ಪ್ರಿಯಾಂಕ್‌ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದರು.

ಇಸ್ರೊ ಸಂಸ್ಥೆ ಉಪಗ್ರಹ ಆಧಾರಿತ ಅಂತರ್ಜಲ ಶೋಧನೆ ಮಾಡಿದ್ದು, ಈ ಮಾಹಿತಿಯ ಲಾಭವನ್ನು ಪಡೆಯಲು ನಿರ್ದೇಶಿಸಿದ ಸಚಿವರು ಜಿಲ್ಲಾ ಪಂಚಾಯತ್‌ ಅಧಿಕಾರಿಗಳೊಂದಿಗೆ ಭೂಗರ್ಭ ಇಲಾಖೆ, ಭಾರಿ ನೀರಾವರಿ ಹಾಗೂ ಸಣ್ಣ ಹಾಗೂ ಮಧ್ಯಮ ನೀರಾವರಿ ಇಲಾಖೆಗಳು, ಜಲಾನಯನ ಇಲಾಖೆ, ನಗರಾಭಿವೃದ್ಧಿ ಹಾಗೂ ಇನ್ನಿತರ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ಮತ್ತು ಸರ್ಕಾರೇತರ ಸೇವಾ ಸಂಸ್ಥೆಗಳು ಹಾಗೂ ಇತರ ವಿಷಯ ತಜ್ಞರ ಸಲಹೆಗಳನ್ನು ಪಡೆದುʼಜಲ ಸಂರಕ್ಷಿತ ಗ್ರಾಮʼಗಳನ್ನು ರೂಪಿಸಲು ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News