ಬಿಜೆಪಿಯಿಂದ ಉಚ್ಚಾಟನೆಯ ಬೆನ್ನಲ್ಲೇ ಕಲಬುರಗಿಗೆ ಆಗಮಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಬಸನಗೌಡ ಪಾಟೀಲ್ ಯತ್ನಾಳ್
ಕಲಬುರಗಿ : ವಿಜಯಪುರ ನಗರ ಮತಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೇಂದ್ರ ಬಿಜೆಪಿಯ ಶಿಸ್ತು ಸಮಿತಿ 6 ವರ್ಷಗಳ ಕಾಲ ಉಚ್ಚಾಟಿಸಿದ ಬೆನ್ನಲ್ಲೇ ಇದೀಗ ಅವರು ಕಲಬುರಗಿಯ ಚಿಂಚೋಳಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ.
ಉಚ್ಚಾಟನೆ ಮಾಡಿದ ಬೆನ್ನಲ್ಲೇ ದೆಹಲಿಯಿಂದ ನೇರವಾಗಿ ಹೈದರಾಬಾದ್ ಗೆ ಆಗಮಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಅವರ ಒಡೆತನದ ಸಿದ್ದಸಿರಿ ಎಥೆನಾಲ್ ಸಕ್ಕರೆ ಕಾರ್ಖಾನೆಯ ಗೆಸ್ಟ್ ಹೌಸ್ ಗೆ ಆಗಮಿಸಿದ್ದಾರೆ. ಇಲ್ಲಿಂದ ಮತ್ತೆ ವಿಜಯಪುರಕ್ಕೆ ತೆರಳುತ್ತಾರೋ ಇಲ್ಲವೋ ಎನ್ನುವುದು ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಉಚ್ಚಾಟಿಸಿದ ಬಳಿಕ ತಮ್ಮ ಸ್ವಂತ ಕ್ಷೇತ್ರದಲ್ಲೇ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದರು ಎಂದು ತಿಳಿದುಬಂದಿದೆ.
ಕೇಂದ್ರ ಶಿಸ್ತು ಸಮಿತಿಯು ಬುಧವಾರ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದರು.