ಗಾಝಾದಲ್ಲಿ ಶಾಶ್ವತ ಕದನ ವಿರಾಮಕ್ಕೆ ಆಗ್ರಹಿಸಿ ಕಲಬುರಗಿಯಲ್ಲಿ ಮಾ.28 ರಂದು ಪ್ರತಿಭಟನೆ

ಕಲಬುರಗಿ : ಗಾಝಾದಲ್ಲಿ ತಕ್ಷಣದ ಮತ್ತು ಶಾಶ್ವತ ಕದನ ವಿರಾಮಕ್ಕೆ ಒತ್ತಾಯಿಸಿ ಮತ್ತು ಫೆಲೆಸ್ತೀನ್ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸಿ ಜಾಯಿಂಟ್ ಆಕ್ಷನ್ ಕಮಿಟಿಯ ಜಿಲ್ಲಾ ಸಮಿತಿಯಿಂದ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಮುಖಂಡರಾದ ನ್ಯಾಯವಾದಿ ಜಬ್ಬಾರ್ ಗೋಲಾ ತಿಳಿಸಿದ್ದಾರೆ.
ನಗರದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಮಾ.28ರಂದು ಸಂಜೆ 5 ಗಂಟೆಯಿಂದ ನಗರದ ಮಿಜಗುರಿ ಬಡಾವಣೆಯಿಂದ ಮುಸ್ಲಿಂ ಚೌಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಫೆಲೆಸ್ತೀನ್ ನಲ್ಲಿ ನಡೆಯುತ್ತಿರುವ ನರಮೇಧ ನಿಲ್ಲಿಸುವಂತೆ ಮತ್ತು ಶಾಶ್ವತ ಕದನ ವಿರಾಮ ಘೋಷಣೆಗೆ ಆಗ್ರಹಿಸಲಾಗುವುದೆಂದು ಹೇಳಿದರು.
ಇಮ್ಲಿ ಮೊಹೆಲ್ಲಾ ದರ್ಗಾದ ಸಜ್ಜಾದಹನಶೀನ್ ಹಜರತ್ ಹಿದಾಯತುಲ್ಲಾ ಖಾದ್ರಿ ಕಿಬ್ಲಾ, ಜಾಯಿಂಟ್ ಆಕ್ಷನ್ ಕಮಿಟಿಯ ಸದಸ್ಯರಾದ ಮುನ್ನಾ ಧಾರವಾಡ ಕಲಬುರಗಿ, ಮೌಲಾನಾ ಮುಹಮ್ಮದ್ ನೂಹ್, ಹಿರಿಯ ಪತ್ರಕರ್ತ ಅಝಿಝುಲ್ಲಾ ಸರ್ಮಸ್ತ್, ಅಫ್ಜಾಲ್ ಮುಹಮ್ಮದ್, ಮೌಲಾನಾ ಅಬ್ದುಲ್ ಹಮೀದ್ ಬಾಕ್ವಿ ಖಾಸ್ಮಿ, ಮುಬೀನ್ ಅಹ್ಮದ್ ಝಖ್ಮ್ ಇದ್ದರು.