ಮಂಡ್ಯ: ಆಟವಾಡುತ್ತಾ ತಮ್ಮನಿಗೆ ಗುಂಡು ಹಾರಿಸಿದ ಅಪ್ರಾಪ್ತ ಬಾಲಕ; ಮೂರು ವರ್ಷದ ಮಗು ಮೃತ್ಯು
ಮಂಡ್ಯ: ಪಿಸ್ತೂಲ್ ಹಿಡಿದು ಆಟವಾಡುತ್ತಿದ್ದ ಬಾಲಕ ತನ್ನ ತಮ್ಮನ ಮೇಲೆ ಗುಂಡು ಹಾರಿಸಿದ್ದು, ಮೂರು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಾಗಮಂಗಲ ತಾಲೂಕಿನ ದೊಂದೆಮಾದನಹಳ್ಳಿ ಗ್ರಾಮದಲ್ಲಿ ರವಿವಾರ ಸಂಜೆ ನಡೆದಿದೆ.
ಘಟನೆಯಲ್ಲಿ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕ ಶಶಾಂಕ್ ಎಂಬುವರ ಪುತ್ರ ಮೂರು ವರ್ಷದ ಅಭಿಷೇಕ್ ಮೃತಪಟ್ಟಿದ್ದಾನೆ.
ಶಶಾಂಕ್ ಕುಟುಂಬ ತನ್ನ ಹದಿಮೂರು ವರ್ಷದ ಸುದೀಪ್ ದಾಸ್, ಮೂರು ವರ್ಷದ ಅಭಿಜಿತ್ ಜೊತೆಯಲ್ಲಿ ದೊಂದೆಮಾದನಹಳ್ಳಿಯ ನರಸಿಂಹಮೂರ್ತಿ ಅವರ ಕೋಳಿ ಫಾರಂನಲ್ಲಿ ಐದು ವರ್ಷದಿಂದ ಕೆಲಸ ಮಾಡಿಕೊಂಡು ವಾಸವಾಗಿತ್ತು. ಮಾಲಕ ಲೈಸೆನ್ಸ್ ಪಡೆದಿದ್ದ ಅಸಲಿ ಪಿಸ್ತೂಲನ್ನು ಕೋಳಿ ಫಾರಂನಲ್ಲಿ ಇಟ್ಟಿದ್ದರು ಎನ್ನಲಾಗಿದೆ.
ಫಾರಂನಲ್ಲಿ ಸಿಕ್ಕಿದ ಪಿಸ್ತೂಲನ್ನು ಬಾಲಕ ಸುದೀಪ್ ದಾಸ್ ತೆಗೆದುಕೊಂಡು ತನ್ನ ಸಹೋದರ ಅಭಿಜಿತ್ ಜೊತೆ ಆಟವಾಡುತ್ತಿದ್ದಾಗ ಫೈರ್ ಮಾಡಿದ್ದು, ಗುಂಡು ಬಾಲಕನ ಹೊಟ್ಟೆಯನ್ನು ಸೀಳಿದೆ. ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಈ ವೇಳೆ ಪಕ್ಕದಲ್ಲೇ ಇದ್ದ ಅಭಿಜಿತ್ ತಾಯಿ ಲಿಪಿಕಾ ಕೂಡ ಗಾಯಗೊಂಡಿದ್ದು, ಬೆಳ್ಳೂರು ಶ್ರೀ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ನಾಗಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28