ನಟಿ ತ್ರಿಶಾ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ನಟ ಮನ್ಸೂರ್ ಅಲಿ ಖಾನ್, ವ್ಯಾಪಕ ಖಂಡನೆ

Update: 2023-11-19 09:09 GMT

Photo : indiatoday.in

ಚೆನ್ನೈ: ಲೋಕೇಶ್‌ ಕನಗರಾಜ್‌ ನಿರ್ದೇಶನದ ವಿಜಯ್‌ ನಟನೆಯ ʼಲಿಯೋʼ ಚಿತ್ರದಲ್ಲಿ ನಟಿ ತ್ರಿಷಾ ಕೃಷ್ಣನ್ ಜೊತೆ ರೇಪ್‌ ಸೀನ್‌ ನಟಿಸಲು ಅವಕಾಶ ಮಾಡಿಕೊಟ್ಟಿಲ್ಲ ಎಂದು ಹಿರಿಯ ನಟ ಮನ್ಸೂರ್‌ ಅಲಿ ಖಾನ್‌ ಅವರು ನೀಡಿರುವ ಅವಹೇಳನಕಾರಿ ಹೇಳಿಕೆಗೆ ನೆಟ್ಟಿಗರು, ಸೆಲೆಬ್ರಿಟಿಗಳು ತಮ್ಮ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ.

“ಖುಷ್ಬೂ, ರೋಜಾ ಮೊದಲಾದ ನಟಿಯರನ್ನು ಎತ್ತಿಕೊಂಡು ಹೋಗಿ ರೇಪ್‌ ಮಾಡುವ ಸೀನ್‌ಗಳಲ್ಲಿ ನಾನು ನಟಿಸಿದ್ದೆ. ಸುಮಾರು 150 ಚಿತ್ರಗಳಲ್ಲಿ ಇಂಥ ದೃಶ್ಯ ನಟಿಸಿದ್ದೇನೆ. ನಾನು ತ್ರಿಶಾ ಜೊತೆ ನಟಿಸುತ್ತಿದ್ದೇನೆ ಎಂದಾಗ, ಚಿತ್ರದಲ್ಲಿ ಬೆಡ್‌ರೂಮ್‌ ಸೀನ್‌ ಇರಬಹುದು ಎಂದು ಭಾವಿಸಿದ್ದೆ. ನಾನು ಸಾಕಷ್ಟು ಅತ್ಯಾಚಾರದ ದೃಶ್ಯಗಳನ್ನು ಮಾಡಿರುವುದರಿಂದ ಇದು ನನಗೆ ಹೊಸದಲ್ಲ. ಆದರೆ ಇವರು (ಲಿಯೋ ಚಿತ್ರತಂಡದವರು) ಕಾಶ್ಮೀರದಲ್ಲಿ ಶೂಟಿಂಗ್ ಸಮಯದಲ್ಲಿ ತ್ರಿಷಾರನ್ನು ನನಗೆ ತೋರಿಸಿಯೇ ಇಲ್ಲ” ಎಂದು ಮನ್ಸೂರ್‌ ಖಾನ್‌ ಮಾಧ್ಯಮಗಳೊಂದಿಗೆ ಹೇಳಿದ್ದರು.

ಮನ್ಸೂರ್‌ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸಹನಟಿಯೊಂದಿಗೆ ತೋರಿದ ಅಗೌರವಕ್ಕೆ ನಿರ್ದೇಶಕ ಲೋಕೇಶ್‌ ಕನಗರಾಜ್‌ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನ್ಸೂರ್‌ ಹೇಳಿಕೆಗಳು ಸ್ತ್ರೀವಿರೋಧಿ ಮಾತ್ರವಲ್ಲ ವೃತ್ತಿಪರತೆಗೂ ಅಗೌರವ ಎಂದು ನೆಟ್ಟಿಗರು ಖಂಡಿಸಿದ್ದಾರೆ.

ನಟಿ ತ್ರಿಷಾ ಕೂಡಾ ತಮ್ಮ ಖಂಡನೆಯನ್ನು ವ್ಯಕ್ತಪಡಿಸಿದ್ದು ಮನ್ಸೂರ್‌ ಆಲಿ ಖಾನ್‌ ಜೊತೆ ಮುಂದೆ ಎಂದೂ ನಟಿಸುವುದಿಲ್ಲ ಎಂದು ಘೋಷಿಸಿದ್ದಾರೆ.

“ಮನ್ಸೂರ್ ಅಲಿ ಖಾನ್ ಅವರು ನನ್ನ ಬಗ್ಗೆ ಅಸಹ್ಯವಾಗಿ ಮಾತನಾಡಿರುವ ವೀಡಿಯೊ ನನ್ನ ಗಮನಕ್ಕೆ ಬಂದಿದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದು ಸೆಕ್ಸಿಸ್ಟ್, ಅಗೌರವ, ಸ್ತ್ರೀದ್ವೇಷ, ಮತ್ತು ಕೀಳು ಅಭಿರುಚಿಯನ್ನು ಹೊಂದಿದೆ. ಅವರಂತಹ ವ್ಯಕ್ತಿಯೊಂದಿಗೆ ನಟಿಸದೆ ಇರುವುದಕ್ಕೆ ನಾನು ಕೃತಜ್ಞಳು. ನನ್ನ ಮುಂದಿನ ವೃತ್ತಿಜೀವನದಲ್ಲಿಯೂ ಅದು ಎಂದಿಗೂ ನಡೆಯದಂತೆ ನೋಡಿಕೊಳ್ಳುತ್ತೇನೆ. ಅವರಂತಹವರು ಮನುಕುಲಕ್ಕೆ ಕೆಟ್ಟ ಹೆಸರು” ಎಂದು ತ್ರಿಷಾ ಟ್ವೀಟ್‌ ಮಾಡಿದ್ದಾರೆ.

“ನಾವೆಲ್ಲರೂ ಒಂದೇ ತಂಡದಲ್ಲಿ ಕೆಲಸ ಮಾಡಿದ್ದರಿಂದ ಮನ್ಸೂರ್ ಅಲಿ ಖಾನ್ ಅವರು ಮಾಡಿದ ಸ್ತ್ರೀವಿರೋಧಿ ಪ್ರತಿಕ್ರಿಯೆಗಳನ್ನು ಕೇಳಿ ಅಸಮಾಧಾನ ಮತ್ತು ಕೋಪಗೊಂಡಿದ್ದೇನೆ. ಮಹಿಳೆಯರು, ಸಹ ಕಲಾವಿದರು ಮತ್ತು ವೃತ್ತಿಪರರಿಗೆ ನೀಡುವ ಗೌರವದಲ್ಲಿ ಯಾವುದೇ ರಾಜಿ ಇಲ್ಲ. ನಾನು ಈ ನಡವಳಿಕೆಯನ್ನು ಸಂಪೂರ್ಣವಾಗಿ ಖಂಡಿಸುತ್ತೇನೆ” ಎಂದು ನಿರ್ದೇಶಕ ಲೋಕೇಶ್‌ ಕನಗರಾಜ್ ಟ್ವೀಟ್‌ ಮಾಡಿದ್ದಾರೆ. ‌

ಈ ನಡುವೆ ನೆಟ್ಟಿಗರು ನಟ ವಿಜಯ್‌ ಹಾಗೂ ರಜಿನಿಕಾಂತ್‌ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದು, ತನ್ನ ಚಿತ್ರದಲ್ಲಿ ನಟಿಸಿರುವ ನಟಿ ಬಗ್ಗೆ ಸಹನಟ ಮಾಡಿರುವ ಕೆಟ್ಟ ಅಭಿರುಚಿಯ ಹೇಳಿಕೆಗಳಿಗೆ ವಿಜಯ್‌ ಯಾಕೆ ಇನ್ನೂ ಖಂಡನೆ ವ್ಯಕ್ತಪಡಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಅದೇ ವೇಳೆ, ಜೈಲರ್‌ ಚಿತ್ರದಲ್ಲಿ ನಟಿ ತಮನ್ನಾ ಬಗ್ಗೆ ರಜಿನಿಕಾಂತ್‌ ನೀಡಿರುವ ಹೇಳಿಕೆಯನ್ನೂ ಉಲ್ಲೇಖಿಸಿ ಅವರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೈಲರ್‌ ಚಿತ್ರದಲ್ಲಿ ನಟಿ ತಮನ್ನಾ ಜೊತೆ ನನಗೆ ಮಾತನಾಡಲೂ ಬಿಟ್ಟಿರಲಿಲ್ಲ ಎಂದು ರಜಿನಿ ಕಾಂತ್‌ ಅವರು ತಮಾಷೆಯ ಧಾಟಿಯಲ್ಲಿ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News