ಚುನಾವಣಾ ಬಾಂಡ್: 30 ಪ್ರಮುಖ ದೇಣಿಗೆದಾರ ಕಂಪೆನಿಗಳ ಪೈಕಿ 14 ಕಂಪೆನಿಗಳ ಮೇಲೆ ದಾಳಿ ನಡೆಸಿದ್ದ ತನಿಖಾ ಸಂಸ್ಥೆಗಳು

Update: 2024-03-15 16:25 GMT

ಹೊಸ ದಿಲ್ಲಿ: ಎಪ್ರಿಲ್ 12, 2019ರಿಂದ ಜನವರಿ 2024ರವರೆಗೆ ಚುನಾವಣಾ ಬಾಂಡ್‌ಗಳನ್ನು ಖರೀದಿಸಿರುವ 30 ದೇಣಿಗೆದಾರ ಕಂಪೆನಿಗಳ ಪೈಕಿ ಕನಿಷ್ಠ ಪಕ್ಷ 14 ಕಂಪೆನಿಗಳು ರಾಜ್ಯ ಇಲ್ಲವೆ ಕೇಂದ್ರ ತನಿಖಾ ಸಂಸ್ಥೆಗಳಿಂದ ಕ್ರಮಕ್ಕೆ ಒಳಗಾಗಿದ್ದವು ಎಂಬ ಸಂಗತಿ ಚುನಾವಣಾ ಆಯೋಗಕ್ಕೆ ಭಾರತೀಯ ಸ್ಟೇಟ್ ಬ್ಯಾಂಕ್ ಸಲ್ಲಿಸಿರುವ ಚುನಾವಣಾ ಬಾಂಡ್ ದತ್ತಾಂಶಗಳಿಂದ ಬಹಿರಂಗಗೊಂಡಿದೆ.

ಈ ಪೈಕಿ ಫ್ಯೂಚರ್ ಗೇಮಿಂಗ್ ಆ್ಯಂಡ್ ಹೋಟೆಲ್ ಸರ್ವಿಸಸ್, ಮೇಘಾ ಎಂಜಿನಿಯರಿಂಗ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್, ಹಾಲ್ದಿಯಾ ಎನರ್ಜಿ ಲಿಮಿಟೆಡ್, ವೇದಾಂತ ಲಿಮಿಟೆಡ್, ಯಶೋಧಾ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್, ಡಿಎಲ್‌ಎಫ್ ಕಮರ್ಷಿಯಲ್ ಡೆವೆಲಪರ್ಸ್ ಲಿಮಿಟೆಡ್, ಜಿಂದಾಲ್ ಸ್ಟೀಲ್ ಆ್ಯಂಡ್ ಪವರ್ ಲಿಮಿಟೆಡ್, ಚೆನ್ನೈ ಗ್ರೀನ್‌ವುಡ್ಸ್ ಪ್ರೈವೇಟ್ ಲಿಮಿಟೆಡ್, ಡಾ. ರೆಡ್ಡಿ ಲ್ಯಾಬೊರೇಟರೀಸ್ ಲಿಮಿಟೆಡ್, ಐಎಫ್‌ಬಿ ಆಗ್ರೊ ಲಿಮಿಟೆಡ್, ಎನ್‌ಸಿಸಿ ಲಿಮಿಟೆಡ್, ದಿವಿ ಎಸ್ ಲ್ಯಾಬೊರೇಟೊರಿ ಲಿಮಿಟೆಡ್, ಯುನೈಟೆಡ್ ಫಾಸ್ಫರಸ್ ಇಂಡಿಯಾ ಲಿಮಿಟೆಡ್, ಅರಬಿಂದೊ ಫಾರ್ಮಾ ಸೇರಿವೆ.

ಈ ಎಲ್ಲ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ಇಲ್ಲವೆ ಆದಾಯ ತೆರಿಗೆ ಇಲಾಖೆ ಅಥವಾ ಕೇಂದ್ರ ತನಿಖಾ ಸಂಸ್ಥೆ ಯಾ ರಾಜ್ಯ ತನಿಖಾ ಸಂಸ್ಥೆಗಳಿಂದ ದಾಳಿಗೊಳಗಾಗಿದ್ದವು.

ಈ ಪೈಕಿ ಜಾರಿ ನಿರ್ದೇಶನಾಲಯದಿಂದ ದಾಳಿಗೊಳಗಾಗಿದ್ದ ಫ್ಯೂಚರ್ ಗೇಮಿಂಗ್ ಆ್ಯಂಡ್ ಹೋಟೆಲ್ ಸರ್ವಿಸಸ್ ಸಂಸ್ಥೆ ಅಕ್ಟೋಬರ್ 27, 2020ರಿಂದ ಅಕ್ಟೋಬರ್ 5, 2023ರ ನಡುವೆ ಒಟ್ಟು ರೂ. 1,368 ಕೋಟಿ ರೂಪಾಯಿಯನ್ನು ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿದೆ. 2022ರಲ್ಲಿ ಈ ಸಂಸ್ಥೆಯ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯವು, ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಅದರ ವಿವಿಧ ಉಪ ಪೂರೈಕೆದಾರರ ರೂ. 409 ಕೋಟಿ ಮೊತ್ತದ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

ಮೇಘಾ ಎಂಜಿನಿಯರಿಂಗ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ರೂ. 966 ಕೋಟಿ ದೇಣಿಗೆಯನ್ನು ನೀಡಿದೆ. ಆಂಧ್ರಪ್ರದೇಶದ ಉದ್ಯಮಿ ಕೃಷ್ಣಾ ರೆಡ್ಡಿ ಒಡೆತನದ ಈ ಸಂಸ್ಥೆಯ ಮೇಲೆ ಹೈದರಾಬಾದ್ ಹಾಗೂ ಇನ್ನಿತರ ನಗರಗಳಲ್ಲಿನ ಅದರ ಕಚೇರಿಗಳ ಮೇಲೆ ಅಕ್ಟೋಬರ್ 2019ರಲ್ಲಿ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿತ್ತು.

ಹಾಲ್ದಿಯಾ ಎನರ್ಜಿ ಲಿಮಿಟೆಡ್ ರೂ. 377 ಕೋಟಿ ದೇಣಿಗೆ ನೀಡಿದೆ. ಈ ಸಂಸ್ಥೆಯ ಮೇಲೆ ಮಾರ್ಚ್ 2020ರಲ್ಲಿ ಕೇಂದ್ರ ತನಿಖಾ ಸಂಸ್ಥೆ ದಾಳಿ ನಡೆಸಿತ್ತು.

ವೇದಾಂತ ಲಿಮಿಟೆಡ್ ರೂ. 400 ಕೋಟಿ ದೇಣಿಗೆ ನೀಡಿದೆ. ಈ ಸಂಸ್ಥೆಯ ಮೇಲೆ ಅಕ್ರಮ ಹಣ ವರ್ಗಾವಣೆ ಆರೋಪದಡಿ ಆಗಸ್ಟ್ 2022ರಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು.

ಯಶೋಧಾ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ರೂ. 162 ಕೋಟಿ ದೇಣಿಗೆ ನೀಡಿದೆ. ಈ ಸಂಸ್ಥೆಯ ಮೇಲೆ ಡಿಸೆಂಬರ್ 2020ರಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.

ಡಿಎಲ್‌ಎಫ್ ಕಮರ್ಷಿಯಲ್ ಡೆವಲಪರ್ಸ್ ಲಿಮಿಟೆಡ್ ರೂ. 130 ಕೋಟಿ ದೇಣಿಗೆ ನೀಡಿದೆ. ಈ ಸಂಸ್ಥೆಯ ಮೇಲೆ ಜನವರಿ 2019ರಲ್ಲಿ ಕೇಂದ್ರ ತನಿಖಾ ಸಂಸ್ಥೆ ದಾಳಿ ನಡೆಸಿತ್ತು. ನವೆಂಬರ್ 2023ರಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು.

ಜಿಂದಾಲ್ ಸ್ಟೀಲ್ ಆ್ಯಂಡ್ ಪವರ್ ಲಿಮಿಟೆಡ್ ರೂ. 123 ಕೋಟಿ ದೇಣಿಗೆ ನೀಡಿದೆ. ಈ ಸಂಸ್ಥೆಯ ಮೇಲೆ ಎಪ್ರಿಲ್ 2022ರಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಚೆನ್ನೈ ಗ್ರೀನ್‌ವುಡ್ಸ್ ಪ್ರೈವೇಟ್ ಲಿಮಿಟೆಡ್ ರೂ. 105 ಕೋಟಿ ದೇಣಿಗೆ ನೀಡಿದೆ. ಈ ಸಂಸ್ಥೆಯ ಮೇಲೆ ಜುಲೈ 2021ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.

ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಲಿಮಿಟೆಡ್ ರೂ. 80 ಕೋಟಿ ದೇಣಿಗೆ ನೀಡಿದೆ. ಈ ಸಂಸ್ಥೆಯ ಮೇಲೆ ನವೆಂಬರ್ 2023ರಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.

ಐಎಫ್‌ಬಿ ಆಗ್ರೊ ಲಿಮಿಟೆಡ್ ರೂ. 92 ಕೋಟಿ ದೇಣಿಗೆ ನೀಡಿದೆ. ಈ ಸಂಸ್ಥೆಯ ಮೇಲೆ ಜಿಎಸ್‌ಟಿ ನಿರ್ದೇಶನಾಲಯ ದಾಳಿ ನಡೆಸಿತ್ತು.

ಎನ್‌ಸಿಸಿ ಲಿಮಿಟೆಡ್ ರೂ. 60 ಕೋಟಿ ದೇಣಿಗೆ ನೀಡಿದೆ. ಈ ಸಂಸ್ಥೆಯ ಮೇಲೆ ನವೆಂಬರ್ 2022ರಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.

ದಿವಿ ಎಸ್ ಲ್ಯಾಬೊರೇಟೊರಿ ಲಿಮಿಟೆಡ್ ರೂ. 55 ಕೋಟಿ ದೇಣಿಗೆ ನೀಡಿದೆ. ಈ ಸಂಸ್ಥೆಯ ಮೇಲೆ ಫೆಬ್ರವರಿ 2019ರಲ್ಲಿ ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಂಡಿತ್ತು.

ಯುನೈಟೆಡ್ ಫಾಸ್ಫರಸ್ ಇಂಡಿಯಾ ಲಿಮಿಟೆಡ್ ರೂ. 50 ಕೋಟಿ ದೇಣಿಗೆ ನೀಡಿದೆ. ಈ ಸಂಸ್ಥೆಯ ಮೇಲೆ ಜನವರಿ 2020ರಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.

ಅರಬಿಂದೊ ಫಾರ್ಮಾ ರೂ. 1.6 ಕೋಟಿ ದೇಣಿಗೆ ನೀಡಿದೆ. ಈ ಸಂಸ್ಥೆಯ ಮೇಲೆ ನವೆಂಬರ್ 2022ರಲ್ಲಿ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ, ಸಂಸ್ಥೆಯ ನಿರ್ದೇಶಕ ಶರತ್ ರೆಡ್ಡಿಯನ್ನು ಬಂಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News