ದ್ವೇಷ ಹರಡಿದ ಆರೋಪ ; ‘ಆಲ್ಟ್ ನ್ಯೂಸ್’ನ ಮುಹಮ್ಮದ್ ಝುಬೈರ್ ವಿರುದ್ಧ ಎಫ್ಐಆರ್ ದಾಖಲು
ಗಾಝಿಯಾಬಾದ್ : ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಹರಡುತ್ತಿರುವ ಹಾಗೂ ಇತರ ಆರೋಪಗಳ ಅಡಿ ‘ಆಲ್ಟ್ ನ್ಯೂಸ್’ನ ಸಹ ಸಂಸ್ಥಾಪಕ ಮುಹಮ್ಮದ್ ಝಬೈರ್ ವಿರುದ್ಧ ಸೋಮವಾರ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಾದಾತ್ಮಕ ಧರ್ಮಗುರು ನರಸಿಂಗಾನಂದ ಅವರ ಆಪ್ತೆ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಮುಹಮ್ಮದ್ ಝುಬೈರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರವಾದಿ ಮುಹಮ್ಮದ್ ಅವರ ಕುರಿತ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿ ನರಸಿಂಗಾನಂದ ಅವರ ವಿರುದ್ಧ ಹಲವು ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದ ಅವರ ವಿರುದ್ಧ ಮುಸ್ಲಿಮರ ಗುಂಪು ಪ್ರತಿಭಟನೆ ನಡೆಸುತ್ತಿದೆ.
ಯತಿ ನರಸಿಂಗಾನಂದ ಸರಸ್ವತಿ ಫೌಂಡೇಶನ್ನ ಪ್ರಧಾನ ಕಾರ್ಯದರ್ಶಿಯಾಗಿರುವ ಉದಿತಾ ತ್ಯಾಗಿ ಕವಿನಗರ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ನರಸಿಂಗಾನದ ವಿರುದ್ಧ ಮುಸ್ಲಿಮರನ್ನು ಹಿಂಸಾಚಾರಕ್ಕೆ ಪ್ರಚೋದಿಸಲು ಮುಹಮ್ಮದ್ ಝುಬೈರ್ ಅಕ್ಟೋಬರ್ 3ರಂದು ನರಸಿಂಗಾನಂದ ಅವರ ಹಳೆಯ ಕಾರ್ಯಕ್ರಮದ ವೀಡಿಯೊ ತುಣುಕನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಹಮ್ಮದ್ ಝುಬೈರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 196, 228, 299, 356(3) ಹಾಗೂ 351(2)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.