ವಾರಣಾಸಿಯಲ್ಲಿ ಮೋದಿ ಸೋತರೆ ಮಾತ್ರ ಭಾರತ ಹಿಂದೂ ರಾಷ್ಟ್ರವಾಗಲು ಸಾಧ್ಯ: ಸುಬ್ರಮಣಿಯನ್‌ ಸ್ವಾಮಿ

Update: 2024-03-04 11:34 GMT

ಸುಬ್ರಮಣಿಯನ್ ಸ್ವಾಮಿ (PTI)

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆಗಳನ್ನು ಮಾಡುತ್ತಲೇ ಬಂದಿರುವ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು, ಪ್ರಧಾನಿ ವಿರುದ್ಧ ಮತ್ತೆ ಅಸಮಾಧಾನ ಹೊರ ಹಾಕಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಸೋತರೆ ಮಾತ್ರ ಭಾರತ ಹಿಂದೂ ರಾಷ್ಟ್ರವಾಗಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಪ್ರಜ್ಞಾ ಸಿಂಗ್ ಠಾಕೂರ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡದೆ ಆರೆಸ್ಸೆಸ್ ಅನ್ನು ‘ಹಿಂದೂ ಭಯೋತ್ಪಾದನೆ’ ಎಂದು ಆರೋಪಿಸಿದ ಕೃಪಾ ಶಂಕರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ ಎಂದು ಎಕ್ಸ್ ಬಳಕೆದಾರರೊಬ್ಬರು ಮಾಡಿರುವ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಸ್ವಾಮಿ, ಮೋದಿಯನ್ನು ಸೋಲಿಸಿದರೆ ಮಾತ್ರ ಹಿಂದೂ ರಾಷ್ಟ್ರ ಮಾಡಲು ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ.

"2024 ರಲ್ಲಿ ಬಿಜೆಪಿ ಬಹುಮತ ಗಳಿಸಿದರೆ ಮತ್ತು ಅದೇ ಸಮಯದಲ್ಲಿ ಮೋದಿಯನ್ನು ವಾರಣಾಸಿಯಲ್ಲಿ ಸೋಲಿಸಿದರೆ ಮಾತ್ರ ನಾವು ಹಿಂದೂ ರಾಷ್ಟ್ರವನ್ನು ಮಾಡಲು ಸಾಧ್ಯವಾಗುತ್ತದೆ" ಎಂದು ಸುಬ್ರಮಣಿಯನ್‌ ಸ್ವಾಮಿ ಪೋಸ್ಟ್ ಮಾಡಿದ್ದಾರೆ.

“ಹೆಚ್ಚಿತ್ತಿರುವ ʼಹಿಂದೂ ಹೆಮ್ಮೆʼ ಭಾವನೆಯಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಭವಿಷ್ಯವು ಮತ್ತಷ್ಟು ಉಜ್ವಲವಾಗುವ ಸಾಧ್ಯತೆ ಇದ್ದು, ಇದರ ಹಿಂದೆ ಮೋದಿಯ ಯಾವುದೇ ಮ್ಯಾಜಿಕ್ ಇಲ್ಲ” ಎಂದೂ ಅವರು ಇತ್ತೀಚೆಗೆ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News