ಕಾಡು ಮೊಲಗಳ ಬೇಟೆ, ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಹಿಡಿದು ಸಂಭ್ರಮಾಚರಣೆ ನಡೆಸಿದ ಮಸ್ಕಿ ಕ್ಷೇತ್ರದ ಶಾಸಕನ ಪುತ್ರ ಸೋದರ: ಆರೋಪ
Update: 2025-04-01 13:15 IST
ರಾಯಚೂರು : ಜಿಲ್ಲೆಯ ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರವಿಹಾಳ ಅವರ ಪುತ್ರ ಮತ್ತು ಸೋದರ ಕಾಡು ಮೊಲಗಳನ್ನು ಬೇಟೆಯಾಡಿದ್ದಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಹಿಡಿದು ಸಂಭ್ರಮಾಚರಣೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಶಂಕರಲಿಂಗೇಶ್ವರ ಜಾತ್ರೆಯಲ್ಲಿ ಮೊಲ ಬೇಟೆ ಆಡಿದ್ದ ತುರವಿಹಾಳ ಅವರ ಸೋದರ ಮತ್ತು ಪುತ್ರ ಈ ಕೃತ್ಯವನ್ನೆಸಗಿದ್ದಾರೆ. ಅವರ ಸುತ್ತಲಿರುವ ಜನ ಸಿಳ್ಳು ಕೇಕೆ ಹಾಕುತ್ತಾ ಶಾಸಕ ಪುತ್ರ ಮತ್ತು ಸೋದರನ ಕೃತ್ಯಕ್ಕೆ ಬೆಂಬಲ ವ್ಯಕ್ತಪಡಿಸಿದರು.
ವಾದ್ಯಗಳ ಸಮೇತ ರಕ್ತಸಿಕ್ತ ಮೊಲಗಳ ಜೊತೆ ಮೆರವಣಿಗೆ ಮಾಡಿಸಿಕೊಂಡಿರುವ ಶಾಸಕರ ಕುಟುಂಬಸ್ಥರ ವರ್ತನೆ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದುಷ್ಕೃತ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅರಣ್ಯ ಇಲಾಖೆಯ ಮೌನಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.