ಟಿಪ್ಪುವಿನ ನೆನಪಲ್ಲಿ ಹುತ್ರಿದುರ್ಗ ಕೋಟೆ ಚಾರಣ...

Update: 2024-07-03 07:13 GMT

ಕೀರ್ತಿ ಮಲ್ಹೋತ್ರಾ

ಅನುವಾದ: ಸಫ್ವಾನ್ ವೇಣೂರು

‘‘ಶರಣಾಗತಿಯ ಕುರಿತು ನಾನು ಒಂದು ಕ್ಷಣವೂ ಚಿಂತಿಸಲಾರೆ. ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ಟಿಪ್ಪುವಿನ ಉಪ್ಪು ತಿಂದು, ಅವನ ವಿಶ್ವಾಸಾರ್ಹ ಸೇವಕನಾಗಿ ನನ್ನ ಸುಪರ್ದಿಯಲ್ಲಿರುವ ಈ ಕೋಟೆಯನ್ನು ಶ್ರೀರಂಗಪಟ್ಟಣವನ್ನು ನನ್ನ ಒಡೆಯ ತೊರೆಯುವ ತನಕ ನಾನು ಬಿಟ್ಟು ಕೊಡಲಾರೆ. ಉದಾರಿಯಾದ ತಂದೆಯ ಮಕ್ಕಳಂತೆ ಜನರು ಟಿಪ್ಪುವನ್ನು ಬೆಂಬಲಿಸಲು ತಮ್ಮ ಜೀವವೂ ಅಥವಾ ಅದಕ್ಕಿಂತ ಮಿಗಿಲಾದ ಏನನ್ನೂ ಅಪಾಯಕ್ಕೊಡ್ಡಲು ಸಿದ್ಧವಿದ್ದಾರೆ.’’

ಜೂನ್ 26, 1791ರಂದು ತನ್ನೊಂದಿಗೆ ಶರಣಾಗಲು ಸೂಚಿಸಿದ ಕಂಪೆನಿ ಸೈನ್ಯದ ಗೂಢಚಾರಿ ವಿಭಾಗದ ಲೆಫ್ಟಿನೆಂಟ್ ಮಾಕ್ಲೆನ್ಡ್‌ನೊಂದಿಗೆ ಹುತ್ರಿದುರ್ಗ ಕೋಟೆಯ ಕಿಲ್ಲೇದಾರ ಹೇಳಿದ ಮಾತುಗಳಿವು. (ಉತ್ತರಿ ಬೆಟ್ಟ ಎಂದು ಕರೆಯಲ್ಪಡುವ ಈ ಕೋಟೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಆಗ್ನೇಯ ದಿಕ್ಕಿನಲ್ಲಿದೆ). ಕದನ ವಿರಾಮದ ಬಿಳಿಯ ಬಾವುಟ ಹೊತ್ತಿದ್ದ ಮಾಕ್ಲೆಂಡ್‌ಗೆ ಎದುರಾಗಿ ಗುಂಡುಗಳು ಸಿಡಿದಾಗ ಸುಲ್ತಾನನ ಈ ಕೋಟೆ ಶರಣಾಗುವ ಪೈಕಿಯದ್ದಲ್ಲ ಎಂಬುದು ಅವನಿಗೆ ಸಾಬೀತಾಗಿ ಹೋಯಿತು. ಬಳಿಕ ಬಂದ ಈ ಸರಳ-ದಿಟ್ಟ ಉತ್ತರ ಹುತ್ರಿದುರ್ಗವನ್ನು ಇಂಗ್ಲಿಷರು ಕೆಲಕಾಲ ಹಾಗೆಯೇ ಬಿಡುವಂತೆ ಮಾಡಿತು. ರೋಡ್ರಿಕ್ ಮೆಕೆಂಝಿ 1792ರಲ್ಲಿ ಬರೆದ ‘ಎ ಸ್ಕೆಚ್ ಆಫ್ ವಾರ್ ವಿತ್ ಟಿಪ್ಪು ಸುಲ್ತಾನ್’ ಎಂಬ ಪುಸ್ತಕದಲ್ಲಿ ನಾನು ಈ ಆಸಕ್ತಿದಾಯಕ ವಿವರವನ್ನು ಓದಿದೆ.

ಬ್ರಿಟಿಷರು ‘ಓಟ್ರಾ ಡ್ರೂಗ್’ ಎಂದು ಕರೆಯುತ್ತಿದ್ದ ಈ ಕೋಟೆಯ ಕುರಿತು ಅನೇಕ ರೋಮಾಂಚನಕಾರಿ ಸಂಗತಿಗಳನ್ನು ನವೆಂಬರ್ 28, 1790ರಂದು ಇಲ್ಲಿಂದ ತಪ್ಪಿಸಿಕೊಂಡ ಜೇಮ್ಸ್ ಬ್ರಿಸ್ಟೋವ್ ಎಂಬ ಕೈದಿ ಹೇಳಿದ್ದಾನೆ. 1793ರಲ್ಲಿ ಪ್ರಕಟವಾದ ‘ಹತ್ತು ವರ್ಷ ಹೈದರ್ ಅಲಿ ಮತ್ತು ಟಿಪ್ಪು ಸಾಹೇಬನ ಕೈದಿಯಾಗಿ ಬಂಗಾಳ ಫಿರಂಗಿ ದಳದ ಜೇಮ್ಸ್ ಬ್ರಿಸ್ಟೋವ್ ಪಟ್ಟ ಯಾತನೆಗಳ ವಿವರಣೆ’ ಎಂಬ ತನ್ನ ಪುಸ್ತಕದಲ್ಲಿ ಅವನು ತಾನು ಸೆರೆಯಾದ ಬಗೆ ಹಾಗೂ ಪಲಾಯನಗೈದ ರೀತಿಯನ್ನು ವಿವರಿಸಿದ್ದ.

ಹುತ್ರಿದುರ್ಗದ ತಪ್ಪಲಲ್ಲಿರುವ ಸಂತೆಪೇಟೆಗೆ ಕಾಲಿಟ್ಟ ನಾನು ಬೆಟ್ಟಕ್ಕೆ ಸಾಗಲು ಹಾವಿನಂತೆ ಬಳಸುವ ರಸ್ತೆಯನ್ನು ಹಿಡಿಯದೆ ಈಗ ಪೊದೆಗಳಿಂದ ಆವೃತವಾಗಿರುವ ಮೆಟ್ಟಿಲುಗಳ ಹಾದಿಯಿಂದ ಪುರಾತನ ದ್ವಾರದ ಮುಖಾಂತರ ಹುತ್ರಿದುರ್ಗ ಹಳ್ಳಿಯನ್ನು ಪ್ರವೇಶಿಸಿ ಸ್ವಲ್ಪ ಮುಂದೆ ಸಾಗಿ ಎಡಕ್ಕೆ ಬೆಟ್ಟದತ್ತ ನಡೆದೆ.


 



ವಿವಿಧ ಸ್ಥರಗಳಲ್ಲಿ ಬೆಟ್ಟವನ್ನು ಸುತ್ತಿರುವ ಕೋಟೆಗೋಡೆಯ ಅಲ್ಲಲ್ಲಿ ಬುರುಜುಗಳಿವೆ. ವಿಸ್ತಾರವಾದ ಕಲ್ಲಿನ ನೆಲವನ್ನೇರುತ್ತಾ ಎರಡನೇ ದ್ವಾರದ ಬಳಿ ಬಂದೆ. ದೊಡ್ಡ ಕಲ್ಲುಗಳಿಂದ ನಿರ್ಮಿತವಾದ ಈ ದ್ವಾರದ ಕಮಾನು ಈಗಲೋ ಆಗಲೋ ಬೀಳುವಂತಿದೆ.

ದಟ್ಟವಾದ ಪೊದೆಗಳು ಮತ್ತು ಕುಸಿದ ಕಲ್ಲುಗಳ ನಡುವಿನ ಕಡಿದಾದ ದಾರಿಯ ಚಾರಣ ನನ್ನನ್ನು ಮುಂದಿನ ದ್ವಾರದ ಬಳಿ ಒಯ್ದಿತ್ತು. ಮುಂದಕ್ಕೆ ಮೇಲಿನ ಹಂತದ ಕೋಟೆ ಹಾಗೂ ಬುರುಜುಗಳು ಗೋಚರಿಸುತ್ತಿದ್ದವು. ಎರಡು ದೊಡ್ಡ ಬಂಡೆಗಳ ನಡುವೆ ಬೆಚ್ಚಗೆ ಮಲಗಿತ್ತು ನಾಲ್ಕನೇ ದ್ವಾರ. ಬಂಡೆಗಳ ನಡುವಿನ ಮತ್ತೊಂದು ಚಾರಣ ನನ್ನನ್ನು ಇನ್ನೆರಡು ದ್ವಾರಗಳನ್ನು ದಾಟಿಸಿತು. ಅಲ್ಲೊಂದು ಕಡೆ ದೊಡ್ಡ ಬಂಡೆಯ ಮೇಲೆ ಹನುಮಂತನ ಚಿತ್ರ ಕೊರೆದದ್ದನ್ನು ನಾನು ನೋಡಿದೆ.

ಈಗ ನನ್ನ ಮುಂದಿನ ದಾರಿ ನಿಜಕ್ಕೂ ಅಪಾಯಕಾರಿಯಾಗಿತ್ತು. ಹುತ್ರಿದುರ್ಗ ಕೋಟೆಯಲ್ಲಿ ಬಂದಿಯಾಗಿದ್ದ ಬ್ರಿಸ್ಟೋವ್ ತಾನು ತಪ್ಪಿಸಿಕೊಳ್ಳಲು ಇಳಿದೆನೆಂದು ಹೇಳಿದ ಕಡಿದಾದ ಬಂಡೆ ಇದೇ ಇರಬೇಕೆಂದು ನನಗನಿಸಿತು. ಆ ಬಂಡೆಯನ್ನು ಎಚ್ಚರಿಕೆಯಿಂದ ಏರಿದ ನನಗೆ ಸುಸ್ಥಿತಿಯಲ್ಲಿದ್ದ ಕೋಟೆ ಗೋಡೆಗಳ ನಡುವೆಯಿದ್ದ ಕೊನೆಯ ದ್ವಾರ ಕಣ್ಣಿಗೆ ಬಿತ್ತು.


 



ಜೇಮ್ಸ್ ಬ್ರಿಸ್ಟೋವ್ ವಿವರಿಸಿದಂತೆ ಬೆಟ್ಟದ ತುತ್ತತುದಿಯ ಬಂಡೆಯನ್ನು ಸಂಪೂರ್ಣವಾಗಿ ಆವರಿಸಿದ್ದ ಈ ಕೋಟೆಯ ಗೋಡೆಗಳನ್ನು ದಾಟಿ ಮುಂದೆ ಸಾಗಿದರೆ ಹುಲ್ಲು-ಪಾಚಿಗಳಿಂದ ಪೂರ್ತಿ ಮುಚ್ಚಿಹೋದ ನೀರಿನ ಹೊಂಡವಿತ್ತು. ಬೆಟ್ಟದ ಶಿಖರದಲ್ಲಿರುವ ಸಂಕೇಶ್ವರ ದೇವಸ್ಥಾನದ ಗೋಪುರವಿಲ್ಲದಿದ್ದರೆ ಈ ದಟ್ಟ ಕಾಡಿನಲ್ಲಿ ಯಾರಿಗೂ ದಾರಿ ತಪ್ಪೀತು. ಅಲ್ಲೇ ಇದ್ದ ಒಂದು ಸಣ್ಣ ಮಂಟಪವನ್ನೇರಿ ಒಳಗಿದ್ದ ನಂದಿಯ ವಿಗ್ರಹವನ್ನು ಕಂಡು ಮುಂದಿದ್ದ ದೇವಸ್ಥಾನದತ್ತ ನಡೆದೆ. ಸನಿಹವೇ ಪಾಳುಬಿದ್ದ ಕಣಜಗಳು ಹಾಗೂ ಕಂಬಗಳಿದ್ದ ಒಂದು ಮಂಟಪವಿತ್ತು. 1918-19ರ ಮೈಸೂರು ಪುರಾತತ್ವ ಸರ್ವೇಕ್ಷಣಾ ವರದಿಯಲ್ಲಿ ‘ದೊಡ್ಡ ದೊಣ್ಣೆ’ ಎಂದು ಉಲ್ಲೇಖಿಸಲ್ಪಟ್ಟ ನೀರಿನ ಹೊಂಡ ದೇವಸ್ಥಾನದ ತುಸು ದೂರದಲ್ಲಿತ್ತು.

ಕೆಳಗೆ ಬರುತ್ತಾ ಬಲಬದಿಗೆ ಮೂರು ಬಂಡೆಗಳ ನಡುವೆ ಕಿರಿದಾದ ಸುರಂಗದಂತಹ ದಾರಿ ಕಂಡಿತು. ಆ ದಾರಿ ಹಿಡಿದು ಕೆಳಗೆ ಹೋದಂತೆ ಒಂದು ಸಣ್ಣ ಬೆಟ್ಟದ ಮೇಲಿದ್ದ ವಿಸ್ತಾರ ಬಯಲು ಗೋಚರಿಸಿತು. ಸರ್ವೇಕ್ಷಣಾ ವರದಿ ದಾಖಲಿಸಿದ ನೃತ್ಯ ಮೇಳಗಳು ನಡೆಯುತ್ತಿದ್ದ ‘ಓಲಗ ದಾರಿ ಬೆಟ್ಟ’ ಇದೇ ಇರಬಹುದೇ? ವಿಸ್ತಾರ ಬಯಲಿನುದ್ದಕ್ಕೂ ಸಾಗಿ ನಾನು ದೂರ ದಿಗಂತದ ವಿಹಂಗಮ ನೋಟವನ್ನು ಆಸ್ವಾದಿಸಿದೆ.

ವಿಸ್ತಾರವಾದ ಬಂಡೆಗಳ ಮೇಲೆ ಅಗಲವಾದ ಮೆಟ್ಟಿಲುಗಳು ಹಾಗೂ ಜಾರುವ, ಕಡಿದಾದ ಹಂತಗಳಲ್ಲಿ ಕಂಬಿಗಳ ನಿರ್ಮಾಣವಾಗಿ ಹುತ್ರಿದುರ್ಗಕ್ಕೆ ಹೊಸ ರೂಪ ಸಿಕ್ಕಿದ ಮೇಲೆ ಇನ್ನೊಮ್ಮೆ ಕೋಟೆಗೆ ಭೇಟಿ ಕೊಟ್ಟೆ. ಈಗ ಚಾರಣಿಗರನ್ನು ಎಚ್ಚರಿಸುವ ‘ಅಪಾಯದ’ ಚಿಹ್ನೆಗಳು ಹಾಗೂ ಸಾಗಬೇಕಾದ ದಿಕ್ಕನ್ನು ತೋರಿಸುವ ಬಾಣದ ಗುರುತುಗಳು ಎಲ್ಲೆಡೆಯೂ ಕಾಣುತ್ತವೆ. ದೊಡ್ಡ ದೊಣ್ಣೆ ಹೊಂಡಕ್ಕೆ ತಾಗಿರುವ ಕಲ್ಲುಗಳ ಮೇಲೆಯೂ ಆಳ ನೀರಿನ ಕುರಿತು ಎಚ್ಚರಿಕೆಯ ಸೂಚನೆ ನೀಡಲಾಗಿದೆ. ಹುತ್ರಿದುರ್ಗದ ಬಹುತೇಕ ಭಾಗಗಳ ಚಾರಣ ಈಗ ಬಹಳ ಸುಲಭವೂ ಸುರಕ್ಷಿತವೂ ಆಗಿ ಮಾರ್ಪಾಡುಗೊಂಡಿದೆ.

( ಕೃಪೆ: ಡೆಕ್ಕನ್ ಹೆರಾಲ್ಡ್, ಜೂನ್ 27)

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News