ಭಾರತದ ಆಯ್ಕೆದಾರರು, ರೋಹಿತ್ ಶರ್ಮಾರನ್ನು ಗುರಿಯಾಗಿಸಿ ಕಿಶನ್ ಸಂಭ್ರಮಾಚರಣೆ

Rohit Sharma, Ishan Kishan | PC : PTI
ಹೊಸದಿಲ್ಲಿ : ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಇಶಾನ್ ಕಿಶನ್ ರವಿವಾರ ರಾಜಸ್ಥಾನ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಕೇವಲ 47 ಎಸೆತಗಳಲ್ಲಿ ಔಟಾಗದೆ 106 ರನ್ ಗಳಿಸಿದ್ದರು. ಕಿಶನ್ ಶತಕದ ಬಲದಿಂದ ಹೈದರಾಬಾದ್ 44 ರನ್ ಅಂತರದಿಂದ ಜಯ ಸಾಧಿಸಿತ್ತು.
ಕೆಂಪು ಚೆಂಡಿನ ಕ್ರಿಕೆಟಿಗೆ ಕಿಶನ್ ಆದ್ಯತೆ ನೀಡುತ್ತಿಲ್ಲ ಎಂದು ಭಾವಿಸಿದ ಆಯ್ಕೆದಾರರು ಹಾಗೂ ಉನ್ನತ ಅಧಿಕಾರಿಗಳು ಕಳೆದ ವರ್ಷ ಬಿಸಿಸಿಐನ ಕೇಂದ್ರೀಯ ಗುತ್ತಿಗೆಯಿಂದ ಕಿಶನ್ ರನ್ನು ಕೈಬಿಟ್ಟಿದ್ದರು. ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್ ಜೊತೆ ಭಾರತದ ಅಗ್ರ ಮೂವರು ವಿಕೆಟ್ ಕೀಪರ್-ಬ್ಯಾಟರ್ ಪೈಕಿ ಒಬ್ಬರಾಗಿದ್ದ ಕಿಶನ್ ರನ್ನು ಮೂಲೆಗುಂಪು ಮಾಡಲಾಗಿತ್ತು
ಆದರೆ ರವಿವಾರ ನಡೆದ ಪಂದ್ಯದಲ್ಲಿ ಕಿಶನ್ 47 ಎಸೆತಗಳ ಇನಿಂಗ್ಸ್ ನಲ್ಲಿ 11 ಬೌಂಡರಿ, 6 ಸಿಕ್ಸರ್ಗಳನ್ನು ಸಿಡಿಸಿದರು. ಹರಾಜಿನ ವೇಳೆ 11.25 ಕೋಟಿ ರೂ.ಗೆ ಹೈದರಾಬಾದ್ ತಂಡ ಸೇರಿದ್ದ ಕಿಶನ್ ಐಪಿಎಲ್ ನಲ್ಲಿ ತನ್ನ ಮೊದಲ ಶತಕ ಸಿಡಿಸಿದ ನಂತರ ಅಬ್ಬರದ ಸಂಭ್ರಮಾಚರಣೆ ನಡೆಸಿ ನಾನು ಪುನರಾಗಮನ ಮಾಡಿದ್ದೇನೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದರು.
‘‘ಕಿಶನ್ ಅವರ ಸಂಭ್ರಮಾಚರಣೆಯು ಬಹುಶಃ ಮುಂಬೈ ಇಂಡಿಯನ್ಸ್, ಆಯ್ಕೆ ಸಮಿತಿಯ ಅಧ್ಯಕ್ಷರು ಹಾಗೂ ರೋಹಿತ್ ಶರ್ಮಾರನ್ನು ಗುರಿಯಾಗಿರಿಸಿರಬಹುದು. ನೋಡಿ ನಾನು ಯೋಗ್ಯ ಆಟಗಾರ ಎಂದು ಇಡೀ ಭಾರತಕ್ಕೆ, ಇಡೀ ಜಗತ್ತಿಗೆ ಸಾರಿರಬಹುದು’’ ಎನ್ನುವುದಾಗಿ ಇಂಗ್ಲೆಂಡ್ ನ ಮಾಜಿ ನಾಯಕ ಮೈಕಲ್ ವಾನ್ ‘ಕ್ರಿಕ್ಬಝ್’ಗೆ ತಿಳಿಸಿದ್ದಾರೆ.