ತಿಲಕ್ ವರ್ಮಾ ‘ರಿಟೈರ್ಡ್ ಔಟ್’: ಸೂರ್ಯಕುಮಾರ್ ಅಸಮಾಧಾನ

PC : X
ಲಕ್ನೊ: ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 12 ರನ್ ಅಂತರದಿಂದ ಸೋತಿದೆ.
ಈ ಪಂದ್ಯದಲ್ಲಿ ಎಡಗೈ ಬ್ಯಾಟರ್ ತಿಲಕ್ ವರ್ಮಾ ಅವರನ್ನು ‘ರಿಟೈರ್ಡ್ ಔಟ್’ ಮಾಡುವ ಮುಂಬೈ ಇಂಡಿಯನ್ಸ್ ತಂಡದ ನಿರ್ಧಾರವು ಭಿನ್ನಮತಕ್ಕೆ ಕಾರಣವಾಗಿದೆ.
ಡಗೌಟ್ ನಲ್ಲಿ ಕುಳಿತಿದ್ದ ಮುಂಬೈ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ತಮ್ಮ ಅಸಮಾಧಾನ ಹೊರಹಾಕಿದರು. ಈ ಸಂದರ್ಭದಲ್ಲಿ ಮುಖ್ಯ ಕೋಚ್ ಮಹೇಲ ಜಯವರ್ಧನೆ ಅವರು ಸೂರ್ಯಕುಮಾರ್ಗೆ ಸ್ಪಷ್ಟನೆ ನೀಡುತ್ತಿರುವ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಮುಂಬೈ ತಂಡ ಗೆಲುವಿಗೆ 204 ರನ್ ಗುರಿ ಬೆನ್ನಟ್ಟುತ್ತಿದ್ದಾಗ 5ನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದಿದ್ದ ತಿಲಕ್ ವರ್ಮಾ ಬಿರುಸಾಗಿ ರನ್ ಗಳಿಸುವಲ್ಲಿ ವಿಫಲರಾದರು. 23 ಎಸೆತಗಳಲ್ಲಿ 2 ಬೌಂಡರಿಗಳ ನೆರವಿನಿಂದ 25 ರನ್ ಗಳಿಸಿದರು. ಮುಂಬೈ ಗೆಲುವಿಗೆ ಕೊನೆಯ 7 ಎಸೆತಗಳಲ್ಲಿ 24 ರನ್ ಬೇಕಾಗಿತ್ತು. ಆಗ ತಿಲಕ್ ವರ್ಮಾರನ್ನು ಹಿಂದಕ್ಕೆ ಕರೆಸಿಕೊಳ್ಳಲು ಮುಂಬೈ ಮ್ಯಾನೇಜ್ಮೆಂಟ್ ನಿರ್ಧರಿಸಿತು. ಪರಿಣಾಮ ತಿಲಕ್ ತಲೆ ತಗ್ಗಿಸಿಕೊಂಡು ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ನಂತರ ಕ್ರೀಸ್ ಗಿಳಿದ ಮಿಚೆಲ್ ಸ್ಯಾಂಟ್ನರ್ರಿಂದಲೂ ಹೆಚ್ಚೇನೂ ಕೊಡುಗೆ ಲಭಿಸಲಿಲ್ಲ. ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ ಔಟಾಗದೆ 28 ರನ್ ಗಳಿಸಿದರು.
ಮುಖ್ಯ ಕೋಚ್ ಜಯವರ್ಧನೆ, ರಿಟೈರ್ಡ್ ಔಟ್ ಮಾಡಿರುವ ನಿರ್ಧಾರವನ್ನು ಸಮರ್ಥಿಸಿಕೊಂಡರು.
‘‘ಇದು ತಂಡದ ರಣನೀತಿಯ ಭಾಗವಾಗಿತ್ತು. ಕ್ರಿಕೆಟ್ನಲ್ಲಿ ಇವೆಲ್ಲ ಸಾಮಾನ್ಯ. ಆ ಸನ್ನಿವೇಶದಲ್ಲಿ ಅದು ಅಗತ್ಯವೆನಿಸಿತ್ತು’’ ಎಂದು ಜಯವರ್ಧನೆ ಹೇಳಿದರು.