ಬಿಜೆಪಿ-ಜೆಡಿಎಸ್ ಮೈತ್ರಿ ಇನ್ನೂ ಅಂತಿಮವಾಗಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2023-09-11 17:19 GMT

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (PTI)

ಹುಬ್ಬಳ್ಳಿ: ‘ಬಿಜೆಪಿ-ಜೆಡಿಎಸ್ ಮೈತ್ರಿ ಇನ್ನೂ ಅಂತಿಮಗೊಂಡಿಲ್ಲ. ಈ ಸಂಬಂಧ ನನಗೆ ಸಂಪೂರ್ಣ ಮಾಹಿತಿಯೂ ಇಲ್ಲ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈತ್ರಿ ಅನಿವಾರ್ಯ ಎಂದು ಹೇಳಿರಬಹುದು. ಆದರೆ, ನಾನು ಕೇಂದ್ರದಲ್ಲಿ ಮಂತ್ರಿಯಾಗಿ ಮೈತ್ರಿ ವಿಚಾರವಾಗಿ ನಮ್ಮ ಪಕ್ಷದ ವರಿಷ್ಠರು ಹೇಳುವವರೆಗೆ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ತಿಳಿಸಿದರು.

‘ರಾಜ್ಯ ಸರಕಾರದ ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಮಾಲಕರಿಗೆ ಆಗಿರುವ ತೊಂದರೆ ನಿವಾರಿಸುವ ಕೆಲಸ ರಾಜ್ಯ ಸರಕಾರದಿಂದ ಆಗಬೇಕು. ಬಡ ಜನ ಇರುವುದರಿಂದ ಸರಕಾರ ಈ ಬಗ್ಗೆ ಗಮನ ಕೊಡಬೇಕು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯೂ ನಷ್ಟದಲ್ಲಿದೆ. ಅದರ ಬಗ್ಗೆಯೂ ಸರಕಾರ ಆಸ್ಥೆ ವಹಿಸಬೇಕು. ಉಚಿತ ಕೊಡುತ್ತಿದ್ದೇವೆಂದು ಮನಬಂದಂತೆ ನಡೆದುಕೊಳುತ್ತಿರುವುದು ಸರಿಯಲ್ಲ’ ಎಂದು ಆಕ್ಷೇಪಿಸಿದರು.

‘ಜಿ-20 ಶೃಂಗಸಭೆ ಭಾರತದ 75 ವರ್ಷದ ಇತಿಹಾಸದಲ್ಲಿ ಬಾರಿ ದೊಡ್ಡ ಮೈಲಿಗಲ್ಲಾಗಿದ್ದು, ಭಿನ್ನಾಭಿಪ್ರಾಯ ಬರದಂತೆ ತೀರ್ಮಾನ ಮಾಡಿದ್ದೆ ಬಹುದೊಡ್ಡ ಸಾಧನೆ. ಭಾರತ ನೇತೃತ್ವವನ್ನು ಇತರ ದೇಶ ಒಪ್ಪುತ್ತಿದೆ ಎನ್ನುವುದರ ಸ್ಪಷ್ಟ ಸಂಕೇತ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News