ಬಾಬಾಬುಡಾನ್ ದರ್ಗಾ: ಸಂಘಿ ದಾಳಿಯಿಂದ ಸತ್ಯವನ್ನು ಉಳಿಸಲು ಮತ್ತೊಂದು ಅವಕಾಶ!
2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಈವರೆಗೆ ದರ್ಗಾದಲ್ಲಿ ಆಗಿರುವ ಅನ್ಯಾಯವನ್ನು ಸರಿ ಮಾಡುವ ಗೋಜಿಗೆ ಹೋಗಿರಲಿಲ್ಲ. ಈಗ ಕಾಂಗ್ರೆಸ್ ಸರಕಾರಕ್ಕೆ ಸತ್ಯದ ಪರವಾಗಿ ನಿಲ್ಲುವ ಅವಕಾಶ ಒದಗಿ ಬಂದಿದೆ. ಸಂಘಿಗಳ ಸುಳ್ಳುಗಳಿಗೆ ಬಲಿಯಾಗದೆ ಅಥವಾ ರಾಜಿ-ಖಾಜಿ ಮರೆಮೋಸಗಳನ್ನು ಮಾಡದೆ ತನ್ನದೇ 2018ರ ಆದೇಶಕ್ಕೆ ಬದ್ಧರಾಗಿ ಸುಪ್ರೀಂಗೆ ವರದಿ ನೀಡಬೇಕಿದೆ. ಇದೊಂದು ಕೊನೆ ಅವಕಾಶ. ಸರಕಾರ ಹಾಗೆ ಮಾಡಲು ನಾಡಿನ ಜನರು ಒತ್ತಾಯ ಮಾಡಬೇಕಿದೆ.;

ಭಾಗ - 1
ಕರ್ನಾಟಕದ ಹೆಮ್ಮೆಯ ಸೌಹಾರ್ದ ತಾಣವಾದ ಬಾಬಾಬುಡಾನ್ ದರ್ಗಾವನ್ನು ಕೇಸರೀಕರಿಸುವಲ್ಲಿ ಸಂಘಪರಿವಾರದವರು ಈಗಾಗಲೇ ಬಹುಪಾಲು ಯಶಸ್ವಿಯಾಗಿದ್ದಾರೆ. ಅವರ ಈ ಯಶಸ್ಸಿನಲ್ಲಿ ಸಂಘಪರಿವಾರದ ಸುಳ್ಳುಗಳ ಸತತ ಪ್ರಚಾರ, ಬಿಜೆಪಿ ಸರಕಾರಗಳ ಅಧಿಕಾರ ದುರುಪಯೋಗ, ಕೇಸರೀಕರಣಗೊಂಡ ಕೋರ್ಟುಗಳ ಪಾಲುದಾರಿಕೆಗಳು ಪ್ರಧಾನ ಪಾತ್ರವಹಿಸಿವೆ.
ಇದರ ಜೊತೆಗೆ ವಿರೋಧ ಪಕ್ಷದಲ್ಲಿದ್ದಾಗ ನಿರ್ಣಾಯಕ ಹೋರಾಟ ಮಾಡದ ಮತ್ತು ಅಧಿಕಾರದಲ್ಲಿದ್ದಾದ ಗಟ್ಟಿ ನಿಲುವು ತೆಗೆದುಕೊಳ್ಳದ ಕಾಂಗ್ರೆಸ್ನಂತಹ ಸೆಕ್ಯುಲರ್ ಪಕ್ಷಗಳ ಪಾತ್ರವೂ ಇದೆ. ಇವೆಲ್ಲದರ ಪರಿಣಾಮವಾಗಿ ಬಾಧಿತ ಸಮುದಾಯಗಳು ಅಸಹಾಯಕಗೊಂಡಿವೆ ಮತ್ತು ಬಲವಂತದ ನಿರಾಸಕ್ತಿ ಬೆಳೆಸಿಕೊಂಡಿವೆ. ಪರಿಣಾಮವಾಗಿ ಸೌಹಾರ್ದ ಚಳವಳಿಗಳು ನಿತ್ರಾಣಗೊಂಡಿವೆ.
ಆದರೆ ಈ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ಪ್ರಕರಣದ ಭಾಗವಾಗಿ ದರ್ಗಾದಲ್ಲಿ ನಡೆಯಬೇಕಾದ ಪೂಜಾ ವಿಧಾನಗಳ ಬಗ್ಗೆ ಕರ್ನಾಟಕ ಸರಕಾರ ತನ್ನ ಅಭಿಪ್ರಾಯವನ್ನು ಮಾರ್ಚ್ ಒಳಗೆ ತಿಳಿಸಬೇಕೆಂದು ಆದೇಶ ನೀಡಿದೆ.
ಅದರಂತೆ ಕರ್ನಾಟಕ ಸರಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಗೃಹಮಂತ್ರಿ ಪರಮೇಶ್ವರ್ ಅವರ ನೇತೃತ್ವದಲ್ಲಿ ಸಂಪುಟ ಉಪಸಮಿತಿಯನ್ನು ರಚಿಸಿದೆ. ಆ ಸಮಿತಿಯು ಜನವರಿ 17ರಂದು ಸಂಬಂಧಪಟ್ಟವರೆಲ್ಲರ ಸಭೆಯೊಂದನ್ನು ಕರೆದು ಅಭಿಪ್ರಾಯವನ್ನು ಸಂಗ್ರಹಿಸಿದೆ.
2018ರ ತನ್ನದೇ ಆದೇಶಕ್ಕೆ ಬದ್ಧವಾಗಲಿ ಕಾಂಗ್ರೆಸ್ ಸರಕಾರ
ಆದರೆ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಹಿಂದಿನ ಕಾಂಗ್ರೆಸ್ ಸರಕಾರ 2017ರಲ್ಲಿ ನ್ಯಾ. ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಸಂಶೋಧಕರಾದ ಷ. ಶೆಟ್ಟರ್ ಮತ್ತು ಪ್ರೊ. ರಹಮತ್ ತರೀಕೆರೆ ಅವರನ್ನೂ ಒಳಗೊಂಡ ಒಂದು ಹೈ ಪವರ್ ಸಮಿತಿಯನ್ನು ನೇಮಿಸಿತ್ತು. ಅದು ಸಂಬಂಧಪಟ್ಟವರ ಎಲ್ಲರಿಂದಲೂ ಅಹವಾಲು ಮತ್ತು ದಾಖಲೆಗಳನ್ನು ಸಂಗ್ರಹಿಸಿತ್ತು ಮತ್ತು ಎಲ್ಲಾ ಆಯಾಮಗಳಿಂದಲೂ ಪ್ರಕರಣವನ್ನು ವಿಶ್ಲೇಷಿಸಿತ್ತು.
ನ್ಯಾ. ದಾಸ್ ಸಮಿತಿಯು ತನ್ನ ವರದಿಯಲ್ಲಿ:
ಪ್ರಾರಂಭದಿಂದಲೂ ಸದರಿ ಸಂಸ್ಥೆ ದರ್ಗಾ ಆಗಿದೆ ಎಂಬುದಕ್ಕೆ ದಾಖಲೆ ಇದೆಯೇ ವಿನಾ, ದತ್ತ ಪೀಠವಾಗಿತ್ತೆಂಬುದಕ್ಕೆ ಯಾವುದೇ ದಾಖಲೆಯಿಲ್ಲವೆಂದೂ, ದರ್ಗಾದಲ್ಲಿ ಅರ್ಚಕರ ನೇಮಕಾತಿ ಮಾಡಿದರೆ ಮತ್ತು ಆಗಮ ಪೂಜಾ ಪದ್ಧತಿಯನ್ನು ಜಾರಿ ಮಾಡಿದರೆ ದರ್ಗಾದ ಧಾರ್ಮಿಕ ಸ್ವರೂಪವೇ ಬದಲಾಗುತ್ತದೆ ಮತ್ತು ಅಂತಹ ಕ್ರಮವು 1991ರ ಧಾರ್ಮಿಕ ಸ್ಥಳಗಳ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಆದ್ದರಿಂದ ದರ್ಗಾದಲ್ಲಿ 1989ರಲ್ಲಿ ಧಾರ್ಮಿಕ ದತ್ತಿ ಆಯುಕ್ತರು ಆದೇಶಿಸಿದಂತೆ ದರ್ಗಾ ಸ್ವರೂಪದ ಪೂಜಾ ವಿಧಾನಗಳನ್ನು ಮಾತ್ರ ಮುಂದುವರಿಸಿಕೊಂಡು ಹೋಗತಕ್ಕದ್ದು ಎಂದು ಶಿಫಾರಸು ಮಾಡಿತ್ತು.
ಆ ಶಿಫಾರಸಿನ ಅನ್ವಯ ಕರ್ನಾಟಕ ಸರಕಾರವು 2018ರ ಮಾರ್ಚ್ನಲ್ಲಿ ಒಂದು ಆದೇಶವನ್ನು ಮಾಡಿ ದರ್ಗಾದಲ್ಲಿ 1975ರ ಪೂರ್ವದ ಹಾಗೂ 1989ರಲ್ಲಿ ಧಾರ್ಮಿಕ ದತ್ತಿ ಆಯುಕ್ತರು ಆದೇಶಿಸಿದ ಪೂಜಾ ಪದ್ಧತಿಯೇ ಇರತಕ್ಕದ್ದು ಎಂದು ಆದೇಶಿಸಿತ್ತು.
ಆದರೆ ಆ ಆದೇಶವನ್ನು ಸಂಘಪರಿವಾರದ ಸಂಸ್ಥೆಗಳು ಹೈಕೋರ್ಟಿನಲ್ಲಿ ಪ್ರಶ್ನಿಸಿ ತಡೆಯಾಜ್ಞೆ ಪಡೆದುಕೊಂಡವು. 2019ರ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ, ಹೈಕೋರ್ಟಿನಲ್ಲಿ ಸಂಘಪರಿವಾರದ ಜೊತೆ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಸಹಕರಿಸಿತು. ಹೀಗಾಗಿ 2021ರ ಸೆಪ್ಟಂಬರ್ ನಲ್ಲಿ ಕರ್ನಾಟಕ ಹೈಕೋರ್ಟ್ 2018ರ ಆದೇಶ ರದ್ದು ಮಾಡಿ ಮತ್ತೊಮ್ಮೆ ಎರಡೂ ಕಡೆಯವರ ವಾದ ಆಲಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿತು. ಮಾಧುಸ್ವಾಮಿ ನೇತೃತ್ವದ ಬಿಜೆಪಿ ಸರಕಾರದ ಸಂಪುಟ ಸಮಿತಿ ದರ್ಗಾ ಬಗ್ಗೆ ಕೊಟ್ಟ ಸಾವಿರಾರು ಪುಟಗಳ ಐತಿಹಾಸಿಕ, ಆಡಳಿತಾತ್ಮಕ, ಕಂದಾಯ ಹಾಗೂ ಇತರ ಯಾವುದೇ ದಾಖಲೆಗಳನ್ನು ಗಮನಕ್ಕೇ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ದರ್ಗಾದಲ್ಲಿ ಹಿಂದೂ ಅರ್ಚಕರ ನೇಮಕಾತಿ ಮತ್ತು ಆಗಮ ಪದ್ಧತಿಯ ಪೂಜಾ ವಿಧಾನಗಳನ್ನು ಜಾರಿ ಮಾಡಿಬಿಟ್ಟಿತು.
ಇದರ ವಿರುದ್ಧ ಶಾಖಾದ್ರಿ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಿದರು.
2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಈವರೆಗೆ ದರ್ಗಾದಲ್ಲಿ ಆಗಿರುವ ಅನ್ಯಾಯವನ್ನು ಸರಿ ಮಾಡುವ ಗೋಜಿಗೆ ಹೋಗಿರಲಿಲ್ಲ.
ಈಗ ಕಾಂಗ್ರೆಸ್ ಸರಕಾರಕ್ಕೆ ಸತ್ಯದ ಪರವಾಗಿ ನಿಲ್ಲುವ ಅವಕಾಶ ಒದಗಿ ಬಂದಿದೆ. ಸಂಘಿಗಳ ಸುಳ್ಳುಗಳಿಗೆ ಬಲಿಯಾಗದೆ ಅಥವಾ ರಾಜಿ-ಖಾಜಿ ಮರೆಮೋಸಗಳನ್ನು ಮಾಡದೆ ತನ್ನದೇ 2018ರ ಆದೇಶಕ್ಕೆ ಬದ್ಧರಾಗಿ ಸುಪ್ರೀಂಗೆ ವರದಿ ನೀಡಬೇಕಿದೆ. ಇದೊಂದು ಕೊನೆ ಅವಕಾಶ. ಸರಕಾರ ಹಾಗೆ ಮಾಡಲು ನಾಡಿನ ಜನರು ಒತ್ತಾಯ ಮಾಡಬೇಕಿದೆ.
ಈ ಮಧ್ಯೆ ದರ್ಗಾ ಅಲ್ಲ ದತ್ತಪೀಠ ಎಂಬ ಸಂಘಿಗಳ ಅಪಪ್ರಚಾರ ಮುಂದುವರಿದಿದೆ. ಮೊನ್ನೆ ವಿಧಾನ ಸೌಧದಲ್ಲಿ ನಡೆದ ಸಭೆಯಲ್ಲೂ ಸಿ.ಟಿ. ರವಿ ನೇತೃತ್ವದ ಸಂಘಿ ತಂಡ ಅದೇ ಸುಳ್ಳುಗಳನ್ನು ಪುನರುಚ್ಚರಿಸಿದೆ.
ಬಾಬಾಬುಡಾನ್ ದರ್ಗಾ:
ಸಂಘಿ ಸುಳ್ಳುಗಳು-ಐತಿಹಾಸಿಕ ಸತ್ಯಗಳು
ಬಾಬಾಬುಡಾನ್ ದರ್ಗಾ ಬಗ್ಗೆ ಸಂಘಿಗಳ ಆ ದುಷ್ಟ ಪ್ರತಿಪಾದನೆಗಳು ಎಷ್ಟು ಹಸಿಹಸಿ ಸುಳ್ಳುಗಳೆಂಬುದು ಮತ್ತೊಮ್ಮೆ ಸರಕಾರದ ಮತ್ತು ನಾಡಿನ ಜನತೆಯ ಗಮನಕ್ಕೆ:
ಸುಳ್ಳು 1: ಬಾಬಾಬುಡಾನ್ ದರ್ಗಾ ಇರುವುದು ನಾಗೇನಹಳ್ಳಿಯಲ್ಲಿ-ದತ್ತಾತ್ರೇಯ ಪೀಠದಲ್ಲಲ್ಲ!
ಸತ್ಯ: ವಾಸ್ತವವಾಗಿ ಇಂತಹ ವಾದವನ್ನು ತೀರಾ ಇತ್ತೀಚಿನವರೆಗೆ ಸಂಘಪರಿವಾರದವರೇ ಮುಂದಿಟ್ಟಿರಲಿಲ್ಲ.
ಹಾಗೆ ನೋಡಿದರೆ, 1975ರಲ್ಲಿ ಹಿಂದೂ ಭಕ್ತಾದಿಗಳು ಹೂಡಿದ ಮೂಲ ದಾವೆಯಾದ ಔS. 25/78ನಲ್ಲಾಗಲೀ ಅಥವಾ 1986-89ರ ನಡುವೆ ಜಿಲ್ಲಾ ಮುಜರಾಯಿ ಅಧಿಕಾರಿ ಹಾಗೂ ರಾಜ್ಯ ಮುಜರಾಯಿ ಕಮಿಷನರ್ ಮುಂದಿಟ್ಟ ವಿವಿಧ ಪ್ರಕರಣಗಳಲ್ಲಿ ಕೂಡ ಆಗ್ರಹವಿದ್ದದ್ದು ಹಿಂದೂ ಭಕ್ತಾದಿಗಳಿಗೂ ಕೂಡ ಪ್ರಾರ್ಥನೆ ಸಲ್ಲಿಸುವ ಅವಕಾಶವನ್ನು ಉಳಿಸಿಕೊಳ್ಳಬೇಕು ಎಂಬುದೇ ವಿನಾ ಈ ಸಂಸ್ಥೆಯು ದರ್ಗಾ ಅಲ್ಲ ಎಂಬುದಲ್ಲ ಅಥವಾ ಹಿಂದೂ ಅರ್ಚಕರ ನೇಮಕಾತಿಯನ್ನೂ ಅಲ್ಲ. ಹಿಂದೂ ಆಗಮ ಪದ್ಧತಿಯ ಪೂಜೆಗಳನ್ನೂ ಅಲ್ಲ.
1992ರಲ್ಲಿ ಬಾಬರಿ ಮಸೀದಿ ನಾಶದ ನಂತರದಲ್ಲಿ ದರ್ಗಾ ಅಲ್ಲ- ದೇವಸ್ಥಾನ ಎಂಬ ದುರುದ್ದೇಶಿತ ವಾದವನ್ನು ಯಾವುದೇ ಪುರಾವೆಯಿಲ್ಲದೆ ಸಂಘಿಗಳು ಮುಂದಿಡತೊಡಗಿದರು. ಅದಕ್ಕೆ ಪೂರಕವಾಗಿ ಅವರು ಪ್ರಾರಂಭಿಸಿದ ದತ್ತ ಜಯಂತಿ ಹಾಗೂ ದತ್ತಾಮಾಲಾಗಳಂಥ ಹೊಸ ಆಚರಣೆಗಳಿಗೆ ಆಗ ಅಧಿಕಾರದಲ್ಲಿದ್ದ ಜೆಡಿಎಸ್, ಕಾಂಗ್ರೆಸ್ ಸರಕಾರಗಳು ಅವಕಾಶ ಮಾಡಿಕೊಡುತ್ತಾ ಸಂಘಿಗಳ ಸುಳ್ಳುಗಳಿಗೆ ಆಡಳಿತಾತ್ಮಕ ಮಾನ್ಯತೆ ತಂದುಕೊಟ್ಟುಬಿಟ್ಟರು.
ಅದರಿಂದ ಮತ್ತಷ್ಟು ಉತ್ತೇಜಿತರಾದ ಈ ಸುಳ್ಳಿಗರು 2003ರ ನಂತರ ದರ್ಗಾ ಇರುವುದು ಚಿಕ್ಕಮಗಳೂರಿನ ನಾಗೇನಹಳ್ಳಿಯ ಸರ್ವೇ ನಂಬರ್ 57ರಲ್ಲಿ ಹಾಗೂ ಸರ್ವೇ ನಂಬರ್ 195ರಲ್ಲಿರುವುದು ದತ್ತಾತ್ರೇಯ ದೇವರ ದೇವಸ್ಥಾನ ಎಂಬ ಅಪಪ್ರಚಾರ ಪ್ರಾರಂಭಿಸಿದರು. ಇದಕ್ಕೆ ಪೂರಕವಾಗಿ ರೆವೆನ್ಯೂ ದಾಖಲೆಗಳ ತಪ್ಪು ವ್ಯಾಖ್ಯಾನವನ್ನು ಪ್ರಚಾರಮಾಡಲಾರಂಭಿಸಿದರು.
ಆದರೆ ವಾಸ್ತವವೆಂದರೆ ನಾಗೇನಹಳ್ಳಿ, ಸುರಗುಪ್ಪೆ ಮತ್ತು ಇನಾಂ ದತ್ತಾತ್ರೇಯ ಪೀಠ ಎಂಬ ಮೂರು ಗ್ರಾಮಗಳನ್ನು ಬಾಬಾಬುಡಾನ್ ದರ್ಗಾದ ನಿರ್ವಹಣೆಗೆ ಇನಾಂ ಅರ್ಥಾತ್ ಉಂಬಳಿಯಾಗಿ ನೀಡಿರುವುದು 1890ರಿಂದ ಲಭ್ಯವಿರುವ ಮುಜರಾಯಿ ಮ್ಯಾನುಯಲ್ಗಳು, ಮೈಸೂರು ಸಂಸ್ಥಾನಕ್ಕೆ ಸಂಬಂಧಪಟ್ಟ ವಿವಿಧ ಗೆಜಟೆಯರುಗಳು, ಮೈಸೂರು ಪುರಾತತ್ವ ಇಲಾಖೆಯ ದಾಖಲೆಗಳು, ಬ್ರಿಟಿಷರ ಕಾಲದ ಜಿಲ್ಲಾ ಮತ್ತು ಮುಜರಾಯಿ ಇಲಾಖಾ ವರದಿಗಳು, ಮೈಸೂರು ಆಡಳಿತದ ವರದಿಗಳು ಹಾಗೂ ಇನ್ನಿತರ ಎಲ್ಲಾ ದಾಖಲೆಗಳೂ ಸ್ಪಷ್ಟಪಡಿಸುತ್ತವೆ.
(ಆಸಕ್ತರು ರಾಜ್ಯ ಪತ್ರಾಗಾರದಲ್ಲಿರುವ 1901ರ Proceedings Of Government Of Mysore, No. 683- P.F. 32-01, Ist October 1901, Proceedings Of Government Of Mysore, Petition Dated 16th August 1902..ಇತ್ಯಾದಿಗಳನ್ನು ಪರಿಶೀಲಿಸಬಹುದು)
ಹಾಗೆಯೇ 1955ರಲ್ಲಿ ಇನಾಂ ರದ್ದತಿಯಾದ ನಂತರ ಧಾರ್ಮಿಕ ಕೇಂದ್ರಗಳ ನಿರ್ವಹಣೆಗೆ ತಸ್ದೀಕ್ ಅನ್ನು ನಿಗದಿ ಮಾಡಲಾಯಿತು. ಅದರ ಮೊತ್ತವನ್ನು ಆ ಸಂಸ್ಥೆಗಳಿಗೆ ಒಟ್ಟಾರೆ ದೊರಕುತ್ತಿದ್ದ ಇನಾಂತಿ ಆದಾಯವನ್ನು ಆಧರಿಸಿ ನಿರ್ಧರಿಸಲಾಗುತ್ತಿತ್ತು. ದರ್ಗಾಗೆ ನಿಗದಿಯಾದ ತಸ್ದೀಕ್ ಸಹ ನಾಗೇನಹಳ್ಳಿ, ಸುರಗುಪ್ಪೆ ಮತ್ತು ಇನಾಂ ದತ್ತಾತ್ರೇಯ ಪೀಠ ಗ್ರಾಮದ ಆದಾಯಗಳನ್ನು ಆಧರಿಸಿಯೇ ತೀರ್ಮಾನಿಸಲಾಯಿತು.
ಹೀಗಾಗಿ ಸರ್ವೇ ನಂಬರ್ 57ರಲ್ಲಿರುವ ನಾಗೇನಹಳ್ಳಿಯು ಸರ್ವೇ ನಂಬರ್ 195ರಲ್ಲಿರುವ ಬಾಬಾಬುಡಾನ್ ದರ್ಗಾಗೆ ನೀಡಲ್ಪಟ್ಟ ಇನಾಮೇ ಹೊರತೂ ದರ್ಗಾ ಇರುವುದೇ ನಾಗೇನಹಳ್ಳಿಯಲ್ಲಲ್ಲ.
ಈಗಲೂ ಸರ್ವೇ ನಂಬರ್ 195ರಲ್ಲಿರುವ ಈ ಧಾರ್ಮಿಕ ಸಂಸ್ಥೆಯ ಅಧಿಕೃತ ಹೆಸರು, ಎಲ್ಲಾ ಐತಿಹಾಸಿಕ ಹಾಗೂ ಸ್ವಾತಂತ್ರ್ಯೋತ್ತರ ರೆವೆನ್ಯೂ ದಾಖಲೆಗಳಲ್ಲಿರುವ ಹೆಸರು ‘ಶ್ರೀ ಗುರು ದತ್ತಾತ್ರೇಯ ಬಾಬಾಬುಡಾನ್ ಸ್ವಾಮಿ ದರ್ಗಾ’ ಎಂದೇ ಹೊರತು ದತ್ತಾತ್ರೇಯ ದೇವಸ್ಥಾನ ಎಂದಲ್ಲ.
ಆದರೂ 1997ರಲ್ಲಿ ಹಾಗೂ 2012ರಲ್ಲಿ ಮುಜರಾಯಿ ಇಲಾಖೆಯು ತಸ್ದೀಕ್ ಫಲಾನುಭವಿಯನ್ನು ದತ್ತಾತ್ರೇಯ ದೇವರು ಎಂದು ಬದಲಾಯಿಸಿ ಸಂಸ್ಥೆಯನ್ನು ದತ್ತಾತ್ರೇಯ ದೇವಸ್ಥಾನ ಎಂದು ಬದಲಿಸಿತ್ತು. ಆದರೆ ಹಿಂದೂ ದೇವಸ್ಥಾನಗಳ ಪಟ್ಟೀಕರಣದ ಪ್ರಕ್ರಿಯೆಯನ್ನೇ ಬೇರೊಂದು ಕಾರಣಕ್ಕೆ ಕೋರ್ಟು ರದ್ದು ಪಡಿಸಿದ್ದರಿಂದ ಈ ಸಂಸ್ಥೆಯನ್ನು ದೇವಸ್ಥಾನ ಎಂದು ವರ್ಗೀಕರಿಸಿದ್ದ ಪಟ್ಟಿಯೂ ರದ್ದಾಯಿತು.
ಇದಲ್ಲದೆ ಯಾವುದೇ ಕಾನೂನು ಅಥವಾ ಸರಕಾರದ ಸುತ್ತೋಲೆಯಿಲ್ಲದೆ ಕಳೆದ ಹತ್ತು-ಹದಿನೈದು ವರ್ಷಗಳಿಂದ ಪ್ರವಾಸೋದ್ಯಮ ಜಾಹೀರಾತು ಮತ್ತು ಮೈಲಿಗಲ್ಲುಗಳ ಮೇಲೆ ಇದ್ದ ಬಾಬಾಬುಡಾನ್ ದರ್ಗಾ ಎಂಬ ಹೆಸರನ್ನು ಬದಲಾಯಿಸಿ ದತ್ತಪೀಠ ಎಂದು ಬರೆಸಲಾಗಿದೆ. ವಿಪರ್ಯಾಸವೆಂದರೆ ಸಂಘಪರಿವಾರದ ಇತಿಹಾಸ ತಜ್ಞರು ಸದರಿ ಧಾರ್ಮಿಕ ಸಂಸ್ಥೆ ದರ್ಗಾ ಅಲ್ಲ ಎಂಬುದಕ್ಕೆ ಈ ಮೈಲಿಗಲ್ಲುಗಳನ್ನೂ ಸಹ ಒಂದು ಐತಿಹಾಸಿಕ ದಾಖಲೆಯಾಗಿ ಒದಗಿಸುತ್ತಿದ್ದಾರೆ.!
ಸುಳ್ಳು-2: 1818ರ ಖೇತುವಾರು ದಾಖಲೆಯಲ್ಲೂ ಸಂಸ್ಥೆಯ ಹೆಸರು ದತ್ತಾತ್ರೇಯ ದೇವಸ್ಥಾನ ಎಂದಿದೆ
ಸತ್ಯ: ಬ್ರಿಟಿಷರು ಭಾರತವನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಂಡ ಮೇಲೆ ತಮ್ಮ ಆಡಳಿತದಡಿಯಿದ್ದ ಪ್ರದೇಶಗಳ Survey ಮತ್ತು Settlement ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಅದರ ಅರ್ಥ ಯಾವ್ಯಾವ ಭೂಮಿಯಲ್ಲಿ ಏನೇನು ಬೆಳೆಯಲಾಗುತ್ತಿದೆ ಎಂಬ ಸರ್ವೇಕ್ಷಣೆ ಮತ್ತು ಅದನ್ನು ಆಧರಿಸಿ ಅದಕ್ಕೆ ಭೂ ಕಂದಾಯ ನಿಗದಿ ಮಾಡುವ ವ್ಯವಸ್ಥೆ. ಹಾಗೆ ಮಾಡುವಾಗ ಈ ಹಿಂದಿನ ರಾಜರುಗಳು ನೀಡಿದ ದೇವಾದಾಯ ಇನಾಮು ಜಮೀನುಗಳಿಗೆ ಕಂದಾಯ ವಿನಾಯಿತಿ ನೀಡಿದರು. ಅಂತಹ ಜಮೀನುಗಳನ್ನು ಪ್ರತ್ಯೇಕವಾಗಿ Quit Rent Registerನಲ್ಲಿ ನಮೂದಿಸಿದರು ಹಾಗೂ ಹೀಗೆ ಕಂದಾಯ ವಿನಾಯಿತಿ ಪಡೆದ ಜಮೀನುಗಳ ಒಡೆತನ ಯಾರಿಗೆ ಸೇರಿದ್ದು ಎಂಬುದನ್ನು ಸ್ಪಷ್ಟವಾಗಿ ದಾಖಲಿಸಿದ್ದಾರೆ.
ಮೈಸೂರು ಸಂಸ್ಥಾನದಲ್ಲಿ Survey ಮತ್ತು Settlement ಪ್ರಕ್ರಿಯೆ 1863ರಲ್ಲಿ ಆರಂಭವಾಗಿ 1890ರಲ್ಲಿ ಮುಕ್ತಾಯವಾಯಿತು. ಅದನ್ನು ಆಧರಿಸಿ ಆಕಾರ್ಬಂದ್ ದಾಖಲೆಗಳನ್ನೂ ಹಾಗೂ ಅದನ್ನು ಆಧರಿಸಿ ಖೇತುವಾರು ದಾಖಲೆಗಳನ್ನು ತಯಾರಿಸಲಾಯಿತು.
ಹೀಗಾಗಿ ಮೈಸೂರು ಸಂಸ್ಥಾನದಲ್ಲಿ ಮೊದಲ ಖೇತುವಾರು ದಾಖಲೆ ತಯಾರಾದದ್ದೇ 1886ರಲ್ಲಿ!
ಆದ್ದರಿಂದ 1818ರಲ್ಲಿ ಖೇತುವಾರು ದಾಖಲೆಯಿತ್ತೆಂಬುದಾಗಲೀ, ಅದರಲ್ಲಿ ದತ್ತಾತ್ರೇಯ ದೇವಸ್ಥಾನ ಎಂದು ದಾಖಲಿಸಲಾಗಿದೆ ಯೆಂಬುದಾಗಲೀ ಹಸಿ ಸುಳ್ಳು.
ಮೈಸೂರು ಸಂಸ್ಥಾನಕ್ಕೆ ಸಂಬಂಧಪಟ್ಟಂತೆ 1886-87, 1903-04, 1922-23, 1934-35ಗಳಲ್ಲಿ ತಯಾರಿಸಲಾದ ನಾಲ್ಕು ಖೇತುವಾರು ದಾಖಲೆಗಳಿವೆ. ಅದ್ಯಾವುದರಲ್ಲೂ ಸಂಸ್ಥೆಯ ಹೆಸರು ದತ್ತಾತ್ರೇಯ ದೇವಸ್ಥಾನ ಎಂದಿಲ್ಲ. ದರ್ಗಾ ಎಂದೇ ಇದೆ.
ಖೇತುವಾರು ದಾಖಲೆಗಳನ್ನು ಆಧರಿಸಿಯೇ ನಂತರದಲ್ಲಿ Record Of Rights (RR) ಮತ್ತು ಪಹಣಿಗಳನ್ನು ಸಿದ್ಧಪಡಿಸಲಾಯಿತು. ಅವಕ್ಕೆ ಮೂಲತಾಯಿ ಖೇತುವಾರು. ಅದರಲ್ಲಿ ಇಲ್ಲದ ದತ್ತಾತ್ರೇಯ ದೇವರು ಪಹಣಿಯಲ್ಲಿ ಪ್ರತ್ಯಕ್ಷವಾಗಬಹುದೇ?
ಸುಳ್ಳು-3: ಖಲಂದರ್-ಇ-ಬರ್ಹಾಕ್ ಎಂಬ ಶಾಖಾದ್ರಿ ಪ್ರಕಟಿತ ಪುಸ್ತಕದಲ್ಲಿ ಇದು ದೇವಸ್ಥಾನವಾಗಿತ್ತು ಎಂಬ ಹೇಳಿಕೆಗಳಿವೆ.
ಸತ್ಯ: ಈ ಸಂಸ್ಥೆಯು ದೇವಸ್ಥಾನವಾಗಿತ್ತೆಂಬ ಬಗ್ಗೆ ಹಾಗೂ ಇಲ್ಲಿ ಹಿಂದೂ ಆಗಮ ಪದ್ಧತಿಯ ರೀತಿಯಲ್ಲಿ ಪೂಜೆ ನಡೆಯುತ್ತಿತ್ತೆಂಬ ಬಗ್ಗೆ ಒಂದೇ ಒಂದು ಅಧಿಕೃತ ಪುರಾವೆಯನ್ನೂ ನೀಡಲಾಗದ ಸಂಘಪರಿವಾರ, ಬದಲಿಗೆ ಜಬ್ಬಾರ್ ಎಂಬವರು ಬರೆದಿರುವ ‘ಖಲಂದರ್ -ಎ-ಬರ್ಹಾಕ್’ ಎಂಬ ಸ್ಥಳಪುರಾಣವನ್ನು ಒಂದು ಐತಿಹಾಸಿಕ ದಾಖಲೆಯನ್ನಾಗಿ ನೀಡಿದ್ದಾರೆ.
ಅದರಲ್ಲಿ ದಾದಾ ಹಯಾತ್ ಮೀರ್ ಖಲಂದರ್ ಅವರು ಈ ಗುಹೆಗೆ ಬರುವ ಮುನ್ನ ಜಂಗಮ-ಬ್ರಾಹ್ಮಣರು ಅರ್ಚನೆ ಮಾಡಲು ಬರುತ್ತಿದ್ದರು ಎಂಬ ವಾಕ್ಯವಿದೆ. ಅದಕ್ಕೆ ಯಾವುದೇ ಪೂರಕ ಪುರಾವೆಗಳು ಇಲ್ಲದಿದ್ದರೂ ಈ ವಾಕ್ಯಗಳನ್ನೇ ದಾದಾ ಹಯಾತ್ ಅವರ ಆಗಮನಕ್ಕೆ ಮುನ್ನ ಇದು ಒಂದು ಹಿಂದೂ ಕೇಂದ್ರವಾಗಿತ್ತು ಎಂಬುದಕ್ಕೆ ಐತಿಹಾಸಿಕ ಪುರಾವೆಯೆಂಬಂತೆ ಅಹವಾಲುದಾರರು ಮುಂದಿಡುತ್ತಾರೆ.
ಆದರೆ ಸಂಘಿಗಳೇ ಒದಗಿಸುವ ಮತ್ತೊಂದು ಐತಿಹಾಸಿಕ ಪುರಾವೆ ಯಾದ ಸೂರ್ಯನಾಥ್ ಕಾಮತ್ ಇವರು ಪತ್ರಿಕೆಯೊಂದರ ವಿಜಯ ದಶಮಿ ಸಂಚಿಕೆಗೆ ಬರೆದ ಲೇಖನದಲ್ಲಿ ಕರ್ನಾಟಕದಲ್ಲಿ ದತ್ತಾತ್ರೇಯ ಪಂಥವು 14ನೇ ಶತಮಾನದಲ್ಲಿ ಪ್ರವೇಶಿಸಿತೆಂದು ಹೇಳುತ್ತಾರೆ. ಆದರೆ ಖಲಂದರ್ ಪುಸ್ತಕದಲ್ಲಿ ದಾದಾ ಹಯಾತ್ ಮೀರ್ ಖಲಂದರ್ ಒಂದು ಸಾವಿರ ವರ್ಷಗಳ ಹಿಂದೆ ಬಂದರೆಂದು ಬರೆಯಲಾಗಿದೆ. ಆ ಪುಸ್ತಕದಲ್ಲಿರುವ ಎಲ್ಲವನ್ನೂ ಒಪ್ಪಿಕೊಳ್ಳುವುದಾದರೆ ಇದನ್ನು ಕೂಡ ಇತಿಹಾಸವೆಂದೇ ಒಪ್ಪಿಕೊಳ್ಳಬೇಕಾಗುತ್ತದೆ.
ಆಗ ದತ್ತಪಂಥವು ಕರ್ನಾಟಕಕ್ಕೆ ಬರುವ ಮುಂಚೆ ದಾದಾ ಹಯಾತ್ ಇಲ್ಲಿ ನೆಲೆಸಿದ್ದರು ಎಂದಾಗುವುದಿಲ್ಲವೇ? ಒಂದು ಪುಸ್ತಕದಲ್ಲಿ ತನಗೆ ಬೇಕಿದ್ದನ್ನು ಮಾತ್ರ ಆಯ್ದು ತೆಗೆದುಕೊಳ್ಳುವುದನ್ನು ಅದನ್ನು ತನ್ನ ವಾದಕ್ಕೆ ಬೇಕಾದಂತೆ ವ್ಯಾಖ್ಯಾನಿಸಿಕೊಳ್ಳುವುದು ಮತ್ತದನ್ನು ಕೋರ್ಟು ಪುರಾವೆ ಎಂಬಂತೆ ಒಪ್ಪಿಕೊಳ್ಳುವುದು ಹೇಗೆ ಸಾಧ್ಯ?
ಸ್ಥಳಪುರಾಣಗಳು ಉತ್ಪ್ರೇಕ್ಷಿತ ಭಾವನೆಗಳೇ ವಿನಾ ಐತಿಹಾಸಿಕ ಪುರಾವೆಗಳಲ್ಲ.