ಹುಂಚಾರ್ಬೆಟ್ಟು ಕೊಳಚೆ ಶುದ್ಧೀಕರಣ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಧರಣಿ

Update: 2025-04-07 20:48 IST
ಹುಂಚಾರ್ಬೆಟ್ಟು ಕೊಳಚೆ ಶುದ್ಧೀಕರಣ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಧರಣಿ
  • whatsapp icon

ಕುಂದಾಪುರ, ಎ.7: ಕುಂದಾಪುರ ಪುರಸಭೆ ವ್ಯಾಪ್ತಿಯ ಹುಂಚಾರ್ ಬೆಟ್ಟು ವಾರ್ಡ್ ಬೆಟ್ಟಾಗರದ ಜನ ವಸತಿ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಗರದ ಕೊಳಚೆ ತ್ಯಾಜ್ಯ ಶುದ್ಧೀಕರಿಸಿ ವಿಸರ್ಜಿಸಲ್ಪ ಡುವ ಮುಖ್ಯ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಕೊಳಚೆ ಶುದ್ಧೀಕರಣ ಘಟಕ ಸ್ಥಳಾಂತರಕ್ಕಾಗಿ ಹೋರಾಟ ಸಮಿತಿ ನೇತೃತ್ವದಲ್ಲಿ ಪುರಸಭೆ ಎದುರು ಸೋಮವಾರ ಧರಣಿ ನಡೆಸಲಾಯಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಸಹ ಸಂಚಾಲಕ ಸುರೇಶ್ ಕಲ್ಲಾಗರ, ನಮ್ಮ ಹೋರಾಟ ಅಭಿವೃದ್ಧಿ ವಿರುದ್ಧ ಅಲ್ಲ. ಶುದ್ಧೀಕರಣ ಘಟಕ ನಗರದ ಹಿತದೃಷ್ಟಿಯಿಂದ ಆಗಬೇಕು. ಅದು ಜನ ವಾಸ ಮಾಡುವ ಸ್ಥಳದಿಂದ ದೂರ ಇರಬೇಕು. ಆದರೆ ಜನರ ಬದುಕು ಬಲಿಕೊಟ್ಟು ಅಭಿವೃದ್ಧಿ ಮಾಡು ತ್ತೇವೆ ಎಂಬುವುದು ಮೂರ್ಖತನದ ಪರಮಾವಧಿ ಎಂದು ಆರೋಪಿಸಿದರು.

ಘಟಕ ನಿರ್ಮಿಸಲು ಉದ್ದೇಶಿರುವ ಸ್ಥಳದಲ್ಲಿ ನೂರಾರು ಕುಟುಂಬಗಳು ನೂರಾರು ವರ್ಷಗಳಿಂದ ಬದುಕು ಸಾಗಿಸುತ್ತಿವೆ. ಸ್ಥಳೀಯರ ವಿರೋಧದ ನಡುವೆಯೇ ಮುಖ್ಯ ಘಟಕವನ್ನು ಇಲ್ಲಿ ನಿರ್ಮಿಸಲು ಪುರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರ ಹಿಂದೆ ಕೆಲವು ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಗಳು ಶಾಮೀಲಾಗಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು.

ನಿಜವಾಗಿಯೂ ಪುರಸಭೆಗೆ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದರೆ ರಾಜ್ಯ ಸರಕಾರಕ್ಕೆ ಮನವರಿಕೆ ಮಾಡಿ ಹೆಚ್ಚು ವರಿ ಹಣ ಮಂಜೂರು ಮಾಡಿಸಲು ಪ್ರಯತ್ನಿಸಲಿ. ಈ ಹಿಂದೆಯೂ ಜನರು ಸ್ಥಳಾಂತರ ಮಾಡಬೇಕು ಎಂದು ಪ್ರತಿಭಟನೆ ಮಾಡಿದಾಗ ರಾಜ್ಯ ಸರಕಾರ ಹೆಚ್ಚುವರಿ ಹಣ ಕೊಡಲು ಒಪ್ಪಿದ್ದು ಅನಂತರ ಅದು ನೆನೆಗುದಿಗೆ ಬಿದ್ದಿತ್ತು. ಈಗಲೂ ಅಂತಹ ಪ್ರಯತ್ನ ಮಾಡಿ ಸ್ಥಳೀಯ ಜನರನ್ನು ರಕ್ಷಿಸಲು ಪುರಸಭೆ ಮುಂದಾಗಬೇಕು. ಪುರಸಭೆ ಜನರ ಸಮಸ್ಯೆಗಳನ್ನು ಬಗೆಹರಿಸಲು ಕೆಲಸ ಮಾಡಬೇಕೆ ಹೊರತು ಪುರಸಭೆಯೇ ಜನರಿಗೆ ಸಮಸ್ಯೆ ಆಗಬಾರದು ಎಂದು ಅವರು ಹೇಳಿದರು.

ಸಮಿತಿ ಸಂಚಾಲಕ ರವಿ ವಿ.ಎಂ. ಮಾತನಾಡಿ, ಬೆಟ್ಟಾಗರದ ಸ್ಥಳೀಯರು ಶುದ್ಧೀಕರಣದ ಮುಖ್ಯ ಘಟಕ ವನ್ನು 500 ಮೀಟರ್ ಮುಂದಕ್ಕೆ ಸ್ದಳಾಂತರ ಗೊಳಿಸಬೇಕು ಎಂದು ಹಲವು ಬಾರಿ ಮನವಿ ಮಾಡಿದರೂ ಪುರಸಭೆ ಜನರನ್ನು ರಕ್ಷಿಸುವ ಕೆಲಸ ಮಾಡಿಲ್ಲ. ಅದನ್ನು ಇದೇ ಸ್ಥಳದಲ್ಲಿ ನಿರ್ಮಿಸುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ಇದರ ವಿರುದ್ಧ ಹೋರಾಟ ತೀವ್ರಗೊಳಿಸಬೇಕಾಗಿದೆ ಎಂದರು.

ಸಹಸಂಚಾಲಕ ಮಹೇಂದ್ರ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಅನ್ಯಾಯ ಆದಾಗ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಅದೇ ರೀತಿಯಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವುದು ಆಡಳಿತ ಗಾರರ ಕರ್ತವ್ಯ ಆಗಬೇಕು. ಶುದ್ಧೀಕರಣ ಘಟಕ ಸ್ಥಳಾಂತರ ಮಾಡಲು ಜಾಗ ತೋರಿಸಿದ್ದೇವೆ. ಆ ಜಾಗದಲ್ಲಿ ಯಾವುದೇ ಆಕ್ಷೇಪಣೆಗಳು ಇಲ್ಲ ಎಂದು ತಿಳಿಸಿದರು.

ಸ್ಥಳೀಯ ಪುರಸಭಾ ಸದಸ್ಯ ಶೇಖರ ಪೂಜಾರಿ, ಹೋರಾಟ ಸಮಿತಿಯ ಚಂದ್ರಶೇಖರ ವಿ. ಮಾತನಾಡಿ ದರು. ಪ್ರಮುಖರಾದ ವಿಶ್ವನಾಥ್ ಗರಡಿ, ಪ್ರಕಾಶ್ ಬೆಟ್ಟಾಗರ, ಶೇಖರ ದೋಣಿಮನೆ, ಉದಯ ಟೈಲರ್, ಸಂತೋಷ ಡಿ., ಮಂಜುನಾಥ ವಿ.ಎಸ್., ಕೃಷ್ಣ ಕೋಣಿ, ಸುರೇಶ್ ಮೂಡುಹಿತ್ಲು, ಗಿರಿಜಾ, ಯಶೋಧಾ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಭಟನೆಗೂ ಮುನ್ನ ನೂರಾರು ಮಂದಿ ಸ್ಥಳೀಯರು ಮೆರವಣಿಗೆ ಮೂಲಕ ಪುರಸಭೆಗೆ ಆಗಮಿಸಿದರು. ಮನವಿಯನ್ನು ಪುರಸಭಾ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರಿಗೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News