ರಘುನಂದನ್ ಕೃತಿಗೆ ಪ್ರೊ.ವಿ.ಎಂ.ಇನಾಂದಾರ್ ಪ್ರಶಸ್ತಿ

ಉಡುಪಿ, ಎ.7: ಖ್ಯಾತ ವಿಮರ್ಶಕ ಪ್ರೊ.ವಿ.ಎಂ.ಇನಾಂದಾರ್ ಇವರ ನೆನಪಿನಲ್ಲಿ ನೀಡುವ ’ಇನಾಂದಾರ್ ವಿಮರ್ಶಾ ಪ್ರಶಸ್ತಿ’ಗೆ ಖ್ಯಾತ ಕವಿ, ನಾಟಕಕಾರ ಹಾಗೂ ರಂಗನಿರ್ದೇಶಕ ರಘುನಂದನ ಅವರ ‘ತುಯ್ತವೆಲ್ಲ ನವ್ಯದತ್ತ, ಅಂದತ್ತರ ಉಯ್ಯಾಲೆ ಮತ್ತು ಅದರ ಸುತ್ತ’ ಕೃತಿ ಆಯ್ಕೆಯಾಗಿದೆ.
ರಘುನಂದನ್ರ ಈ ವಿಮರ್ಶಾ ಕೃತಿಯನ್ನು 2024ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದೆ.ಪ್ರಶಸ್ತಿಯನ್ನು ಎಪ್ರಿಲ್ 23ರಂದು ನಡೆಯುವ ಎಂ.ಜಿ.ಎಂ. ಕಾಲೇಜಿನ ವಾರ್ಷಿಕ ಮುದ್ದಣ ಸಾಹಿತ್ಯೋತ್ಸವದ ಸಂದರ್ಭ ದಲ್ಲಿ ನೀಡಿ ಗೌರವಿಸಲಾಗುವುದು ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಘುನಂದನ ಅವರು ವೃತ್ತಿನಿರತ ರಂಗ ನಿರ್ದೇಶಕರು, ರಂಗಕಲೆಯ ಅಧ್ಯಾಪಕರು, ಕವಿ ಹಾಗೂ ನಾಟಕ ಕಾರರು. ಅವರು ಮೈಸೂರಿನ ರಂಗಾಯಣ ಮತ್ತು ನೀನಾಸಂ ಸಂಸ್ಥೆಯಲ್ಲಿ ತೊಡಗಿಸಿಕೊಂಡವರು. ಇವರ ಪದ್ಯಗಳು, ಗದ್ಯಲೇೀಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ, ಅಂತರ್ಜಾಲ ತಾಣಗಳಲ್ಲಿ ಪ್ರಕಟವಾಗಿವೆ. ಇವರ ಕವನ ಸಂಕಲನ ‘ನಾನು ಸತ್ತಮೇಲೆ’ ಈಗಾಗಲೇ ಪ್ರಕಟವಾಗಿದೆ.ಇವರಿಗೆ ಪುತಿನಕಾವ್ಯ-ನಾಟಕ ಪುರಸ್ಕಾರ ಸಂದಿದೆ. ಅಲ್ಲದೆ ನೀನಾಸಂ ಪ್ರತಿಷ್ಠಾನ ನೀಡುವ ಬಿ.ವಿ.ಕಾರಂತ ಫೆಲೋಶಿಪ್ ಪಡೆದ ಮೊದಲಿಗರಾಗಿದ್ದಾರೆ.