ಸಂಸ್ಕೃತಿ, ಸಂಸ್ಕಾರ ಕಲಿಸುವುದು ಶಿಕ್ಷಕರ ಜವಾಬ್ದಾರಿ: ಅಬ್ದುಲ್ ರಹೀಮ್

Update: 2023-09-10 14:58 GMT

ಕುಂದಾಪುರ, ಸೆ.10: ಶಿಕ್ಷಕರಾಗಿ ಸೇವೆ ಮಾಡುವುದು ಪುಣ್ಯದ ವೃತ್ತಿ. ಬಾಲ್ಯದಲ್ಲಿಯೇ ವಿದ್ಯಾರ್ಥಿಗಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಿ ತಿದ್ದುವುದು ಪೋಷಕರು ಹಾಗೂ ಶಿಕ್ಷಕರು ಜವಾಬ್ದಾರಿ. ತಿಂಗಳಿನಲ್ಲಿ ಒಂದೆರಡು ದಿನ ಶಿಕ್ಷಕರು ಮಕ್ಕಳೊಂದಿಗೆ ಬೆರೆತು ಮನಸ್ಥಿತಿ ಅರಿಯುವ ಕೆಲಸ ಮಾಡಬೇಕಾಗಿದೆ ಎಂದು ಉಡುಪಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ರಹೀಮ್ ಹುಸೇನ್ ಶೇಖ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಉಡುಪಿ ಜಿಲ್ಲೆ ವತಿಯಿಂದ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಶಿಕ್ಷಕ ದಿನಾಚರಣೆ ಪ್ರಯುಕ್ತ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂದಿರದಲ್ಲಿ ರವಿವಾರ ನಡೆದ ಮಕ್ಕಳ ಶಿಕ್ಷಣ ಮತ್ತು ಶಿಕ್ಷಣ ಹಕ್ಕು ಕಾಯ್ದೆ- 2009 ಮಾಹಿತಿ ಕಾರ್ಯಗಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಹಿರಿಯ ಸಿವಿಲ್ ನ್ಯಾಯಾಧೀಶರು, ಕುಂದಾಪುರ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ರಾಜು ಎನ್. ಮಾತ ನಾಡಿ, ಸರಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಗಟ್ಟಿತನದ ಶಿಕ್ಷಣ ನೀಡುವ ಮಹತ್ತರ ಜವಬ್ದಾರಿ ಉಳಿಸಿಕೊಂಡ ಕಾರಣಕ್ಕೆ ಸರಕಾರಿಕನ್ನಡ ಶಾಲೆಗಳಿಗೆ ಮಕ್ಕಳನ್ನು ಪೋಷಕರು ಕಳಿಸುತ್ತಾರೆ. ಸಮಾಜದಲ್ಲಿ ಯಾವುದು ಒಳಿತು-ಕೆಡುಕು ಎನ್ನುವ ಶಿಕ್ಷಣ ಕಲಿಸುವ ಕೆಲಸವಾಗಬೇಕು ಎಂದರು.

ಚಿತ್ತೂರು- ಮಾರಣಕಟ್ಟೆ ಎಂ.ಎಸ್.ಮಂಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ಮಂಜ ಅವರಿಗೆ ’ಜಿಲ್ಲಾ ಮಟ್ಟದ ಸರಕಾರಿ ಶಾಲೆಗಳ ಅಭಿವೃದ್ಧಿ ಹರಿಕಾರ ಪ್ರಶಸ್ತಿ, ನಡೂರು ರಜತಾದ್ರಿ ಶ್ರೀವಾಣಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾ ಧ್ಯಾಯ ವಿಶ್ವನಾಥ ಶೆಟ್ಟಿ ಅವರಿಗೆ ’ಗುರುವಂದನೆ’, ಕೋಟೇಶ್ವರದ ಗೀತಾ ಎಚ್.ಎಸ್.ಎನ್ ಫೌಂಡೇಶನ್ ಅಧ್ಯಕ್ಷ ಶಂಕರ್ ಐತಾಳ ಅವರಿಗೆ ’ಗ್ರಾಮೀಣ ಭಾಗದ ಸರಕಾರಿ ಶಾಲೆಗಳ ಅಭಿವೃದ್ಧಿ ಸಾಧಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಬೈಂದೂರು ಶೈಕ್ಷಣಿಕ ವಲಯದ ಎಂ.ನಾಗರಾಜ ಶೆಟ್ಟಿ, ಉಡುಪಿ ವಲಯದ ಪರಿಮಳ ಅವಭೃತ, ಕುಂದಾಪುರ ವಲಯದ ಪ್ರಭಾಕರ ಶೆಟ್ಟಿ, ಬ್ರಹ್ಮಾವರ ವಯಲದ ಆಶಲತಾ, ಕಾರ್ಕಳ ವಲಯದ ಪ್ರೀತೇಶ್ ಕುಮಾರ್ ಅವರಿಗೆ ’ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ., ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ ರಾಜ್ಯ ಉಪಾಧ್ಯಕ್ಷ ಗುನ್ನಳ್ಳಿ ರಾಘವೇಂದ್ರ, ರಾಜ್ಯ ಸಮಿತಿ ಸದಸ್ಯೆ ಶೋಭಾ ಭಾಸ್ಕರ್, ಜಿಲ್ಲಾ ಕಾರ್ಯದರ್ಶಿ ದೀಪಾ ಮಹೇಶ್, ಬ್ರಹ್ಮಾವರ ತಾಲೂಕು ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಕಾರ್ಕಳ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್, ಕುಂದಾಪುರ ತಾಲೂಕು ಕಾರ್ಯದರ್ಶಿ ಪ್ರಮೋದಾ ಕೆ.ಶೆಟ್ಟಿ, ಬೈಂದೂರು ತಾಲೂಕು ಉಪಾಧ್ಯಕ್ಷ ರವಿ ಮರವಂತೆ, ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲ ಶೆಟ್ಟಿ, ಕೆನರಾ ಬ್ಯಾಂಕ್ ನಿವೃತ್ತ ಡಿಜಿಎಂ ಯು.ದಿನೇಶ್ ಪೈ, ಮಂಗಳೂರಿನ ಪಡಿ ಸಂಸ್ಥೆಯ ರೆನ್ನಿ ಡಿಸೋಜ, ಶಿಕ್ಷಣಾಭಿ ಮಾನಿ ಪ್ರಕಾಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ ಕುಂದಾಪುರ ತಾಲೂಕು ಅಧ್ಯಕ್ಷ ಎಸ್.ವಿ. ನಾಗರಾಜ ವಹಿಸಿದ್ದರು. ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂದಾಪುರ ಪುರಸಭಾ ಘಟಕಾ ಧ್ಯಕ್ಷ ಅಶ್ವಥ್ ಕುಮಾರ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ದೀಪಾ ಮಹೇಶ್ ವಂದಿಸಿದರು. ಎಸ್‌ಡಿಎಂಸಿ ಸಮನ್ವಯ ವೇದಿಕೆ ಕುಂದಾಪುರ ತಾಲೂಕು ಉಪಾಧ್ಯಕ್ಷ ರಾಜಶೇಖರ್ ನಿರೂಪಿಸಿ, ಪತ್ರಿಕಾ ಕಾರ್ಯದರ್ಶಿ ಶಶಿ ಬಳ್ಕೂರು ನಿರ್ವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News