ಮಲ್ಪೆ ಬಂದರಿನಲ್ಲಿ ದಲಿತ ಮಹಿಳೆಗೆ ಥಳಿತ ಪ್ರಕರಣ: ಮತ್ತಿಬ್ಬರು ಮಹಿಳೆಯರ ಬಂಧನ; 2 ಬೀಟ್ ಕಾನ್ಸ್ಟೇಬಲ್ ಅಮಾನತು

ಉಡುಪಿ, ಮಾ.20: ಮಲ್ಪೆ ಬಂದರಿನಲ್ಲಿ ಮಂಗಳವಾರ ಮುಂಜಾನೆ ನಡೆದ ಮೀನು ಕದ್ದ ಆರೋಪದಲ್ಲಿ ದಲಿತ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರಲ್ಲಿ ಭಾಗೀದಾರರಾದ ಆರೋಪದಲ್ಲಿ ಇನ್ನೂ ಇಬ್ಬರು ಮಹಿಳೆಯನ್ನು ಬಂಧಿಸಲಾಗಿದೆ.
ಅಲ್ಲದೇ ಬೀಟ್ ಕಾನ್ ಸ್ಟೇಬಲ್ಗಳಿಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಗಳಾದ ಲೀಲಾ ಮತ್ತು ಪಾರ್ವತಿ ಎಂಬವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ. ಅಲ್ಲದೇ ಹಲ್ಲೆ ಪ್ರಕರಣದ ಕುರಿತು ಸರಿಯಾಗಿ ಮಾಹಿತಿ ಸಂಗ್ರಹಿಸದ ಕಾರಣ ಇಬ್ಬರು ಬೀಟ್ ಕಾನ್ಸ್ಟೇಬಲ್ಗಳಾದ ಹೆಡ್ ಕಾನ್ಸ್ಟೇಬರ್ ಸುರೇಶ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ನಾಗರಾಜ್ ಎಂಬವರನ್ನು ಅಮಾನತುಗೊಳಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ಮಲ್ಪೆ ಬಂದರಿನಲ್ಲಿ ಮಹಿಳೆಯೊಬ್ಬರ ಮೇಲೆ ನಡೆದಿರುವ ಅಮಾನುಷ ಕೃತ್ಯವನ್ನು ರಾಜ್ಯ ಮಹಿಳಾ ಆಯೋಗ ತೀವ್ರವಾಗಿ ಖಂಡಿಸಿದೆ. ಪ್ರಕರಣಕ್ಕೆ ಕಾರಣಕರ್ತರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಸಮಗ್ರ ವರದಿಯನ್ನು ಅತೀ ಶೀಘ್ರದಲ್ಲಿ ಆಯೋಗಕ್ಕೆ ಸಲ್ಲಿಸುವಂತೆ ತಿಳಿಸಿದೆ ಎಂದೂ ಹೇಳಿಕೆಯಲ್ಲಿ ಎಸ್ಪಿ ತಿಳಿಸಿದ್ದಾರೆ.