ಖಾಸಗಿ ವಲಯ ಮತ್ತು ಕನ್ನಡಿಗರ ಉದ್ಯೋಗ ಮೀಸಲಾತಿ ಕನಸು

ಕರ್ನಾಟಕದಲ್ಲಿನ ಖಾಸಗಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಇನ್ನೂ ಮಾತಿನಲ್ಲಿಯೇ ಉಳಿದಿದೆ. ಒತ್ತಾಯಗಳು ಕೈಗೂಡುತ್ತಿಲ್ಲ. ಮಸೂದೆ ಜಾರಿಗೆ ಮುಂದಾದ ಸರಕಾರಕ್ಕೆ ಸದ್ಯಕ್ಕಂತೂ ಹಿನ್ನಡೆಯಾಗಿದೆ. ಮಸೂದೆಗೆ ಸಂಪುಟ ಸಭೆ ಸಮ್ಮತಿಸಿತ್ತಾದರೂ, ಆ ಬಳಿಕ ತಾತ್ಕಾಲಿಕ ತಡೆ ನೀಡಲಾಗಿದೆ. ಉದ್ಯಮ ವಲಯದ ತೀವ್ರ ವಿರೋಧವೇ ಇದಕ್ಕೆ ಕಾರಣವಾದಂತಿದೆ. ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಎಂಬುದು ವಾಸ್ತವಕ್ಕೆ ಬರುವುದು ಕಷ್ಟವೆ? ಉದ್ಯಮಿಗಳು ವಿರೋಧಿಸುತ್ತಿರುವುದು ಏಕೆ? ಇಲ್ಲಿನ ಸಾಂವಿಧಾನಿಕ ಅಡೆತಡೆಗಳು ಏನು?

Update: 2024-07-23 10:43 GMT

ಖಾಸಗಿ ಉದ್ಯಮದಲ್ಲಿ ಸ್ಥಳೀಯರಿಗೆ ಮೀಸಲಾತಿ ಎಂಬುದಕ್ಕೆ ತಾರ್ಕಿಕ ಅಂತ್ಯವೊಂದು ಸಿಗಲಾರದಂತಾಗಿದೆ. ಕೆಲವು ರಾಜ್ಯಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ನೀತಿಗಳಿವೆ. ಕೆಲವು ರಾಜ್ಯಗಳಲ್ಲಿ ಸರಕಾರದ ಪ್ರಯತ್ನಗಳ ವಿಚಾರವಾಗಿ ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿವೆ. ಕೆಲವು ರಾಜ್ಯಗಳು ಆ ನಿಟ್ಟಿನಲ್ಲಿ ತಂದ ಕಾನೂನು ರದ್ದಾಗಿದೆ. ಖಾಸಗಿ ಕಂಪೆನಿಗಳಲ್ಲಿ ಸ್ಥಳೀಯರಿಗೆ ಇಂತಿಷ್ಟು ಪ್ರಮಾಣದ ಉದ್ಯೋಗ ನೀಡಬೇಕೆಂಬ ಸರಕಾರಗಳ ಪ್ರಯತ್ನಗಳು ಈಡೇರುತ್ತಿಲ್ಲ. ಬದಲಾಗಿ ವಿರೋಧವೇ ಜಾಸ್ತಿ.

ಕರ್ನಾಟಕದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ವಿಚಾರವನ್ನು ಪ್ರಬಲವಾಗಿ ಪ್ರತಿಪಾದಿಸಿದ್ದು ಸರೋಜಿನಿ ಮಹಿಷಿ ವರದಿ. ಸರೋಜಿನಿ ಮಹಿಷಿ ವರದಿಯ 58 ಶಿಫಾರಸುಗಳ ಪೈಕಿ 45 ಶಿಫಾರಸುಗಳಿಗೆ ರಾಜ್ಯ ಸರಕಾರ ಒಪ್ಪಿಗೆ ನೀಡಿತ್ತು. ಪ್ರಮುಖ ಶಿಫಾರಸುಗಳಲ್ಲಿ ಒಂದಾದ ಸರಕಾರಿ ಹಾಗೂ ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಇನ್ನೂ ಜಾರಿಯಾಗಿಲ್ಲ. ಈಗ ಆ ನಿಟ್ಟಿನ ಸಿದ್ದರಾಮಯ್ಯ ಸರಕಾರದ ಯತ್ನವೂ ನನೆಗುದಿಗೆ ಬಿದ್ದಿದೆ.

ರಾಜ್ಯದಲ್ಲಿರುವ ಖಾಸಗಿ ಕೈಗಾರಿಕೆಗಳು ಹಾಗೂ ಇತರ ಕಂಪೆನಿಗಳ ಆಡಳಿತಾತ್ಮಕ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ.75 ಮೀಸಲಾತಿ ನಿಗದಿಪಡಿಸುವ ಕರಡು ಮಸೂದೆಗೆ ಸರಕಾರ ತಾತ್ಕಾಲಿಕ ತಡೆ ನೀಡಿದೆ. ಸಚಿವ ಸಂಪುಟ ಅನುಮೋದನೆ ನೀಡಿ, ಇನ್ನೇನು ಮಸೂದೆ ಮಂಡಿಸಬೇಕು ಎಂದಿದ್ದ ಸರಕಾರ ಒಂದೇ ದಿನದಲ್ಲಿ ಅದನ್ನು ಬದಿಗೆ ಸರಿಸಿಬಿಟ್ಟಿದೆ. ಮತ್ತಷ್ಟು ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕಚೇರಿಯಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಮಂಡನೆಗೆ ನಿಗದಿಯಾಗಿದ್ದ ಮಸೂದೆಯ ಬಗ್ಗೆ ಈಗ, ಅದಿನ್ನೂ ಸಿದ್ಧತೆಯ ಹಂತದಲ್ಲಿದೆ, ಮುಂದಿನ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದಕ್ಕೂ ಮೊದಲು, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸುವ ಮಸೂದೆಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಂಪುಟ ಸಭೆ ಒಪ್ಪಿತ್ತು. ಕರ್ನಾಟಕದಲ್ಲಿನ ಖಾಸಗಿ ವಲಯದ ಕಂಪೆನಿಗಳು, ಕಾರ್ಖಾನೆಗಳು ಹಾಗೂ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಶೇ.50ರಿಂದ ಶೇ.75ರಷ್ಟು ಮೀಸಲಾತಿ ಸಿಗಬೇಕೆಂಬ ಪ್ರಸ್ತಾಪ ಅದರಲ್ಲಿತ್ತು. ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಕರ್ನಾಟಕ ರಾಜ್ಯ ಉದ್ಯೋಗ ಮಸೂದೆ 2024ನ್ನು ವಿಧಾನಸಭೆಯಲ್ಲಿ ಮಂಡಿಸುವುದಕ್ಕೂ ತಯಾರಿ ನಡೆದಿತ್ತು. ಆದರೆ ಮಸೂದೆಗೆ ಉದ್ಯಮಿಗಳ ವಿರೋಧ ವ್ಯಾಪಕ ಮಟ್ಟದಲ್ಲಿ ವ್ಯಕ್ತವಾಗುತ್ತಿದ್ದಂತೆ ಸರಕಾರ ಹಿಂದೆ ಸರಿದಿದೆ ಮತ್ತು ಮಸೂದೆಗೆ ತಾತ್ಕಾಲಿಕ ತಡೆ ನೀಡಿದೆ.

ಮಸೂದೆಯಲ್ಲಿ ಏನೆಲ್ಲ ಪ್ರಸ್ತಾವಗಳಿದ್ದವು?

1.ಕರ್ನಾಟಕದಲ್ಲಿ ಖಾಸಗಿ ವಲಯದ ಕಂಪೆನಿಗಳು, ಕಾರ್ಖಾನೆಗಳು ಹಾಗೂ ಸಂಸ್ಥೆಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.50ರಿಂದ ಶೇ.75ರವರೆಗೆ ಮೀಸಲಾತಿ ನೀಡಬೇಕು.

2.ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.50ರಷ್ಟು ಮತ್ತು ಆಡಳಿತೇತರ ಹುದ್ದೆಗಳಲ್ಲಿ ಶೇ.75ರಷ್ಟು ಕನ್ನಡಿಗರಿಗೆ ಮೀಸಲಾತಿ ಸಿಗಬೇಕು.

3.ಕರ್ನಾಟಕದಲ್ಲಿ ಹುಟ್ಟಿದವರು, ಕರ್ನಾಟಕದಲ್ಲಿ 15 ವರ್ಷಗಳಿಂದ ವಾಸಿಸುತ್ತಿರುವವರು, ಕನ್ನಡ ಭಾಷೆಯಲ್ಲಿ ಮಾತನಾಡಲು, ಓದಲು ಹಾಗೂ ಬರೆಯಲು ಬರುವವರು ಉದ್ಯೋಗ ಮೀಸಲಾತಿ ಅರ್ಹರಾಗಿರುತ್ತಾರೆ.

4.ಎಸೆಸೆಲ್ಸಿಯಲ್ಲಿ ಕನ್ನಡ ಅಭ್ಯಸಿಸದವರು ನೋಡಲ್ ಏಜೆನ್ಸಿಗಳು ನಡೆಸುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ. ಅಂಥವರಿಗೆ ಮಾತ್ರ ಈ ಮೀಸಲಾತಿ ಸಿಗಲಿದೆ.

5.ಖಾಸಗಿ ವಲಯದಲ್ಲಿ ಹುದ್ದೆಗೆ ಅರ್ಹ ಅಭ್ಯರ್ಥಿ ಸಿಗದಿದ್ದರೆ ಕಂಪೆನಿಗಳು, ಕೈಗಾರಿಕೆಗಳು ಸರಕಾರ ಅಥವಾ ಇತರ ಸಂಸ್ಥೆಗಳ ಜೊತೆ ಸೇರಿ ಸ್ಥಳೀಯ ಅಭ್ಯರ್ಥಿಗೆ ಮೂರು ವರ್ಷದೊಳಗೆ ಕೆಲಸಕ್ಕೆ ಅಗತ್ಯವಾಗುವ ತರಬೇತಿ ನೀಡಿ ಹುದ್ದೆಯಲ್ಲಿ ಮುಂದುವರಿಸಬೇಕು.

6.ಅಷ್ಟಾಗಿಯೂ ಯಾವುದೇ ಸ್ಥಳೀಯ ಅಭ್ಯರ್ಥಿ ಆ ಹುದ್ದೆಗೆ ಅರ್ಹತೆ ಪಡೆಯದಿದ್ದರೆ ಕಂಪೆನಿಗಳು ಮೀಸಲಾತಿ ವಿನಾಯಿತಿಗಾಗಿ ಸೂಕ್ತ ದಾಖಲೆಗಳೊಂದಿಗೆ ಸರಕಾರಕ್ಕೆ ಅರ್ಜಿ ಸಲ್ಲಿಸಬಹುದು. ಸರಕಾರ ಸೂಕ್ತ ವಿಚಾರಣೆ ನಡೆಸಿ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.25 ಹಾಗೂ ಆಡಳಿತೇತರ ಹುದ್ದೆಗಳಲ್ಲಿ ಶೇ.50ರಷ್ಟು ಮೀಸಲಾತಿ ಕಡಿತಗೊಳಿಸಬಹುದು.

7.ಉದ್ಯೋಗ ಮೀಸಲಾತಿ ಕಾನೂನನ್ನು ಉಲ್ಲಂಘಿಸಿದರೆ ಕಂಪೆನಿಗಳಿಗೆ ಸರಕಾರ ಭಾರೀ ಮೊತ್ತದ ದಂಡ ವಿಧಿಸಬಹುದು.

ಆದರೆ ಈ ಮಸೂದೆಗೆ ಉದ್ಯಮ ವಲಯದಿಂದ ವಿರೋಧ ವ್ಯಕ್ತವಾಯಿತು. ಸಿ ಮತ್ತು ಡಿ ವರ್ಗದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ಎಂದು ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಕೆಲವೇ ಗಂಟೆಗಳಲ್ಲಿ ಅವರು ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದರು. ಉದ್ಯಮಿಗಳ ತೀವ್ರ ವಿರೋಧದ ಬಳಿಕ ಅವರು ಬೇರೊಂದು ಟ್ವೀಟ್ ಅನ್ನು ಪೋಸ್ಟ್ ಮಾಡಿ, ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಬರೆದುಕೊಂಡಿದ್ದರು. ಅಲ್ಲಿಗೆ, ಉದ್ಯೋಗ ಮೀಸಲಾತಿ ವಿಚಾರವಾಗಿ ಸರಕಾರ ನಿಲುವು ಬದಲಿಸಿದ್ದು ಸ್ಪಷ್ಟವಾಗಿತ್ತು. ಆಗಲೇ ಉದ್ಯಮ ವಲಯದವರ ಒತ್ತಡಕ್ಕೆ ಸರಕಾರ ಮಣಿದ ಬಗ್ಗೆ ಅನುಮಾನಗಳು ಮೂಡಿದ್ದವು.

ಉದ್ಯಮ ವಲಯದ ತಕರಾರುಗಳೇನು?:

ಮೀಸಲಾತಿ ಮಸೂದೆ ಜಾರಿಗೆ ಬಂದರೆ ಕಂಪೆನಿಗಳ ಪ್ರೊಡಕ್ಟಿವಿಟಿ ಮತ್ತು ಬೆಳವಣಿಗೆಗೆ ಹೊಡೆತ ಬೀಳಲಿದೆ.

ಹುದ್ದೆಗೆ ಅರ್ಹರಾದವರು, ಕೌಶಲ್ಯ ಹೊಂದಿದವರು ಸಿಗದಿದ್ದರೆ ಅವರಿಗೆ ತರಬೇತಿ ನೀಡಬೇಕಾಗಿರುವುದರಿಂದ ಇದು ಅನಗತ್ಯ ಹೊರೆಯಾಗಿದ್ದು, ಕಂಪೆನಿಯ ಉತ್ಪಾದನೆ ಕುಂಠಿತಗೊಳ್ಳಲಿದೆ.

ಇನ್‌ಫೋಸಿಸ್‌ನ ಮಾಜಿ ಸಿಎಫ್‌ಒ

ಮೋಹನ್‌ದಾಸ್ ಪೈ ಹೇಳಿದ್ದೇನು?

ಪೂರ್ತಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವುದಿದ್ದರೆ, ಅದಕ್ಕೆ ತಕ್ಕಂತೆ ಸರಕಾರವೇ ತರಬೇತಿ ಕೊಡಲಿ. ಉನ್ನತ ಶಿಕ್ಷಣಕ್ಕೆ ಹಣ ಖರ್ಚು ಮಾಡಲಿ. ಮೂಲ ಸೌಕರ್ಯಗಳ ಅಭಿವೃದ್ಧಿಗೆ ವೆಚ್ಚ ಮಾಡಲಿ.

 

ಕನ್ನಡದ ಪರೀಕ್ಷೆ ಪಾಸು ಮಾಡಿದವರಿಗೆ ಮಾತ್ರವೇ ಉದ್ಯೋಗ ಎಂದರೆ, ಹೆಚ್ಚಿನ ಸೌಕರ್ಯ ಇರುವ ಹೈದರಾಬಾದ್ ಹಾಗೂ ತಮಿಳುನಾಡಿಗೆ ಕಂಪೆನಿಗಳು ಹೋಗುತ್ತವೆ. ಇಲ್ಲಿಗೆ ಬಂಡವಾಳ ಹರಿದು ಬರುವುದಿಲ್ಲ.

ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜುಂದಾರ್ ಶಾ ಹೇಳಿದ್ದು:

ಇಲ್ಲಿ ಕೌಶಲ್ಯಕ್ಕೆ ಆದ್ಯತೆ. ಸ್ಥಳೀಯರಿಗೆ ಉದ್ಯೋಗ ನೀಡುವ ಭರದಲ್ಲಿ ಕಂಪೆನಿಯ ಅಗ್ರ ಸ್ಥಾನಕ್ಕೆ ಧಕ್ಕೆಯಾಗಬಾರದು. ಕೌಶಲ್ಯವುಳ್ಳವರ ಆಯ್ಕೆಗೆ ಅವಕಾಶವಿರಬೇಕು.

ಅಸೋಚಾಮ್ ಅಧ್ಯಕ್ಷ ಆರ್.ಕೆ. ಮಿಶ್ರಾ ಹೇಳಿಕೆ:

ಇದು ಇಲ್ಲಿನ ಐಟಿ ಉದ್ಯಮವನ್ನು ಓಡಿಸುತ್ತದೆ. ಇದೊಂದು ದೂರದೃಷ್ಟಿಯಿಲ್ಲದ ನಡೆ.

ಎಫ್‌ಕೆಸಿಸಿಐ ಹೇಳಿದ್ದೇನು?:

ಸ್ಥಳೀಯರಿಗೆ ಉದ್ಯೋಗ ಒದಗಿಸುವ ಸರಕಾರದ ಗುರಿ ಸ್ವಾಗತಾರ್ಹವಾದರೂ, ತಾಂತ್ರಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ಮತ್ತು ರಾಷ್ಟ್ರದ ಪ್ರಮುಖ ಕೈಗಾರೀಕರಣಗೊಂಡ ರಾಜ್ಯವಾಗಲು ನಮಗೆ ನುರಿತ ಪ್ರತಿಭಾವಂತರ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರಕಾರ ತನ್ನ ನಿರ್ಧಾರ ಮರುಪರಿಶೀಲಿಸಬೇಕು.

ಸರಕಾರದ ಪ್ರತಿಕ್ರಿಯೆ:

ಉದ್ಯಮವಲಯದ ಟೀಕೆಗೆ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್, ‘‘ತಾಂತ್ರಿಕ ಸಮಸ್ಯೆಗಳನ್ನು ನಾವೂ ಅರ್ಥ ಮಾಡಿಕೊಳ್ಳುತ್ತೇವೆ. ತಾಂತ್ರಿಕತೆ ವಿಚಾರ ಬಂದಾಗ ಅಗತ್ಯವಿದ್ದೆಡೆ ರಿಯಾಯಿತಿ ನೀಡಲಾಗುವುದು’’ ಎಂದಿದ್ದರು.

ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಂತೂ ಅತ್ಯಂತ ಪ್ರಬಲವಾಗಿ ಮಸೂದೆಯನ್ನು ಸಮರ್ಥಿಸಿಕೊಂಡಿದ್ದರು.

ಅನಿಲ್ ಲಾಡ್ ಪ್ರತಿಪಾದಿಸಿದ ಅಂಶಗಳು:

ಕರ್ನಾಟಕದಲ್ಲಿ ಪ್ರತಿಭೆಗಳಿಲ್ಲ ಎಂಬ ಮಾತಾಡುವುದನ್ನು ಖಾಸಗಿ ಸಂಸ್ಥೆಗಳು ಮೊದಲು ನಿಲ್ಲಿಸಬೇಕು.

ಉದ್ಯಮದವರೇನೂ ಇಲ್ಲಿ ಸಮಾಜಸೇವೆ ಮಾಡಲು ಬರುತ್ತಿಲ್ಲ. ಅವರಿಂದ ನಮಗೆ ಆಗುವ ಅನುಕೂಲಕ್ಕಿಂತಲೂ ನಮ್ಮಿಂದ ಅವರು ಪಡೆದುಕೊಳ್ಳುವುದೇ ಹೆಚ್ಚು.

ನಾವು ಒದಗಿಸುವ ಭೂಮಿ, ನಾವು ಒದಗಿಸುವ ಸೌಕರ್ಯ, ಸೌಲಭ್ಯಗಳಿಗೆ ಪ್ರತಿಯಾಗಿ ನಮ್ಮವರಿಗೆ ಉದ್ಯೋಗ ಕೇಳುತ್ತಿದ್ದೇವೆ. ನೂರಕ್ಕೆ ನೂರನ್ನೂ ಕೊಡಿ ಎಂದೇನೂ ಕೇಳುತ್ತಿಲ್ಲ. ನಾವು ಕೇಳುತ್ತಿರುವುದು ನ್ಯಾಯಯುತವಾಗಿದೆ.

ದಿನವೂ ಬದಲಾಗುತ್ತಿರುವ ತಾಂತ್ರಿಕತೆಯಲ್ಲಿ ಯಾವ ರೀತಿಯ ಕೌಶಲ್ಯದ ಅಗತ್ಯವಿದೆ ಎಂದು ಹೇಳಬೇಕಾದವರು ಉದ್ಯಮದವರು. ಅವರು ಮುಂದೆ ಬರಲಿ, ಸರಕಾರ ಎಲ್ಲ ನೆರವನ್ನೂ ನೀಡುತ್ತದೆ.

ಉದ್ಯಮಿಗಳು ಹೇಳುತ್ತಿರುವುದನ್ನು ನಾವು ನಿರ್ಲಕ್ಷಿಸುವುದಿಲ್ಲ. ಆದರೆ ಅವಕಾಶ ಕೊಟ್ಟು ನೋಡಿ. ಕೌಶಲ್ಯವಿಲ್ಲದಿದ್ದರೆ ತರಬೇತಿ ಕೊಡೋಣ. ನಾವೂ ಕೈಜೋಡಿಸುತ್ತೇವೆ. ಅರ್ಹರಾದವರನ್ನೇ ಆಯ್ದುಕೊಳ್ಳಲಿ. ಅದನ್ನು ಬಿಟ್ಟು ಕೌಶಲ್ಯವಿಲ್ಲ ಎನ್ನುವುದು ಸರಿಯಲ್ಲ.

ಒಂದು ಮುಖ್ಯ ವಿಚಾರವನ್ನು ಗಮನಿಸಬೇಕಿದೆ. ಏನೆಂದರೆ, ಇಂಥದೊಂದು ಕಾನೂನನ್ನು ಸರಕಾರ ತಂದರೆ ಅದು ಸಂವಿಧಾನ ಬಾಹಿರ ಎನ್ನಿಸಿಕೊಳ್ಳುತ್ತದೆಯೇ ಎಂಬುದು. ಹರ್ಯಾಣ ಸರಕಾರ ಜಾರಿಗೆ ತಂದಿದ್ದ ಕಾನೂನಿನ ವಿಚಾರದಲ್ಲಿ ಕೋರ್ಟ್ ಪರಿಗಣಿಸಿದ್ದ ಅಂಶಗಳಿಗೆ ಉತ್ತರ ಕೊಡುವ ರೀತಿಯಲ್ಲಿ ಕರ್ನಾಟಕದ ಮಸೂದೆ ಕೂಡ ಯಾವುದೇ ಪ್ರತಿವಾದವನ್ನು ಹೊಂದಿರಲಿಲ್ಲ ಎಂದು ಹೇಳಲಾಗುತ್ತದೆ. ಇನ್ನೊಂದು ವಾದವೇನೆಂದರೆ, ಬಂಡವಾಳ ವಲಸೆಯನ್ನು ಸ್ವಾಗತಿಸುವವರು, ಕಾರ್ಮಿಕ ವಲಸೆಯನ್ನು ಹೇಗೆ ತಿರಸ್ಕರಿಸುತ್ತಾರೆ ಎಂಬುದು.

ಹಾಗಾಗಿ, ಸ್ಥಳೀಯರಿಗೆ ಆದ್ಯತೆ ಎಂಬುದು ವಲಸಿಗ ವಿರೋಧಿ ಎಂದಾಗದಂತೆ ಎಚ್ಚರ ಅಗತ್ಯ. ಸಾಮಾಜಿಕ ನ್ಯಾಯದ ನೀತಿಗಳನ್ನು ಅನುಸರಿಸುವುದು ಉದ್ಯಮಿಗಳ ಸಾಂವಿಧಾನಿಕ ಜವಾಬ್ದಾರಿಯೂ ಆಗಿದೆ ಎಂದು ತಾಕೀತು ಮಾಡಬಲ್ಲ ಹೋರಾಟಗಳು ಬೇಕು. ಜೊತೆಗೆ, ಕಾರ್ಪೊರೇಟ್ ಬಂಡವಾಳಶಾಹಿ ಪರ ಆರ್ಥಿಕತೆಯನ್ನು ಬದಲಿಸಿ, ಸಂವಿಧಾನದ ಆಶಯಕ್ಕೆ ಒತ್ತು ಕೊಡುವ ಆರ್ಥಿಕತೆಯನ್ನು ರೂಪಿಸಬೇಕಿದೆ.

ಒಂದೆಡೆ ಕನ್ನಡಿಗರು ಉದ್ಯೋಗ ವಂಚಿತರಾಗಬಾರದು ಎಂಬ ಕಾಳಜಿಯನ್ನು ಸರಕಾರ ವ್ಯಕ್ತಪಡಿಸುವಾಗಲೇ, ಐಟಿ ಕಂಪೆನಿಗಳಂಥ ಖಾಸಗಿ ವಲಯದ ಸಂಸ್ಥೆಗಳು ಇದೇ ನೆಪ ಮಾಡಿ ರಾಜ್ಯದಿಂದ ಕಾಲ್ಕೀಳುವ ಮಾತಾಡುತ್ತಿರುವುದು, ಅವರು ಸ್ಥಳೀಯರಿಗೆ ಮೀಸಲಾತಿ ಪ್ರತಿಪಾದನೆಯ ಪರವಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಅವು ತಮ್ಮ ಲಾಭವನ್ನಷ್ಟೇ ನೋಡುವುದು ಮತ್ತು ಸರಕಾರಗಳು ಬಹಳ ಸಲ ಕಾರ್ಪೊರೇಟ್ ಪರ ಧೋರಣೆಗೇ ಕಟ್ಟುಬೀಳುವುದು ಸಾಮಾನ್ಯವಾಗಿಬಿಡುತ್ತಿದೆ.

ಮಾಲ್‌ನಲ್ಲಿ ಪಂಚೆ ಉಟ್ಟ ರೈತನನ್ನು ಅವಮಾನಿಸಿದ್ದಕ್ಕೆ ಗರಂ ಆದ ಸರಕಾರ, ಕನ್ನಡಿಗರಿಗೆ ನಮ್ಮಲ್ಲಿ ಉದ್ಯೋಗ ಪಡೆಯಲು ಅರ್ಹತೆ ಇಲ್ಲ ಎಂದ ಉದ್ಯಮಿಗಳ ಬಗ್ಗೆ ಸಿಟ್ಟಾಗುವುದಿಲ್ಲ. ಬದಲಾಗಿ ಅವರನ್ನು ಸಮಾಧಾನಪಡಿಸಲು ಬೇಕಾದ ಕ್ರಮ ಕೈಗೊಳ್ಳುತ್ತದೆ. ಮಾಲ್‌ನಲ್ಲಿ ರೈತನನ್ನು ಅವಮಾನಿಸಿದ ಧೋರಣೆಯೇ, ಕಾರ್ಪೊರೇಟ್ ವಲಯದಲ್ಲಿ ಕನ್ನಡಿಗ ಉದ್ಯೋಗಾಕಾಂಕ್ಷಿಗಳ ಬಗ್ಗೆಯೂ ಇದೆ. ಆದರೆ ಸರಕಾರ ಇವೆರಡರಕ್ಕೂ ಪ್ರತಿಕ್ರಿಯಿಸುವ ರೀತಿ ಮಾತ್ರ ಸಂಪೂರ್ಣ ಭಿನ್ನ. ಸರಕಾರಗಳ ದೌರ್ಬಲ್ಯವನ್ನು ಚೆನ್ನಾಗಿಯೇ ಬಲ್ಲ ಕಾರ್ಪೊರೇಟ್ ವಲಯ ಲಗಾಮನ್ನು ತನ್ನ ಕೈಯಲ್ಲಿಯೇ ಇಟ್ಟುಕೊಳ್ಳಲು ನೋಡುತ್ತದೆ. ಇಂತಹ ಸನ್ನಿವೇಶದಲ್ಲಿ, ರಾಜ್ಯ ಸರಕಾರ ಮಸೂದೆಗೆ ತಾತ್ಕಾಲಿಕ ತಡೆ ನೀಡಿರುವುದು ಒಂದು ಅಧ್ಯಾಯದ ಮುಕ್ತಾಯದ ಹಾಗೆಯೇ ಕಾಣಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News