ಸೈದಾಪುರ | ಮಿತ್ರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಗೆ ಚಾಲನೆ

ಸೈದಾಪುರ : ಬೇಸಿಗೆಯಲ್ಲಿ ಸಾರ್ವಜನಿಕರ ನೀರಿನ ದಾಹವನ್ನು ತೀರಿಸುತ್ತಿರುವ ಮಿತ್ರರ ಕಾರ್ಯ ಶ್ಲಾಘನೀಯವಾದುದ್ದು ಎಂದು ಸಿದ್ದಚೇತನಾಶ್ರಮ ಸಿದ್ದಾರೂಢ ಮಠದ ಸೋಮೇಶ್ವರನಂದ ಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಿತ್ರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರಾರಂಭಿಸಿದ ಬೇಸಿಗೆಯ ಸಂದರ್ಭದಲ್ಲಿ “ಬಾಯಾರಿದವರಿಗೆ ನೀರು” ಉಚಿತ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಯ 3ನೇ ವರ್ಷದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಿತ್ರ ಬಳಗವು ಸ್ವಯಂ ಪ್ರೇರಣೆಯಿಂದ ಸ್ವಲ್ಪ ಸ್ವಲ್ಪ ಹಣವನ್ನು ಸಂಗ್ರಹಿಸಿ ಬಿದಿರಿನ ಹೊಸ ತಡಿಕೆಗಳಿಂದ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು, ಅದರಲ್ಲಿ 45 ರಿಂದ 50 ಲೀಟರ್ ನೀರು ಸಂಗ್ರಹದ ಸುಮಾರು 10 ಮಣ್ಣಿನ ಮಡಿಕೆಗಳನ್ನು ಮರಳಿನ ರಾಶಿಯಲ್ಲಿ ಇಟ್ಟಿದ್ದಾರೆ. ಬೇಸಿಗೆಯಲ್ಲಿ ಗ್ರಾಮೀಣ, ನಗರ ಪ್ರದೇಶಗಳಿಂದ ಬಾಯಾರಿ ಬರುವ ಜನರಿಗೆ ಮಣ್ಣಿನ ಲೋಟಗಳ ಮೂಲಕ ದಿನ ನಿತ್ಯ ನೂರಾರು ಲೀಟರ್ ತಂಪಾದ ಶುದ್ಧ ಕುಡಿಯುವ ನೀರು ನೀಡಲು ಒಬ್ಬ ವ್ಯಕ್ತಿಯನ್ನು ನೇಮಕ ಮಾಡಿದ್ದಾರೆ. ಇವರ ಕಾರ್ಯ ಶ್ಲಾಘನೀಯ ಹಾಗೂ ಇತರರಿಗೆ ಮಾದರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ನಂತರ ಮಿತ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಚಂದ್ರಶೇಖರ್ಗೌಡ ಹೆಗ್ಗಣಗೇರಾ ಮಾತನಾಡಿದರು.
ಈ ಸಂದರ್ಭದಲ್ಲಿ ಗೌರವಧ್ಯಕ್ಷ ರಾಘವೇಂದ್ರ ಕಲಾಲ್, ಉಪಾಧ್ಯಕ್ಷ ವಿಜಯ ಕಂದಳ್ಳಿ, ಕಾರ್ಯದರ್ಶಿ ಬಸ್ಸು ಕಲಾಲ್, ಖಜಾಂಚಿ ಗುರುರಾಜ್ ವಿಶ್ವಕರ್ಮ, ವಿಜಯಕುಮಾರ್ ಎಸ್ ಆರ್, ರಾಜೇಶ್ ದೇವರ ಶೆಟ್ಟಿ , ಮಲ್ಲಿಕಾರ್ಜುನ ಅರಿಕೇರಕರ್, ಶಕ್ಷಾವಲಿ ಮುನಗಲ್, ದೇವು ಸೈದಣ್ಣೋರ್, ನಿಂಗಪ್ಪ ಮುನಾಗಲ್, ಮಾಳಪ್ಪ ಘಂಟಿ, ಬಸು ಸ್ವಾಮಿ ಕೂಡ್ಲೂರು, ಹಣಮರೆಡ್ಡಿ ನಾಯಕ್, ಉಮೇಶ್ ಸೈದಾಪುರ ಹಾಗೂ ಸದಸ್ಯರು, ಗ್ರಾಮಸ್ಥರು ಸೇರಿದಂತೆ ಇತರರು ಉಪಸ್ಥಿತರಿದ್ದರು.