ಯಾದಗಿರಿ | ಏ.10ರ ವರೆಗೆ ನೀರು ಹರಿಸಲು ಆಗ್ರಹಿಸಿ ರಸ್ತೆ ತಡೆ

ಸುರಪುರ : ಏ.10ರ ವರೆಗೆ ಕೃಷ್ಣಾ ಎಡದಂಡೆ ಕಾಲುವೆಗಳಿಗೆ ನೀರು ಹರಿಸಲು ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ತಿಳಿಸಿದರು.
ಸಂಯುಕ್ತ ಹೋರಾಟ ಸಮಿತಿ ವತಿಯಿಂದ ನಗರದ ಪತ್ರಿಕಾ ಭವನದಲ್ಲಿನ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ, ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಲು ನಾವು ಸರಕಾರಕ್ಕೆ ನಿರಂತರವಾಗಿ ಒತ್ತಾಯ ಮಾಡುತ್ತಿದ್ದೇವೆ,ಆದರೆ ಸರಕಾರ 25 ರಿಂದ ನೀರು ಬಂದ್ ಮಾಡುವುದಾಗಿ ಹೇಳುತ್ತಿದೆ, ಇದನ್ನು ಖಂಡಿಸಿ ಮಂಗಳವಾರದಂದು ನಗರದ ಹಸನಾಪುರ ಕ್ಯಾಂಪ್ ಬಳಿಯ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚೆನ್ನಪ್ಪ ಆನೆಗುಂದಿ ಮಾತನಾಡಿ, ಸರಕಾರ ರೈತರ ಸಮಸ್ಯೆಯನ್ನು ಅರಿತುಕೊಳ್ಳುತ್ತಿಲ್ಲ. ಸಾವಿರಾರು ಎಕರೆ ಬೆಳೆ ಒಣಗುತ್ತಿವೆ, ಕಾಲುವೆಗೆ ನಿರಂತರವಾಗಿ ನೀರು ಬಿಟ್ಟರು ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ, ಆದರೆ ಸರಕಾರ ರೈತರ ಬೇಡಿಕೆಗೆ ಮನ್ನಣೆ ಕೊಡದೆ ಮಾರ್ಚ್ 25ಕ್ಕೆ ನೀರು ಬಂದ್ ಮಾಡುವುದಾಗಿ ಹೇಳುತ್ತಿದೆ, ಇದರಿಂದ ರೈತರ ಆತ್ಮಹತ್ಯೆಗೆ ಸರಕಾರ ಕಾರಣವಾಗಲಿದೆ ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬುಚ್ಚಪ್ಪ ನಾಯಕ ಇತರರು ಮಾತನಾಡಿದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ದೇವಿಂದ್ರಪ್ಪ ಪತ್ತಾರ, ತಿಮ್ಮಯ್ಯ ತಳವಾರ, ರಾಮಯ್ಯ ಆಲ್ಹಾಳ, ಮಹಾದೇವಪ್ಪ ಬಿರಾದಾರ, ಮಲ್ಕಣ್ಣ ಚಿಂತಿ, ಮಲ್ಲಣ್ಣ ಹುಬ್ಬಳ್ಳಿ, ಬಸವರಾಜ ದೊಡ್ಮನಿ, ವೀರಭದ್ರಪ್ಪ ತಳವಾರಗೇರ, ಬಸವರಾಜ ದೇವತ್ಕಲ್ ಇತರರಿದ್ದರು.