ಹೆಚ್ಚುತ್ತಿರುವ ತಾಪಮಾನ: ಬಿಸಿಗಾಳಿಯಿಂದ ರಕ್ಷಿಸಿಕೊಳ್ಳಲು ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಸಚಿವಾಲಯ

Update: 2024-04-04 09:21 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಬೇಸಿಗೆ ಕಾವು ಪಡೆದುಕೊಳ್ಳುತ್ತಿದ್ದು, ಹೆಚ್ಚುತ್ತಿರುವ ತಾಪಮಾನ ಮತ್ತು ಸಂಭಾವ್ಯ ಉಷ್ಣಅಲೆಗಳ ನಡುವೆ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಆರೋಗ್ಯ ಸಚಿವಾಲಯವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿದೆ.

ತನ್ನ ಇತ್ತೀಚಿನ ಎಕ್ಸ್ ಪೋಸ್ಟ್‌ನಲ್ಲಿ ಆರೋಗ್ಯ ಸಚಿವಾಲಯವು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರ ಅಧ್ಯಕ್ಷತೆಯಲಿ ನಡೆದ ಸಭೆಯಲ್ಲಿ ಚರ್ಚಿಸಲಾದ ಕೆಲವು ಕ್ರಮಗಳನ್ನು ವಿವರಿಸಿದೆ. ಈ ಕ್ರಮಗಳು ಉಷ್ಣ ಸಂಬಂಧಿತ ಕಾಯಿಲೆಗಳನ್ನು ನಿಭಾಯಿಸುವ ಮತ್ತು ಸಮಗ್ರ ಕ್ರಿಯಾ ಯೋಜನೆಯನ್ನು ಅನುಷ್ಠಾನಿಸುವ ಉದ್ದೇಶವನ್ನು ಹೊಂದಿವೆ ಎಂದು ಅದು ತಿಳಿಸಿದೆ.

ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳು:

ಏನನ್ನು ಮಾಡಬೇಕು

► ಶರೀರದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಿ

► ಸೂರ್ಯನ ಬಿಸಿಲಿಗೆ ನೇರವಾಗಿ ಒಡ್ಡಿಕೊಳ್ಳುವುದನ್ನು ತಪ್ಪಿಸಿ

► ಶರೀರ ಸಂಪೂರ್ಣ ಮುಚ್ಚುವಂತೆ ಬಟ್ಟೆ ಧರಿಸಿ

► ಸಾಧ್ಯವಾದಷ್ಟು ಸಮಯ ಮನೆಯ ಒಳಗೇ ಇರಿ

► ಒಂಟಿಯಾಗಿರುವ ಹಿರಿಯ ವ್ಯಕ್ತಿಗಳು ಮತ್ತು ಅನಾರೋಗ್ಯಪೀಡಿತರ ಆರೋಗ್ಯದ ಬಗ್ಗೆ ಪ್ರತಿದಿನ ನಿಗಾ ವಹಿಸಿ

► ನಿಮ್ಮ ಮನೆಯನ್ನು ತಂಪಾಗಿರಿಸಿ. ಪರದೆಗಳು,ಶಟರ್‌ಗಳು ಅಥವಾ ಸನ್‌ಶೇಡ್‌ಗಳನ್ನು ಬಳಸಿ. ರಾತ್ರಿಗಳಲ್ಲಿ ಕಿಟಕಿಗಳನ್ನು ತೆರೆದಿರಿಸಿ

►ಹಗಲಿನ ಸಮಯದಲ್ಲಿ ಕೆಳ ಅಂತಸ್ತುಗಳಲ್ಲಿರಲು ಪ್ರಯತ್ನಿಸಿ

► ಶರೀರವನ್ನು ತಂಪಾಗಿರಿಸಲು ಫ್ಯಾನ್ ಮತ್ತು ಒದ್ದೆ ಬಟ್ಟೆಗಳನ್ನು ಬಳಸಿ

ಏನನ್ನು ಮಾಡಬಾರದು

► ಮಧ್ಯಾಹ್ನ 12 ಗಂಟೆಯಿಂದ ಅಪರಾಹ್ನ 4 ಗಂಟೆಯವರೆಗೆ ಹೊರಗೆ ಹೋಗುವುದನ್ನು ನಿವಾರಿಸಿ

► ಬಿಸಿಲಿನಲ್ಲಿ ಚಟುವಟಿಕೆಗಳನ್ನು ತಪ್ಪಿಸಿ

► ಅಪರಾಹ್ನ 2ರಿಂದ 4ರವರೆಗೆ ಅಡಿಗೆ ಮಾಡುವ ಗೋಜಿಗೆ ಹೋಗಬೇಡಿ

► ವಾಹನಗಳಲ್ಲಿ ಮಕ್ಕಳನ್ನು ಮತ್ತು ಸಾಕುಪ್ರಾಣಿಗಳನ್ನು ಒಂಟಿಯಾಗಿ ಬಿಡಬೇಡಿ

►ಮದ್ಯ,ಚಹಾ,ಕಾಫಿ,ಸಿಹಿ ಮತ್ತು ಕಾರ್ಬೊನೇಟೆಡ್ ಪಾನೀಯಗಳ ಸೇವನೆಯಿಂದ ದೂರವಿರಿ

► ಬರಿಗಾಲಲ್ಲಿ ನಡೆಯಬೇಡಿ

ಇದು ಬಿಸಿಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಆರೋಗ್ಯ ಸಚಿವಾಲಯವು ಈ ಹಿಂದೆ ಹೊರಡಿಸಿದ್ದ ಮುನ್ನೆಚ್ಚರಿಕೆ ಕ್ರಮಗಳ ಪಟ್ಟಿಯ ಮುಂದುವರಿದ ಭಾಗವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News