ಬಾಂಗ್ಲಾದೇಶದ ಇತ್ತೀಚಿನ ವಿದ್ಯಮಾನಗಳು ನಮಗೆ ಸ್ವಾತಂತ್ರ್ಯ ಮತ್ತು ಮುಕ್ತತೆಯ ಮೌಲ್ಯವನ್ನು ನೆನಪಿಸುತ್ತವೆ: ಸಿಜೆಐ ಡಿ.ವೈ.ಚಂದ್ರಚೂಡ್

Update: 2024-08-15 13:53 GMT

ಡಿ.ವೈ.ಚಂದ್ರಚೂಡ್ | PC : PTI 

ಹೊಸದಿಲ್ಲಿ : ಸ್ವಾತಂತ್ರ್ಯ ಹಾಗೂ ಮುಕ್ತತೆಯ ಮಹತ್ವವನ್ನು ಗುರುವಾರ ಒತ್ತಿ ಹೇಳಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನೆರೆಯ ಬಾಂಗ್ಲಾದೇಶದಲ್ಲಿನ ಇತ್ತೀಚಿನ ವಿದ್ಯಮಾನಗಳು ನಮಗೆ ಈ ಹಕ್ಕಿನ ಮೌಲ್ಯಗಳನ್ನು ನೆನಪಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಸುಪ್ರೀಂ ಕೋರ್ಟ್ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ, ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಡಿ.ವೈ.ಚಂದ್ರಚೂಡ್, ಸ್ವಾತಂತ್ರ್ಯ ದಿನಾಚರಣೆಯು ನಮಗೆ ದೇಶದ ಜನರು ಪರಸ್ಪರ ಹೊಂದಿರುವ ಕರ್ತವ್ಯಗಳನ್ನು ನೆನಪಿಸುತ್ತದೆ ಹಾಗೂ ಸಂವಿಧಾನದ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುವಂತೆ ಮಾಡುತ್ತದೆ ಎಂದು ಹೇಳಿದರು.

“ಬಾಂಗ್ಲಾದೇಶದಲ್ಲಿ ಏನಾಗುತ್ತಿದೆ ಅದು ನಮಗೆ ಮುಕ್ತತೆಯು ಅದೆಷ್ಟು ಅಮೂಲ್ಯ ಎಂಬುದರ ಸ್ಪಷ್ಟ ನೆನಪಾಗಿದೆ. ಸ್ವಾತಂತ್ರ್ಯ ಮತ್ತು ಮುಕ್ತತೆಯನ್ನು ಹಗುರವಾಗಿ ಪರಿಗಣಿಸುವುದು ಸುಲಭ. ಆದರೆ, ಇವುಗಳ ಮಹತ್ವವನ್ನು ನೆನಪಿಟ್ಟುಕೊಳ್ಳಲು ಭೂತಕಾಲದ ಕತೆಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ” ಎಂದು ಅವರು ಅಭಿಪ್ರಾಯಪಟ್ಟರು.

ಆಗಸ್ಟ್ 5ರಂದು ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ, ಅಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಅಲ್ಪಸಂಖ್ಯಾತ ಹಿಂದೂಗಳ ಮೇಲೆ ವ್ಯಾಪಕ ದಾಳಿಯ ಘಟನೆಗಳು ನಡೆಯುತ್ತಿರುವ ಬೆನ್ನಿಗೇ ಮುಖ್ಯ ನ್ಯಾಯಮೂರ್ತಿಗಳ ಈ ಹೇಳಿಕೆ ಹೊರಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News