ಶಿವಸೇನೆ(ಯುಬಿಟಿ) ಚುನಾವಣಾ ಚಿಹ್ನೆ ಬಿಡುಗಡೆ | ‘ಉರಿಯುತ್ತಿರುವ ದೊಂದಿ’ ನಿರಂಕುಶಾಡಳಿತವನ್ನು ಸುಟ್ಟು ಭಸ್ಮಗೊಳಿಸಲಿದೆ : ಉದ್ಧವ್‌ ಠಾಕ್ರೆ

Update: 2024-04-16 16:28 GMT

ಉದ್ಧವ್‌ ಠಾಕ್ರೆ | PC: PTI 

ಮುಂಬೈ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಮಂಗಳವಾರ ಪರೋಕ್ಷ ದಾಳಿಯನ್ನು ನಡೆಸಿದ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆಯವರು, ತನ್ನ ಪಕ್ಷದ ಚುನಾವಣಾ ಚಿಹ್ನೆ ‘ಉರಿಯುತ್ತಿರುವ ದೊಂದಿ’ಯು ದೇಶದಲ್ಲಿಯ ನಿರಂಕುಶಾಡಳಿತವನ್ನು ಸುಟ್ಟು ಭಸ್ಮಗೊಳಿಸಲಿದೆ ಎಂದು ಹೇಳಿದರು.

ಪಕ್ಷದ ಚುನಾವಣಾ ಚಿಹ್ನೆಯ ಪ್ರಚಾರಕ್ಕಾಗಿ ಹಾಡೊಂದನ್ನು ಬಿಡುಗಡೆಗೊಳಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾವಿಕಾಸ್ ಅಘಾಡಿ (ಎಂವಿಎ) ಪಕ್ಷಗಳ ಚುನಾವಣಾ ಪ್ರಣಾಳಿಕೆ ಶೀಘ್ರವೇ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು. ಎಂವಿಎ ಶಿವಸೇನೆ(ಯುಬಿಟಿ), ಎನ್ಸಿಪಿ(ಶರಶ್ಚಂದ್ರ ಪವಾರ್) ಮತ್ತು ಕಾಂಗ್ರೆಸ್ ಪಕ್ಷಗಳನ್ನೊಳಗೊಂಡಿದೆ.

ಕಾಂಗ್ರೆಸ್ ಈಗಾಗಲೇ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ಮಹಾರಾಷ್ಟ್ರಕ್ಕೆ ಸಂಬಂಧಿಸಿದ ಅಂಶಗಳನ್ನು ಎಂವಿಎಯ ಜಂಟಿ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು ಎಂದರು.

‘ಉರಿಯುತ್ತಿರುವ ದೊಂದಿ’ ಚಿಹ್ನೆಯು ಮಹಾರಾಷ್ಟ್ರದ ಮೂಲೆಮೂಲೆಯನ್ನೂ ತಲುಪಿದೆ. ಈಗ ಉರಿಯುತ್ತಿರುವ ದೊಂದಿಯು ನಿರಂಕುಶಾಡಳಿತವನ್ನು ಸುಟ್ಟು ಭಸ್ಮಗೊಳಿಸಲಿದೆ ಎಂದು ಮಾಜಿ ಮಖ್ಯಮಂತ್ರಿ ಠಾಕ್ರೆ ಹೇಳಿದರು.

ಚುನಾವಣಾ ಆಯೋಗವು ಕಳೆದ ವರ್ಷ ಚುನಾವಣಾ ಚಿಹ್ನೆ ’ಬಿಲ್ಲು ಮತ್ತು ಬಾಣ ’ ಹಾಗೂ ಮೂಲ ಶಿವಸೇನೆ ಮಾನ್ಯತೆಯನ್ನು ಮುಖ್ಯಮಂತ್ರಿ ಏಕನಾಥ ಶಿಂದೆ ಬಣಕ್ಕೆ ಮತ್ತು ‘ಉರಿಯುತ್ತಿರುವ ದೊಂದಿ’ ಚಿಹ್ನೆಯನ್ನು ಉದ್ಧವ್‌ ನೇತೃತ್ವದ ಬಣಕ್ಕೆ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News