‘ಗುಂಡಿನ ದಾಳಿ’ ಖಂಡಿಸಲು ಭಾರತೀಯ ರಾಯಭಾರಿಯನ್ನು ಕರೆಸಿಕೊಂಡ ಪಾಕ್
ಇಸ್ಲಾಮಾಬಾದ್, ನ. 4: ಪಾಕಿಸ್ತಾನ ಶನಿವಾರ ಭಾರತದ ಉಪ ಹೈಕಮಿಶನರ್ ಜೆ.ಪಿ. ಸಿಂಗ್ರನ್ನು ಕರೆಸಿಕೊಂಡು, ಗಡಿ ನಿಯಂತ್ರಣ ರೇಖೆಯಲ್ಲಿ ‘‘ಭಾರತೀಯ ಪಡೆಗಳು ನಡೆಸುತ್ತಿರುವ ಅಪ್ರಚೋದಿತ ಗುಂಡಿನ ದಾಳಿ’’ಯನ್ನು ಖಂಡಿಸಿತು.
ವಿದೇಶ ಕಚೇರಿ ವಕ್ತಾರ ಮುಹಮ್ಮದ್ ಫೈಝಲ್, ಸಿಂಗ್ರನ್ನು ಕರೆಸಿಕೊಂಡು, ‘‘ಭಾರತೀಯ ಪಡೆಗಳು ನಡೆಸುತ್ತಿರುವ ಅಪ್ರಚೋದಿತ ಯುದ್ಧವಿರಾಮ ಉಲ್ಲಂಘನೆ’’ಯನ್ನು ಖಂಡಿಸಿದರು ಎಂದು ವಿದೇಶ ಕಚೇರಿ ತಿಳಿಸಿದೆ.
ಭಾರತೀಯ ಪಡೆಗಳು ನಡೆಸಿದ ದಾಳಿಯಲ್ಲಿ ಭಿಂಬರ್ ಸೆಕ್ಟರ್ನಲ್ಲಿ 22 ವರ್ಷದ ಓರ್ವ ಮಹಿಳೆ ಮೃತಪಟ್ಟಿದ್ದಾರೆ ಎಂಬುದಾಗಿ ಪಾಕಿಸ್ತಾನ ಹೇಳಿದೆ.
‘‘ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿ ಉದ್ದೇಶಪೂರ್ವಕವಾಗಿ ನಡೆಸುತ್ತಿರುವ ದಾಳಿಗಳು ಖಂಡನಾರ್ಹವಾಗಿದೆ ಹಾಗೂ ಅದು ಮಾನವ ಘನತೆ, ಅಂತಾರಾಷ್ಟ್ರೀಯ ಮಾನವಹಕ್ಕುಗಳು ಮತ್ತು ಮಾನವೀಯ ಕಾನೂನುಗಳಿಗೆ ವಿರುದ್ಧವಾಗಿದೆ’’ ಎಂದು ಫೈಝಲ್ ಹೇಳಿದರು.
ಭಾರತೀಯ ಪಡೆಗಳು 2018ರಲ್ಲಿ 2,312ಕ್ಕೂ ಅಧಿಕ ಭಾರಿ ಯುದ್ಧವಿರಾಮ ಉಲ್ಲಂಘಿಸಿವೆ ಹಾಗೂ ಇದರಿಂದಾಗಿ 35 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.