ಇನ್ನೊಂದು ಸುತ್ತಿನ ಭಯೋತ್ಪಾದಕ ದಾಳಿ: ಪೊಲೀಸರಿಂದ ಎಚ್ಚರಿಕೆ
Update: 2019-04-29 14:59 GMT
ಕೊಲಂಬೊ, ಎ. 29: ಈಸ್ಟರ್ ರವಿವಾರದಂದು ಚರ್ಚ್ಗಳು ಮತ್ತು ಹೊಟೇಲ್ಗಳ ಮೇಲೆ ದಾಳಿ ನಡೆಸಿದ ಭಯೋತ್ಪಾದಕ ಗುಂಪುಗಳು ಇನ್ನೊಂದು ಸುತ್ತು ದಾಳಿಗಳನ್ನು ನಡೆಸಬಹುದಾಗಿದೆ ಹಾಗೂ ಈ ಬಾರಿ ಅವರು ಸೇನಾ ಸಮವಸ್ತ್ರ ಧರಿಸಿ ದಾಳಿ ನಡೆಸಬಹುದು ಎಂದು ಶ್ರೀಲಂಕಾದ ಭದ್ರತಾ ಪಡೆಗಳು ಸೋಮವಾರ ಎಚ್ಚರಿಸಿವೆ.
ರವಿವಾರ ಅಥವಾ ಸೋಮವಾರ ಐದು ಸ್ಥಳಗಳ ಮೇಲೆ ದಾಳಿ ನಡೆಸಲು ಭಯೋತ್ಪಾದಕರು ಸಂಚು ರೂಪಿಸಿದ್ದಾರೆ ಎಂದು ಅವು ಹೇಳಿವೆ.
‘‘ಇನ್ನೊಂದು ಸುತ್ತಿನ ದಾಳಿಗಳು ನಡೆಯುವ ಸಾಧ್ಯತೆಯಿದೆ’’ ಎಂದು ಮಿನಿಸ್ಟೀರಿಯಲ್ ಸೆಕ್ಯುರಿಟಿ ವಿಭಾಗದ ಮುಖ್ಯಸ್ಥರು ಸಂಸದರು ಮತ್ತು ಅಧಿಕಾರಿಗಳಿಗೆ ಬರೆದ ಪತ್ರವೊಂದರಲ್ಲಿ ಹೇಳಿದ್ದಾರೆ.
ರವಿವಾರ ಯಾವುದೇ ದಾಳಿ ನಡೆದಿಲ್ಲ ಹಾಗೂ ದೇಶಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ.