ಜೈಶೆ ಮುಹಮ್ಮದ್ ಭಾರತದಲ್ಲಿ ಸಕ್ರಿಯವಾಗಿದೆ: ಒಪ್ಪಿಕೊಂಡ ಇಮ್ರಾನ್
Update: 2019-07-24 15:48 GMT
ವಾಶಿಂಗ್ಟನ್, ಜು. 24: ಪಾಕಿಸ್ತಾನದಲ್ಲಿ ನೆಲೆ ಹೊಂದಿರುವ ಭಯೋತ್ಪಾದಕ ಗುಂಪು ಜೈಶೆ ಮುಹಮ್ಮದ್ ಭಾರತದಲ್ಲಿ ಕಾರ್ಯಾಚರಿಸುತ್ತಿದೆ ಎಂಬುದನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಒಪ್ಪಿಕೊಂಡಿದ್ದಾರೆ.
ಫೆಬ್ರವರಿ 14ರಂದು ಪುಲ್ವಾಮ ಭಯೋತ್ಪಾದಕ ದಾಳಿ ನಡೆಯುವ ಮೊದಲೇ, ಎಲ್ಲ ಭಯೋತ್ಪಾದಕ ಗುಂಪುಗಳನ್ನು ನಿಶ್ಶಸ್ತ್ರೀಕರಣಗೊಳಿಸಲು ಪಾಕಿಸ್ತಾನ ನಿರ್ಧರಿಸಿತ್ತು ಹಾಗೂ ಎಲ್ಲ ರಾಜಕೀಯ ಪಕ್ಷಗಳು ಅದನ್ನು ಬೆಂಬಲಿಸಿದ್ದವು ಎಂದು ಅವರು ಹೇಳಿದ್ದಾರೆ.
ಸಿಆರ್ಪಿಎಫ್ ವಾಹನಗಳ ಸಾಲಿನ ಮೇಲೆ ಆತ್ಮಹತ್ಯಾ ಬಾಂಬರ್ ಒಬ್ಬ ನಡೆಸಿದ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿರುವುದನ್ನು ಸ್ಮರಿಸಬಹುದಾಗಿದೆ.
ದಾಳಿಯ ಹೊಣೆಯನ್ನು ಜೈಶೆ ಮುಹಮ್ಮದ್ ವಹಿಸಿಕೊಂಡಿದೆ.
ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಬಂಧದಲ್ಲಿ ಸುಧಾರಣೆಯಾದಾಗಲೆಲ್ಲ, ಇಂಥ ಘಟನೆಗಳು ನಡೆಯುತ್ತವೆ ಹಾಗೂ ಆಗಿರುವ ಸುಧಾರಣೆ ನಷ್ಟವಾಗುತ್ತದೆ ಎಂದು ಇಮ್ರಾನ್ ಹೇಳಿಕೊಂಡರು. ಆದರೆ, ಇದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ಅವರು ಹೇಳಲಿಲ್ಲ.