ಕೆನಡಾ |ಇಂದಿರಾಗಾಂಧಿ ಹತ್ಯೆಯ ಟ್ಯಾಬ್ಲೊ ಪ್ರದರ್ಶಿಸಿದ ಖಾಲಿಸ್ತಾನ್ ಗುಂಪು
ಒಟ್ಟಾವ : ಗುರುವಾರ ಕೆನಡಾದ ವ್ಯಾಂಕೋವರ್ನಲ್ಲಿ ಭಾರತದ ಕಾನ್ಸುಲೇಟ್ ಕಚೇರಿಯ ಹೊರಗಡೆ ಖಾಲಿಸ್ತಾನ್ ಪ್ರತ್ಯೇಕತಾವಾದಿಗಳ ಗುಂಪು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯನ್ನು ಬಿಂಬಿಸುವ ಟ್ಯಾಬ್ಲೊ ಪ್ರದರ್ಶಿಸಿರುವುದಾಗಿ ವರದಿಯಾಗಿದೆ.
ಪಂಜಾಬ್ನಲ್ಲಿರುವ ಸ್ವರ್ಣಮಂದಿರದಲ್ಲಿ ಅವಿತಿದ್ದ ಖಾಲಿಸ್ತಾನ್ ಪ್ರತ್ಯೇಕತಾವಾದಿಗಳ ವಿರುದ್ಧ ನಡೆದಿದ್ದ ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯ 40ನೇ ವಾರ್ಷಿಕ ದಿನದಂದು ವ್ಯಾಂಕೋವರ್ನಲ್ಲಿ ಖಾಲಿಸ್ತಾನ್ ಪ್ರತ್ಯೇಕತಾವಾದಿಗಳ ಗುಂಪು `ಸಿಖ್ಸ್ ಫಾರ್ ಜಸ್ಟಿಸ್(ಎಸ್ಎಫ್ಜೆ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಂದಿರಾಗಾಂಧಿಯವರನ್ನು ಅವರ ಭದ್ರತಾ ಪಡೆಯ ಸಿಬ್ಬಂದಿ ಹತ್ಯೆ ಮಾಡುವುದನ್ನು ತೋರಿಸುವ ಟ್ಯಾಬ್ಲೊ ಪ್ರದರ್ಶಿಸಲಾಗಿದೆ.
ಇದೇ ರೀತಿಯ ಪ್ರತಿಭಟನೆಯನ್ನು ಟೊರಂಟೊದಲ್ಲಿನ ಭಾರತೀಯ ದೂತಾವಾಸದ ಎದುರೂ ನಡೆಸಲಾಗಿದ್ದು ಭಾರತದ ಧ್ವಜಕ್ಕೆ ಬೆಂಕಿ ಹಚ್ಚಲಾಗಿದೆ ಮತ್ತು ಖಾಲಿಸ್ತಾನ್ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಸ್ಎಫ್ಜೆ ಮುಖಂಡ ಗುರುಪತ್ವಂತ್ ಸಿಂಗ್ ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಉದ್ದೇಶಿಸಿ ಎಚ್ಚರಿಕೆಯನ್ನು ನೀಡಿದ್ದಾನೆ ಎಂದು ವರದಿಯಾಗಿದೆ.