ಕಲಬುರಗಿ | ಕವಲಗಾ ಸರ್ಕಾರಿ ಶಾಲೆಯಲ್ಲಿ ವಜ್ರಮಹೋತ್ಸವದ ಅದ್ಧೂರಿ ಸಂಭ್ರಮ

Update: 2025-03-23 20:02 IST
Photo of Program
  • whatsapp icon

ಕಲಬುರಗಿ : ಆಳಂದ ತಾಲೂಕಿನ ಕವಲಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 75ನೇ ವರ್ಷದ ವಜ್ರಮಹೋತ್ಸವ ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗಿ ಜರುಗಿತು.

ಈ ಸಮಾರಂಭವನ್ನು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಅವರು ಉದ್ಘಾಟಿಸಿ, ಶಾಲೆಯ ಗತಕಾಲದ ನೆನಪುಗಳನ್ನು ಮೆಲುಕು ಹಾಕುತ್ತಾ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದರು.

"ನಾನು ಖಜೂರಿ ಗ್ರಾಮದಲ್ಲಿ ಹುಟ್ಟಿದರೂ, ನನ್ನ ಬಾಲ್ಯ ಜೀವನ ತಾಯಿ ತವರು ಕವಲಗಾದಲ್ಲಿ ಕಳೆದಿದೆ. ಇಲ್ಲಿನ ಗ್ರಾಮದ ಗುರುಗಳು ಮತ್ತು ಹಿರಿಯರ ಮಾರ್ಗದರ್ಶನವೇ ನನ್ನ ಸಾಧನೆಗೆ ಪ್ರೇರಣೆಯಾಗಿದೆ. ಸರ್ಕಾರಿ, ಖಾಸಗಿ ಶಾಲೆಗಳ ಭೇದವಿಲ್ಲದೆ, ಮಕ್ಕಳು ಓದಿನ ಛಲದೊಂದಿಗೆ ಮುನ್ನೆಡೆದರೆ ಯಾವುದೇ ಗುರಿಯನ್ನು ಸಾಧಿಸಬಹುದು. ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ, ಅವರ ಭವಿಷ್ಯವನ್ನು ರೂಪಿಸುವಲ್ಲಿ ಶ್ರಮಿಸಬೇಕು," ಎಂದು ಸಲಹೆ ನೀಡಿದ ಅವರು, ಶಿಕ್ಷಣವು ಜೀವನದಲ್ಲಿ ಯಶಸ್ಸಿಗೆ ಮೂಲಾಧಾರವಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೂ ಉತ್ತಮ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಸಮಾಜದ ಪಾತ್ರವನ್ನು ಶ್ಲಾಘಿಸಿದರು.

ಶಿಕ್ಷಣದ ಅವಶ್ಯಕತೆಯ ಮೇಲೆ ಒತ್ತು :

ವೇದಿಕೆಯಲ್ಲಿ ಭಾವಚಿತ್ರ ಪೂಜೆ ನೆರವೇರಿಸಿದ ಶಾಲಾ ಶಿಕ್ಷಣ ಆಡಳಿತ ಜಿಲ್ಲಾ ಉಪ ನಿರ್ದೇಶಕ ಸೂರ್ಯಕಾಂತ ಮದಾನೆ ಅವರು ಮಾತನಾಡಿ, "ಇಂದಿನ ಯುಗದಲ್ಲಿ ಯಾವುದೇ ಕಾರ್ಯ ಸಾಧನೆಗೆ ಶಿಕ್ಷಣ ಅತ್ಯಗತ್ಯ. ಪಾಲಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವುದರ ಜೊತೆಗೆ, ಶಾಲೆಯ ಅಭಿವೃದ್ಧಿಗೆ ಗ್ರಾಮಸ್ಥರೂ ಕೈ ಜೋಡಿಸಬೇಕು. ಶಿಕ್ಷಣ ಇಲಾಖೆಯಿಂದ ಶಾಲೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ಶಿಕ್ಷಕರು ಪ್ರಾಮಾಣಿಕವಾಗಿ, ಉತ್ತಮ ರೀತಿಯಲ್ಲಿ ಮಕ್ಕಳಿಗೆ ಬೋಧಿಸುವ ಜವಾಬ್ದಾರಿಯನ್ನು ಸಮರ್ಪಣೆಯಿಂದ ನಿಭಾಯಿಸಬೇಕು," ಎಂಬ ಸಲಹೆ ನೀಡಿ, ಶಿಕ್ಷಣದ ಗುಣಮಟ್ಟವನ್ನು ಉನ್ನತೀಕರಿಸುವಲ್ಲಿ ಸಮುದಾಯದ ಸಹಭಾಗಿತ್ವದ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.

ಪ್ರಾಥಮಿಕ ಶಿಕ್ಷಣದ ಮಹತ್ವ :

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಕಲಬುರಗಿ ದಿಶಾ ಪಿಯು ಕಾಲೇಜು ಅಧ್ಯಕ್ಷ ಶಿವಾನಂದ ಖಜೂರಿ ಅವರು, "ಪ್ರಾಥಮಿಕ ಶಿಕ್ಷಣವೇ ಶೈಕ್ಷಣಿಕ ಉನ್ನತಿಯ ಆಧಾರ ಸ್ತಂಭ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳನ್ನು ಸಜ್ಜುಗೊಳಿಸಲು ಆರಂಭದ ಹಂತದಲ್ಲೇ ಸೂಕ್ತ ತಯಾರಿ ಅಗತ್ಯ. ಶಿಕ್ಷಕರು ಮತ್ತು ಪಾಲಕರು ಒಟ್ಟಾಗಿ ಈ ಜವಾಬ್ದಾರಿಯನ್ನು ನಿಭಾಯಿಸಬೇಕು," ಎಂದು ಹೇಳಿದರು.

ಸ್ಪರ್ಧಾತ್ಮಕ ಪರೀಕ್ಷೆಗಳ ಸವಾಲುಗಳನ್ನು ಎದುರಿಸಲು ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಕೌಶಲ್ಯವನ್ನು ಬೆಳೆಸುವ ಅಗತ್ಯತೆಯನ್ನು ಅವರು ಒತ್ತಾಯಿಸಿದರು.

ಗ್ರಾಮೀಣ ಶಿಕ್ಷಣದ ಗತ ವೈಭವ :

ರಾಜ್ಯ ಸರ್ಕಾರಿ ನೌಕರ ತಾಲೂಕು ಸಂಘದ ನಿರ್ದೇಶಕ ಶಾಂತಪ್ಪ ಕೆ.ಜಕ್ಕಾಣಿ ಅವರು, ಶಾಲೆಯ ಗತಕಾಲದ ಶೈಕ್ಷಣಿಕ ಗುಣಮಟ್ಟವನ್ನು ಸ್ಮರಿಸುತ್ತಾ, "ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಉತ್ತಮ ಬೋಧನೆಯಿಂದಾಗಿ ಅನೇಕ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಇಂದಿನ ವಿದ್ಯಾರ್ಥಿಗಳೂ ತಮ್ಮ ಶ್ರಮ ಮತ್ತು ಸಮರ್ಪಣೆಯೊಂದಿಗೆ ಶಿಕ್ಷಣದ ಗುರಿಗಳನ್ನು ಸಾಧಿಸಬೇಕು," ಗ್ರಾಮೀಣ ಶಿಕ್ಷಣದ ಪುನರುತ್ಥಾನಕ್ಕೆ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು. ಈ ವಜ್ರಮಹೋತ್ಸವವು ಕವಲಗಾ ಗ್ರಾಮದ ಶೈಕ್ಷಣಿಕ ಪರಂಪರೆಯನ್ನು ಆಚರಿಸುವುದರ ಜೊತೆಗೆ, ಭವಿಷ್ಯದಲ್ಲಿ ಶಿಕ್ಷಣದ ಮೂಲಕ ಗ್ರಾಮದ ಅಭಿವೃದ್ಧಿಗೆ ಪ್ರೇರಣೆಯಾಗಿ ನಿಲ್ಲುವ ಭರವಸೆಯನ್ನು ಮೂಡಿಸಿದೆ ಎಂದರು.

ಗ್ರಾಪಂ ಅಧ್ಯಕ್ಷ ಮಲ್ಲಿನಾಥ ಅಮರೆ, ಉಪಾಧ್ಯಕ್ಷೆ ಪುಷ್ಪಾವತಿ ಬಿ.ಕಾಂಬಳೆ, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಮಲಿಂಗ ಖಂಡಾಳ, ಪಿಡಿಒ ಶರಣಬಸಪ್ಪ ಕಡಗಂಚಿ, ಶಾಲೆಯ ಮುಖ್ಯ ಶಿಕ್ಷಕ ಶಿವುಪುತ್ರಪ್ಪ ಎಸ್.ನಾಯಿಕೋಡಿ ಮತ್ತು ಗ್ರಾಪಂ ಸದಸ್ಯ ಪ್ರಕಾಶ ಮಾಂಗ್, ಮಹಾದೇವಪ್ಪ ಹಡಪದ, ಸಾಗರ ಕುಲಕರ್ಣಿ, ಗ್ರಾಮದ ಮುಖಂಡರಾದ ಸಿದ್ಧರಾಮ ನಾಯಿಕೋಡಿ, ಅಣ್ಣಾರಾವ್ ಮಾಲೀಪಾಟೀಲ, ಅಣ್ಣಾರಾವ್ ನಿಂಬಾಳ ಸೇರಿದಂತೆ ಗ್ರಾಮಸ್ಥರು ಮತ್ತು ಶಾಲಾ ವಿದ್ಯಾರ್ಥಿಗಳು ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಶಿಕ್ಷಕಿ ವಿಜಯಲಕ್ಷ್ಮಿ ದೇವಂತಗಿ ಸ್ವಾಗತಿಸಿದರು, ಶಿವರಾಜ ಖಂಡಾಳೆ ನಿರೂಪಿಸಿದರು. ಸಂಧ್ಯಾ ಬನಸೋಡೆ ವಂದಿಸಿದರು.

ಈ ವೇಳೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಶಾಲೆಯ ಸಾಧನೆಯನ್ನು ಪ್ರದರ್ಶಿಸುವ ಕಾರ್ಯಕ್ರಮಗಳು ಗಮನ ಸೆಳೆದವು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News