ಕಲಬುರಗಿ | ಏ.23 ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ : ವಿಜಯಕುಮಾರ್ ಆಡಕಿ

ಕಲಬುರಗಿ : ಏ. 23 ರಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಸ್ವಾಭಿಮಾನ ಸರ್ವ ಧರ್ಮ ಸಮನ್ವಯ ಸಮಿತಿ ನೇತೃತ್ವದಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು ಎಂದು ಸ್ವಾಭಿಮಾನ ಸರ್ವ ಧರ್ಮ ಸಮನ್ವಯ ಸಮಿತಿ ಉಸ್ತುವಾರಿ ವಿಜಯಕುಮಾರ್ ಆಡಕಿ ಹೇಳಿದರು.
ಸೇಡಂ ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದಂತೆ ಈ ವರ್ಷವೂ ಸಹ ಸರ್ವ ಧರ್ಮ ಜನಾಂಗದವರು ಒಂದುಗೂಡಿ ಸೇಡಂ ಪಟ್ಟಣದಲ್ಲಿ ಹಬ್ಬದ ವಾತಾವರಣದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಅತಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದ್ದು, ತಾಲೂಕಿನ ಪ್ರತಿಯೊಂದು ಗ್ರಾಮಗಳಿಂದ ಯುವಕರು, ಮಹಿಳೆಯರು ಮತ್ತು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಎಂದು ಮನವಿ ಮಾಡಿದ್ದಾರೆ.
ಪ್ರತಿ ವರ್ಷ ಸರ್ವ ಜನಾಂಗದವರು ಸೇರಿ ಒಂದೇ ಜಾತಿಗೆ ಸಿಮಿತ ಇಲ್ಲದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಿ ರಾಜ್ಯದ ಜನತೆಗೆ ಅರಿವು ಮೂಡಿಸಲು ಈ ಜಯಂತಿ ಆಚರಣೆ ಮೂಲಕ ಒಂದು ಗೂಡಿಸುವ ಉದ್ದೇಶಕ್ಕೆ ಮಾಡಲಾಗುತ್ತಿದೆ ಎಂದರು.
ಸ್ವಾಭಿಮಾನ ಸರ್ವ ಧರ್ಮ ಸಮನ್ವಯ ಸಮಿತಿಯ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ ಸಿಂದೆ ಮಾತನಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಒಂದೇ ಜಾತಿಗೆ ಸಿಮಿತ ಇಲ್ಲದೆ ಸರ್ವ ಜನಾಂಗದವರು ಕೂಡಿಕೊಂಡು, ಅಂಬೇಡ್ಕರ್ ಅವರೇ ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಜಾಗ್ರತರಾಗಲು ಜಯಂತಿ ಆಚರಿಸುತ್ತಿದ್ದೇವೆ ಎಂದರು.
ಅಂದು ಬೆಳಿಗ್ಗೆ 10 ಗಂಟೆ ಸೇಡಂ ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಸರತಿ ಸಾಲಿನಲ್ಲಿ ನೂರಾರು ಅಟೋ ಹಾಗೂ ಬೈಕ್ ರ್ಯಾಲಿ ನಡೆಯಲಿದೆ, ತದನಂತರ ಶ್ರೀ ಕೋತ್ತಲ ಬಸವೇಶ್ವರ ದೇವಾಲಯದಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಸಾರೋಟದಲ್ಲಿ ಚೌರಸ್ತಾ, ಕಿರಣಾ ಬಜಾರ್ ಮಾರ್ಗವಾಗಿ ಭವ್ಯ ಮೆರವಣಿಗೆ ಮೂಲಕ ಅಂಬೇಡ್ಕರ್ ಪುತ್ಥಳಿ ಅನಾವರಣದ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮನ್ವಯ ಸಮಿತಿ ನೂತನ ಅಧ್ಯಕ್ಷರಾದ ಪ್ರಕಾಶ್ ಅನ್ನರ, ಸುನೀಲ್ ಹಳ್ಳಿ ಸಂಯೋಜಕರು, ವಿಶ್ವರಾಧ್ಯ ಮಾದವರ, ರವಿಕುಮಾರ ನಾಯಕ ಸೇರಿದಂತೆ ಸ್ವಾಗತ ಸಮಿತಿ ಸದಸ್ಯರು ಹಾಜರಿದ್ದರು.